ಹುಳಿಯಾರು :
ಇದ್ದಕ್ಕಿದ್ದಂತೆ ಕೊರೊನಾ ಸೋಂಕು ಹೆಚ್ಚಾಗಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿರುವ ಹುಳಿಯಾರು ಹೋಬಳಿಯ ಸಿಂಗಾಪುರದಲ್ಲಿ ಮಂಗಳವಾರ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಆದರೆ ಇವರಿಗೆ ಕೊರೋನಾ ಸೋಂಕು ಇರಲಿಲ್ಲ ಎಂಬುದು ಸಮಾಧಾನಕರವಾದ ವಿಷಯವಾಗಿದೆ.
ಕಳೆದ ವಾರದಲ್ಲಿ ನಾಲ್ವರು ಸಾವನ್ನಪ್ಪಿ, ಮೂವತ್ತಕ್ಕೂ ಹೆಚ್ಚು ಮಂದಿ ಸೋಂಕಿತರು ಪತ್ತೆಯಾಗುವ ಮೂಲಕ ಗ್ರಾಮವು ರಾಜ್ಯದ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತ ತಾಲೂಕು ಆಡಳಿತ ಸಿಂಗಾಪುರ ಗ್ರಾಮವನ್ನು ಲಾಕ್ಡೌನ್ ಮಾಡಿ ಗ್ರಾಮದ ನಿವಾಸಿಗಳ ತಪಾಸಣೆಗೆ ಮುಂದಾಗಿತ್ತು. ಅಲ್ಲದೆ ಗ್ರಾಮದ ಎಲ್ಲಾ ದಿಕ್ಕೂಗಳಲ್ಲೂ ಟ್ರಂಚ್ ತೆಗೆದು ಜನರ ಓಡಾಟವನ್ನು ತಡೆಯಲಾಗಿದೆ.
ಇಲ್ಲಿಯವರೆವಿಗೂ 450 ಮಂದಿ ತಪಾಸಣೆ ಮಾಡಿದ್ದು 62 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಇವರೆಲ್ಲರನ್ನು ಮೇಲನಹಳ್ಳಿಯ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲಾಗಿದೆ. ಅಲ್ಲದೆ 500 ಮಂದಿಗೆ ಕೊರೋನಾ ಲಸಿಕೆ ಸಹ ಕೊಡಲಾಗಿದೆ.
ಇಷ್ಟಲ್ಲಾ ಮುನ್ನೆಚ್ಚರಿಗೆ ವಹಿಸಿದ್ದರೂ ಗ್ರಾಮದ ವಯೋವೃದ್ಧರೊಬ್ಬರು ಮಂಗಳವಾರ ಸಾವನ್ನಪ್ಪಿದ್ದು ಇದರಿಂದ ಗ್ರಾಮದ ಜನ ಸೇರಿದಂತೆ ಆರೋಗ್ಯ ಇಲಾಖೆ ಸಹ ಆತಂಕ್ಕೀಡಾಗಿತ್ತು. ತಕ್ಷಣ ಮೃತರ ಮರಣೋತ್ತರ ಕೋವಿಡ್ ಪರೀಕ್ಷೆ ಮಾಡಲಾಯಿತು. ಆದರೆ ಇವರಿಗೆ ಕೋವಿಡ್ ಬಂದಿರಲಿಲ್ಲ. ಹಾಗಾಗಿ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಗ್ರಾಮಕ್ಕೆ ಯಳನಾಡು ಗ್ರಾಮ ಪಂಚಾಯ್ತಿಯಿಂದ ನಿತ್ಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಡಿಸಿ ಅವರ ಸೂಚನೆಯ ಮೇರೆಗೆ ಶುದ್ಧ ನೀರಿನ ಘಟಕ ದುರಸ್ಥಿ ಮಾಡಲಾಗುತ್ತಿದೆ. ಅಂತರ ಕಾಪಾಡಿಕೊಂಡು ಹೈನುಗಾರರು ಡೈರಿಗೆ ಹಾಲು ಹಾಕುತ್ತಿದ್ದಾರೆ. ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
