ಹುಳಿಯಾರು :
ಹುಳಿಯಾರಿನ ಹೃದಯ ಭಾಗದಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಆವರಣದಲ್ಲಿ ಕುಡುಕರ ಹಾವಳಿ ತಪ್ಪಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನೆಮ್ಮದಿಯ ಓಡಾಟಕೆ ಅನುವು ಮಾಡಿಕೊಡುವಂತೆ ಕಾಮಶೆಟ್ಟಿಪಾಳ್ಯದ ಚನ್ನಬಸವಯ್ಯ ಮನವಿ ಮಾಡಿದ್ದಾರೆ.
ಕೊರೊನಾದಿಂದಾಗಿ ಕಳೆದ ಎಂಟತ್ತು ತಿಂಗಳಿಂದ ಶಾಲೆ ಬಾಗಿಲು ತೆರೆದಿಲ್ಲ. ಇದನ್ನೇ ನೆಪ ಮಾಡಿಕೊಂಡಿರುವ ಕೆಲ ಕಿಡಿಕೇಡಿಗಳು ಸಂಜೆ ನಂತರ ಶಾಲಾ ಮೈದಾನದಲ್ಲಿ ಕುಳಿತು ಮದ್ಯಪಾನ ಮಾಡುತ್ತಾರೆ. ನಂತರ ಖಾಲಿ ಬಾಟಲಿಗಳು, ಸಾಚೆಟ್ಗಳು, ಗುಟುಕದ ಕವರ್ಗಳು, ಬೀಡಿ ಸೀಗರೇಟಿನ ತುಂಡುಗಳನ್ನು ಶಾಲೆಯ ಆವರಣದಲ್ಲಿ ಬಿದ್ದಿವೆ. ಶಾಲೆಗೆ ಬರುವ ಶಿಕ್ಷಕರು ಹಾಗೂ ಇಲ್ಲಿ ಓಡಾಡುವಂತಹ ಜನರಿಗೆ ಕಿರಿಕಿರಿಯಾಗುತ್ತದೆ.
ಬೆಳಗ್ಗೆ ಮತ್ತು ಸಂಜೆ ಮಕ್ಕಳು ಆಡಲಿಕ್ಕೆ ಈ ಮೈದಾನಕ್ಕೆ ಬರುತ್ತಾರೆ. ವೃದ್ಧರು, ಮಹಿಳೆಯರು ಬೆಳಗ್ಗೆ, ಸಂಜೆ ವಾಯು ವಿಹಾರಕ್ಕೆ ಬರುತ್ತಾರೆ. ಶಾಲಾ ಮೈದಾನದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು, ಗುಟುಕದ ಪಾಕೇಟ್ಗಳು ಇವರ ನೆಮ್ಮದಿಯ ವಾಯವಿಹಾರಕೆ ಭಂಗ ತಂದಿದೆ. ಹಾಗಾಗಿ ವಾಯು ವಿಹಾರಕ್ಕೆ ಹೋಗುವುದನ್ನೇ ಕೆಲವರು ಬಿಟ್ಟಿದ್ದಾರೆ ಎಂದು ಸಮಸ್ಯೆ ವಿವರಿಸಿದ್ದಾರೆ.
ಈ ಮೈದಾನದಲ್ಲಿ ರಾತ್ರಿ ಹೊತ್ತು ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು. ಶಾಲಾ ಅವರಣದಲ್ಲಿ ಕಿಡಿಗೇಡಿಗಳ ಪ್ರವೇಶ ನಿರ್ಬಂಧಿಸಬೇಕು. ಪೊಲೀಸ್ ಠಾಣೆಯ ಮುಂಭಾಗವೇ ಮೈದಾನವಿದ್ದರೂ ಪೊಲೀಸರು ರಾತ್ರಿ ಬೀಟ್ ಬರುತ್ತಿಲ್ಲ. ಪರಿಣಾಮ ಕತ್ತಲು ಮತ್ತು ಕೇಳುವವರಾರು ಇಲ್ಲದಿರುವುದು ಕುಡುಕರಿಗೆ ವರವಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
