ಹುಳಿಯಾರು:
ಹುಳಿಯಾರು ಹೋಬಳಿಯಲ್ಲಿ ಪೂರ್ವ ಮುಂಗಾರು ಮಳೆ ಚುರುಕು ಪಡೆದಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಮುಂಗಾರು ಹಂಗಾಮು ಬಿತ್ತನೆಗೆ ರೈತರು ಭೂಮಿ ಸಜ್ಜುಗೊಳಿಸುವ ಹಾಗೂ ಬೀಜ ಬಿತ್ತುವ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ತಾಲ್ಲೂಕಿನ ಹಿಂಗಾರು ಬೆಳೆಗಳ ಕೊಯ್ಲು ಮುಗಿಯುವ ಹೊತ್ತಿಗೆ ಕೊರೊನಾ ಕರಿನೆರಳಿನಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈಗ ಭರಣಿ ಮತ್ತು ಕೃತಿಕಾ ಮಳೆ ಉತ್ತಮವಾಗಿ ಸುರಿದಿದ್ದು ರೈತರ ಹಾಗೂ ಕೃಷಿ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಒಂದೆರಡು ದಿನಗಳ ಕಾಲ ಭರಣಿ ಮಳೆ ಬಿದ್ದ ಪರಿಣಾಮ ಹೋಬಳಿಯ ರೈತರು ಹೊಲಗಳಲ್ಲಿ ಕಳೆ, ಕಸ ಕಡ್ಡಿ ತೆರವುಗೊಳಿಸುತ್ತಿದ್ದರು. ನಂತರ ಟ್ರ್ಯಾಕ್ಟರ್ ಮೂಲಕ ಮಡಿಕೆ ಒಡೆದು ಮುಂಗಾರು ಬಿತ್ತನೆಗೆ ಭೂಮಿ ಹದಗೊಳಿಸಿ ಕೃತಿಕಾ ಮಳೆಗೆ ಎದುರು ನೋಡುತ್ತಿದ್ದರು.
ಕೃತಿಕಾ ಮಳೆ ಹುಟ್ಟಿ ಎರಡನೇ ದಿನಕ್ಕೇ ರೈತರ ಕೈ ಹಿಡಿಯಿತು. ಆರಂಭದಲ್ಲಿಯೇ ಹೋಬಳಿಯಲ್ಲಿ ಉತ್ತಮ ಮಳೆಯಾಗುವ ಮೂಲಕ ಪೂರ್ವ ಮುಂಗಾರು ಕೈ ಹಿಡಿಯುವ ಭರವಸೆಯನ್ನು ರೈತರಲ್ಲಿ ಮೂಡಿಸಿತು. ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು, ಅಲಸಂದೆ ಖರೀಧಿಸಿ ರೈತರು ಕೃಷಿ ಕಡೆ ಮುಖ ಮಾಡಿರುವುದು ಇದಕ್ಕೆ ನಿದರ್ಶನವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ