ತುಮಕೂರು:
ನಗರದಲ್ಲಿ ಸ್ಮಾರ್ಟ್ಸಿಟಿ ಹಾಗೂ ವಿವಿಧ ಯೋಜನೆಗಳ ಅಡಿಯಲ್ಲಿ ನಡೆಯುತ್ತಿರುವ ಯುಜಿಡಿ, 24*7 ಕುಡಿಯುವ ನೀರು ಹಾಗೂ ಇನ್ನಿತರ ಕಾಮಗಾರಿಗಳಾಗಿ ಆಗೆದಿರುವ ರಸ್ತೆಯನ್ನು ಶೀಘ್ರವೇ ವೈಜ್ಞಾನಿಕ ರೀತಿಯಲ್ಲಿ ಮುಚ್ಚುವಂತೆ ಅಧಿಕಾರಿಗಳಿಗೆ ಮೇಯರ್ ಶ್ರೀಮತಿ ಫರೀಧಾ ಬೇಗಂ ತಾಕೀತು ಮಾಡಿದರು.
ನಗರದ 15ನೇ ವಾರ್ಡಿಗೆ ಸೇರಿದ ಸೋಮೇಶ್ವರಂ 9ನೇ ಕ್ರಾಸ್ನಲ್ಲಿ ಯುಜಿಡಿಗಾಗಿ ಅಗದೆ ರಸ್ತೆಯನ್ನು ಎರಡು ತಿಂಗಳಾದರೂ ಸಮರ್ಪಕವಾಗಿ ಮುಚ್ಚದ ಕಾರಣ, ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿದ್ದು, ಈ ಕುರಿತು ಸಾರ್ವಜನಿಕರು ಹಾಗೂ ಸ್ಥಳೀಯ ಕಾರ್ಪೋರೇಟರ್ ಅವರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ವೇಳೆ ಸೂಚನೆ ನೀಡಿದ ಅವರು,ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಸಲು ಸೂಚಿಸಿದರು.
ನಗರದ 27,26 ಹಾಗೂ 15ನೇ ವಾರ್ಡಿನ ಮೂಲಕ ಹಾದು ಹೋಗುವ ದೊಡ್ಡ ಚರಂಡಿಯನ್ನು ಶುಚ್ಚಿಗೊಳಿಸಿ ಸ್ಲಾಬ್ ಮುಚ್ಚಿಸುವ ಕಾಮಗಾರಿಯನ್ನು ಅಮೃತ ಯೋಜನೆಯಲ್ಲಿ ಕೈಗೆತ್ತಿಕೊಂಡು ನಿಲ್ಲಿಸಲಾಗಿದೆ.ಈ ಬಗ್ಗೆ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಸ್ಪಷ್ಟಪಡಿಸಿದರು.
ಯುಜಿಡಿಗಾಗಿ ಅಗೆದಿರುವ ರಸ್ತೆಯನ್ನು ಎರಡು ತಿಂಗಳಾದರೂ ಮುಚ್ಚಿಲ್ಲ.ಇದರಿಂದ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಹಾದು ಹೋಗಲು ಆಗುತ್ತಿಲ್ಲ.ಕೆಲವರು ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಕೂಡಲೇ ಸರಿಪಡಿಸಬೇಕು ಎಂದು ಮೇಯರ್ ಹಾಗೂ ಪಾಲಿಕೆ ಸದಸ್ಯರಿಗೆ ಸಾರ್ವಜನಿಕರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ 15ನೇ ವಾರ್ಡಿನ ಸದಸ್ಯೆ ಶ್ರೀಮತಿ ಗಿರಿಜಾ ಧನಿಯಕುಮಾರ್,ಯುಜಿಡಿಗಾಗಿ ಆಗೆದಿರುವ ರಸ್ತೆಯನ್ನು ಮುಚ್ಚಿಲ್ಲದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಮೇಯರ್ ಜೊತೆಗೆ ಇಲ್ಲಿಗೆ ಆಗಮಿಸಿ ಸಾರ್ವಜನಿಕರ ದೂರುಗಳನ್ನು ಆಲಿಸಿದ್ದು,ಮೇಯರ್ ಅವರು ಒಂದೆರಡು ದಿನಗಳಲ್ಲಿ ಸರಿಪಡಿಸಿಕೊಡುವ ಭರವಸೆ ನೀಡಿದ್ದಾರೆ.
ಇದರ ಜೊತೆಗೆ 27ನೇ ವಾರ್ಡಿನಿಂದ ಆರಂಭವಾಗಿ ಭದ್ರಮ್ಮ ಛತ್ರದ ಬಳಿ ಮುಕ್ತಾಯವಾಗುವ ದೊಡ್ಡ ಚರಂಡಿಯನ್ನು ಶುಚ್ಚಿಗೊಳಿಸಿ, ಮೇಲ್ಭಾಗದಲ್ಲಿ ಸ್ಲಾಬ್ ಮುಚ್ಚುವಂತೆ ಹಲವು ಬಾರಿ ಮನವಿ ಮಾಡಲಾಗಿದೆ.ನಗರದಲ್ಲಿಯೂ ಕೋರೊನ ಭೀತಿಯಿದ್ದು ಮಳೆ ಬೀಳುವ ಮುನ್ನ ಚರಂಡಿ ಶುಚಿಗೊಳಿಸಿದರೆ ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಬಹುದು.ಹಾಗೆಯೇ 9-10ನೇ ಅಡ್ಡರಸ್ತೆಗಳಲ್ಲಿಯೂ ರಸ್ತೆ ಅಗೆದು ಮುಚ್ಚಿಲ್ಲ.ಈ ಬಗ್ಗೆ ಅಧಿಕಾರಿಗಳು ಗಮನಹರಿಸುವಂತೆ ಒತ್ತಾಯಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
