ಹುಳಿಯಾರು :
ಅಚ್ಚರಿ ಎನ್ನಿಸಿದರೂ ಇದು ಸತ್ಯ. ಲಾಕ್ಡೌನ್ ನಂತರ ಮದ್ಯಪಾನಿಗಳ ಸಂಖ್ಯೆ ಕಡಿಮೆಯಾಗಿದೆಯೊ ಅಥವಾ ಮದ್ಯಪಾನಿಗಳ ಕೈಯಲ್ಲಿ ಹಣವಿಲ್ಲವೋ, ಒಟ್ಟಾರೆ ದಿನದಿಂದ ದಿನಕ್ಕೆ ಮದ್ಯ ವ್ಯಾಪಾರ ಕುಸಿಯುತ್ತಿದೆ.
ಹೌದು, ಲಾಕ್ಡೌನ್ ಸಡಿಲಿಸಿ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಂತೆ ಒಂದೆರಡು ದಿನ ಮದ್ಯ ಖರೀದಿಗೆ ಜನ ಮುಗಿ ಬಿದ್ದಿದ್ದರು. ಜನರ ನೂಕುನುಗ್ಗಲು ಕಂಡ ಅಂಗಡಿ ಮಾಲೀಕರು, ಕೆಲಸಗಾರರು ಸಂಭ್ರಮಿಸಿದ್ದರು. ಆದರೆ ಆರಂಭವಾದ ಒಂದೇ ವಾರಕ್ಕೆ ಮದ್ಯದ ಅಂಗಡಿಗಳತ್ತ ಜನ ಮುಖ ಮಾಡುತ್ತಿಲ್ಲ. ಪರಿಣಾಮ ಹುಳಿಯಾರಿನ ಮದ್ಯದ ಅಂಗಡಿಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ.
ನಿತ್ಯವೂ ಮದ್ಯದಂಗಡಿಗಳ ಮುಂದೆ ಜನಜಾತ್ರೆ ಸೇರಿ ತಳ್ಳಾಟ, ನೂಕಾಟವಾಗುತ್ತದೆಂದು ಭಾವಿಸಿ ಅಂಗಡಿಗಳ ಮುಂದೆ ಬ್ಯಾರಿಕೇಡ್ ಕಟ್ಟಿದ್ದರು. ಅಂತರ ಕಾಯ್ದುಕೊಳ್ಳಲು ಗುರುತು ಮಾಡಿದ್ದರು. ಆದರೆ ಮದ್ಯ ಖರೀದಿಗೆ ಆಗೊಬ್ಬ, ಈಗೊಬ್ಬರು ಮಾತ್ರ ಬರುತ್ತಿದ್ದು ಮದ್ಯದಂಗಡಿ ಮಾಲೀಕರಿಗೆ ಭಾರಿ ನಿರಾಸೆ ಮೂಡಿಸಿದೆ.
ಲಾಕ್ಡೌನ್ ಸಡಿಲಿಸಿದ್ದರೂ ಜನರಿಗೆ ಉದ್ಯೋಗ ಇಲ್ಲದೆ ಕೈಯಲ್ಲಿ ಕಾಸು ಇಲ್ಲದಾಗಿರುವುದು ಮದ್ಯ ಮಾರಾಟ ಕುಸಿತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಇದರ ಜೊತೆಗೆ 45 ದಿನಗಳು ಮದ್ಯ ಸಿಗದೆ ಚಟದಿಂದ ಕೆಲವರು ವಿಮುಖರಾಗಿರುವುದನ್ನು ತಳ್ಳಿಹಾಕುವಂತಿಲ್ಲ. ಒಟ್ಟಿನಲ್ಲಿ ಲಾಕ್ಡೌನ್ ಘೋಷಣೆಗೂ ಮುಂಚೆ ನಡೆಯುತ್ತಿದ್ದ ವ್ಯಾಪಾರಕ್ಕೆ ಹೋಲಿಸಿದರೆ ಅರ್ಧಕ್ಕರ್ಧ ವ್ಯಾಪಾರ ಕಡಿಮೆ ಆಗಿರುವುದಂತು ಸತ್ಯ.
ಸರ್ಕಾರ ಈಗ ಮದ್ಯದ ದರ ಹೆಚ್ಚಿಸಿರುವುದರಿಂದ ಜನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಿಕವಾಗಿ ಸಬಲರಾಗಿರುವವರಷ್ಟೇ ಮದ್ಯ ಖರೀದಿಸುತ್ತಿದ್ದಾರೆ. ಮದ್ಯ ಪಾರ್ಸಲ್ ಕೊಡಲು ಮಾತ್ರ ಅವಕಾಶ ಇರುವುದರಿಂದ ಮದ್ಯ ತೆಗೆದುಕೊಂಡು ಹೋಗಿ ಎಲ್ಲಿ ಕುಡಿಯುವುದು ಎಂಬ ಚಿಂತೆಯಿಂದ ಕೆಲವರು ಮದ್ಯ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಅಂಗಡಿ ಮಾಲೀಕರು.
ಅಬಕಾರಿ ನಿರೀಕ್ಷಕ ಸೋಮಶೇಖರ್ ಅವರೂ ಸಹ ಮಾರಾಟ ಕುಸಿದಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಮುಂದಿನ ವಾರ ಮದ್ಯ ಮಾರಾಟ ಇನ್ನೂ ಕುಸಿಯುವ ಸಾಧ್ಯತೆಯಿದೆ ಎನ್ನುತ್ತಾರೆ. ಒಟ್ಟಾರೆ. ಕೊರೊನಾ ಬಿಕ್ಕಟ್ಟಿನಿಂದ ಮದ್ಯ ಮಾರಾಟ ಗಣನೀಯವಾಗಿ ಕುಸಿದಿದ್ದು, ಇದರಿಂದ ಮದ್ಯ ಮಾರಿ ಬೊಕ್ಕಸ ತುಂಬಿಸುವ ಸರ್ಕಾರದ ಲೆಕ್ಕಾಚಾರ ತಲೆಕೆಳಗಾದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
