ಬೆಂಗಳೂರು:
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಇಂದು ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ನಟ ಶಿವರಾಜ್ ಕುಮಾರ್, ತಮ್ಮ ಪತ್ನಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಸಂಪೂರ್ಣ ಸಹಮತವಿದೆ ಮತ್ತು ಯಾವುದೇ ತಕರಾರು ಇಲ್ಲಾ ಎಂದಿದ್ದಾರೆ.
ನಾಳೆಯಿಂದ ಗೀತಾ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗುತ್ತಿದ್ದಾರೆ, ನಾನು ಕೂಡ ಪತ್ನಿಗೆ ಸಹಕಾರ ನೀಡುತ್ತೇನೆ. ಮಧು ಬಂಗಾರಪ್ಪ ಅವರು ಪ್ರಚಾರದ ಸಮಯ, ಹೋಗಬೇಕಾದ ಸ್ಥಳಗಳ ಬಗ್ಗೆ ನೋಡಿಕೊಳ್ಳುತ್ತಾರೆ, ಚುನಾವಣಾ ತಂತ್ರವನ್ನಿಟ್ಟುಕೊಂಡು ಮುಂದುವರಿಯುತ್ತಾರೆ ಎಂದರು.
ಪ್ರತಿಯೊಬ್ಬರಿಗೂ ಜೀವನದಲ್ಲಿ ತಮ್ಮದೇ ಆದ ತತ್ವ, ಸಿದ್ಧಾಂತಗಳಿರುತ್ತವೆ. ನಮ್ಮ ತಾಯಿಯವರು ತೀರಿಹೋದಮೇಲೆ ಮೈಸೂರಿನ ಶಕ್ತಿಧಾಮ ಶಾಲೆಗೆ ಬಹಳ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಮಕ್ಕಳ ಉದ್ಧಾರಕ್ಕೆ ದುಡಿಯುತ್ತಿದ್ದಾರೆ. ಮಕ್ಕಳ ಕೌಶಲ್ಯಾಭಿವೃದ್ಧಿಗೆ ಕಳೆದ ಎರಡು ಮೂರು ವರ್ಷಗಳಿಂದ ದುಡಿಯುತ್ತಿದ್ದಾರೆ. ರಾಜಕೀಯ ಪಕ್ಷ ಸೇರಿದಾಗ ಅವರ ಸಮಾಜಮುಖಿ ಕೆಲಸಗಳಿಗೆ ದೊಡ್ಡ ಅವಕಾಶ ಸಿಕ್ಕಿದಂತಾಗುತ್ತದೆ ಎಂದರು.
![](https://prajapragathi.com/wp-content/uploads/2023/04/geetha-shiva-raj-kumar.jpg)