ಮೈಸೂರು:
ನಗರದಲ್ಲಿ ಫೆ. 11ರಂದು ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೂ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಎಲ್ಲ ರೀತಿಯ ಪ್ರತಿಭಟನೆ ಹಾಗೂ ಮೆರವಣಿಗೆಗಳನ್ನು ನಿಷೇಧಿಸಿ ಕಮಿಷನರ್ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
‘ಗೊಮ್ಮಟೇಶ್ವರ ಮೂರ್ತಿ ಕುರಿತು ದಿ ನ್ಯೂ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಯೂಬ್ಖಾನ್ ಅವರು ಅವ
ಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಬೃಹತ್ ಪ್ರತಿಭಟನಾ ಜಾಥಾಗೆ ಕರೆ ನೀಡಿರುವ ಸಂದೇಶ ವೈರಲ್ ಆಗಿರುವುದು ಹಾಗೂ ಹಿಜಾಬ್ ಬೆಂಬಲಿಸಿ ಈದ್ಗಾ ಮೈದಾನದಲ್ಲಿ ಪ್ರತಿಭಟನೆ ನಡೆಯಲಿದೆ ಎಂಬ ವದಂತಿ ಆಧರಿಸಿ ನಿಷೇಧಾಜ್ಞೆ ಹೊರಡಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಮುಸ್ಕಾನ್ಗೆ ಬಹುಮಾನ ಘೋಷಣೆ ಮಾಡಿದ್ದಕ್ಕೆ ದೂರು
ಮಂಡ್ಯ: ‘ಪಿಇಎಸ್ ಕಾಲೇಜು ಆವರಣದಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ಗೆ ಬಹುಮಾನ ಘೋಷಿಸಿದ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ನರೇಂದ್ರ ಮೋದಿ ವಿಚಾರ ಮಂಚ್ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬುಧವಾರ ದೂರು ನೀಡಿದ್ದಾರೆ.
‘ಹಿಜಾಬ್- ಕೇಸರಿ ಶಾಲು ವಿವಾದದ ಹಿಂದೆ ಜಮಾತೆ ಹಿಂದ್ ಸೇರಿ ಹಲವು ಸಂಘಟನೆಗಳ ಕೈವಾಡವಿದೆ. ವಿದ್ಯಾರ್ಥಿನಿಗೆ ಬಹುಮಾನ ನೀಡಲು ವಿದೇಶಿ ಹಣ ಬಳಕೆಯಾಗುತ್ತಿರುವ ಶಂಕೆ ಇದೆ. ಹೀಗಾಗಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ವಿಚಾರ ಮಂಚ್ ಸದಸ್ಯರಾದ ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ, ಶಿವು ಅವರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿನಿಗೆ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ (ಜೆಎಂಸಿಸಿ) ಸಂಘಟನೆಯು ‘ಐಕಾನ್ ಲೇಡಿ ಆಫ್ ಹಿಜಾಬ್’ ಬಿರುದು ಪ್ರದಾನ ಮಾಡಿದ್ದು ಜೊತೆಗೆ ₹ 1 ಲಕ್ಷ ಬಹುಮಾನವನ್ನೂ ನೀಡಿದೆ.
ನಗರದ ಗುತ್ತಲು ಬಡಾವಣೆಯಲ್ಲಿರುವ ವಿದ್ಯಾರ್ಥಿನಿ ಮನೆಗೆ ಬುಧವಾರ ಭೇಟಿ ನೀಡಿದ್ದ ಸಂಘಟನೆ ಅಧ್ಯಕ್ಷ ನೌಷಾದ್ ಪ್ರಶಸ್ತಿ ಪತ್ರ ಹಾಗೂ ಚೆಕ್ ವಿತರಣೆ ಮಾಡಿದರು.
ಜಮಾತೆ ಹಿಂದ್ ಸಂಘಟನೆ ಕೂಡ ₹ 5 ಲಕ್ಷ ಬಹುಮಾನ ಘೋಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಪ್ರಕಟಿಸಿದೆ. ಆದರೆ ಬಹುಮಾನ ವಿದ್ಯಾರ್ಥಿನಿಯ ಕೈಸೇರಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ