ಚೀನಾ ಗಡಿ ವಿವಾದದಿಂದ ವಿಪಕ್ಷಗಳ ಗಮನ ಬೇರೆಡೆ ಸೆಳೆಯುವ ಹುನ್ನಾರ : ಖುರೇಶಿ

ಇಸ್ಲಾಮಾಬಾದ್:

   ಚೀನಾ ಗಡಿ ವಿವಾದದಿಂದ ವಿರೋಧ ಪಕ್ಷಗಳ ಗಮನವನ್ನು ಬೇರೆಡೆಗೆ ಸೆಳೆಯಲು ಭಾರತ ಸರ್ಕಾರ ಪಾಕಿಸ್ತಾನ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂದು ಅಲ್ಲಿನ ವಿದೇಶಾಂಗ ಇಲಾಖೆ ಸಚಿವ ಮಹಮ್ಮೂದ್ ಖುರೇಶಿ ಆರೋಪಿಸಿದ್ದಾರೆ.

    ಜಿಯೊ ಪಾಕಿಸ್ತಾನ ಮಾಧ್ಯಮ ಜೊತೆಗೆ ಮಾತನಾಡಿದ ಅವರು, ಎಲ್ಲರಿಗೂ ಕಾಣುವಂತೆ ಭಾರತ ಸರ್ಕಾದ ಮನಸ್ಥಿತಿ ಸ್ಪಷ್ಟವಾಗಿದೆ. ತನ್ನ ಗಡಿ ವಿವಾದವನ್ನು ಚೀನಾದಿಂದ ಪಾಕಿಸ್ತಾನ ಕಡೆಗೆ ತಿರುಗಿಸಲು ಅದು ಹೊಂಚು ಹಾಕುತ್ತಿದೆ. ಪಾಕಿಸ್ತಾನ ವಿರುದ್ಧ ಸುಳ್ಳು ಧ್ವಜ ಕಾರ್ಯಾಚರಣೆ ನಡೆಸಲು ಭಾರತ ನೆಪ ಹುಡುಕುತ್ತಿದೆ ಎಂದು ಆರೋಪಿಸಿದರು.

    ಆದರೆ ಈ ಬಗ್ಗೆ ಸಾಕ್ಷಿಗಳೇನು ಎಂಬ ಬಗ್ಗೆ ವಿವರ ನೀಡಲಿಲ್ಲ. ಭಾರತದಲ್ಲಿ ವಿರೋಧ ಪಕ್ಷಗಳು ಸರ್ಕಾರವನ್ನು ಪ್ರಶ್ನೆ ಮಾಡುತ್ತಿವೆ. ಅದಕ್ಕೆ ಚೀನಾ ಗಡಿ ಗಲ್ವಾನ್ ನಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ಸರ್ಕಾರದ ಬಳಿ ವಿರೋಧ ಪಕ್ಷಗಳು ಕೇಳುತ್ತಿರುವ ಪ್ರಶ್ನೆಯೇ ಸಾಕ್ಷಿ, ಈ ಬಗ್ಗೆ ಮೋದಿ ಸರ್ಕಾರ ವಿರೋಧ ಪಕ್ಷಗಳಿಂದ ಸಾಕಷ್ಟು ಟೀಕೆಗೆ ಒಳಗಾಗುತ್ತಿದೆ ಎಂದರು.

     ತಮ್ಮ ದೇಶದ ಮೇಲೆ ಯಾವುದೇ ದಾಳಿ ನಡೆಸುವುದಕ್ಕೆ ಮುಂದಾಗುವುದು ಒಳ್ಳೆಯದಲ್ಲ ಎಂದು ಭಾರತ ಸರ್ಕಾರಕ್ಕೆ ಇದೇ ಸಂದರ್ಭದಲ್ಲಿ ಉತ್ತರ ನೀಡಿದ ಅವರು, ಭಾರತ ದಾಳಿ ನಡೆಸಲು ಮುಂದಾದರೆ ಅದನ್ನು ದಿಟ್ಟವಾಗಿ ಎದುರಿಸಲು ಪಾಕಿಸ್ತಾನ ಸಿದ್ದವಿದೆ ಎಂದರು. ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿಗಳು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಭಾರತ ಆಧಾರರಹಿತ ಆರೋಪ ಮಾಡುತ್ತಿದ್ದು ಭಾರತದಲ್ಲಿ ಪಾಕಿಸ್ತಾನ ಸಿಬ್ಬಂದಿಗೆ ತೀವ್ರ ಕಿರುಕುಳ ನೀಡಲಾಗುತ್ತಿದೆ, ಅವರು ಓಡಾಡುವಾಗ ಕಾರುಗಳನ್ನು ಅಧಿಕಾರಿಗಳು ಹಿಂಬಾಲಿಸುತ್ತಾರೆ ಎಂದು ಆಪಾದಿಸಿದರು.

    ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಗಳ ಸಂಖ್ಯೆಯಲ್ಲಿ ಕಡಿತ ಮಾಡಲಾಗುವುದು ಎಂದು ಭಾರತ ಹೇಳಿತ್ತು. ಇದಾದ ಬಳಿಕ ಪಾಕಿಸ್ತಾನ ವಿದೇಶಾಂಗ ಸಚಿವರ ಪ್ರತಿಕ್ರಿಯೆ ಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link