ಕನಕಪುರ:
ತಾಲೂಕಿನ ಅಚ್ಚಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಂಗಾಣಿ ದೊಡ್ಡಿ ಗ್ರಾಮದ ಇಡೀ ಸ್ವತ್ತನ್ನೇ ತಮ್ಮ ಹೆಸರಿಗೆ ಪರಭಾರೆ ಮಾಡಿಕೊಂಡ ಆರೋಪದ ಮೇರೆಗೆ ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಸೇರಿದಂತೆ ಆರು ಮಂದಿಯ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಇಡೀ ಊರನ್ನೇ ಶಾಸಕರು ಖರೀದಿ ಮಾಡಿದ್ದಾರೆಂದು ಗ್ರಾಮಸ್ಥರು ಈಗ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಶಾಸಕ ಇಕ್ಬಾಲ್ ಹುಸೇನ್ ಕನಕಪುರ ತಹಶೀಲ್ದಾರ್ ಮಂಜುನಾಥ್ , ಗ್ರೇಡ್ 2 ತಹಶೀಲ್ದಾರ್ ಶಿವಕುಮಾರ್ , ಶಿರಸ್ತೆದಾರ್ ಜಗದೀಶ್ , ಕಂದಾಯ ನಿರೀಕ್ಷಕ ರಜತ್, ಗ್ರಾಮಲೆಕ್ಕಿಗ ರಮೇಶ್ ಹಾಗೂ ಈ ಹಿಂದೆ ಕನಕಪುರ ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದ ಸ್ಮಿತಾ ರಾಮು ಎಂಬುವರ ವಿರುದ್ಧ ಲೋಕಾದಲ್ಲಿ ದೂರು ದಾಖಲಾಗಿದೆ.
ಕನಕಪುರ ತಾಲೂಕಿನ ಯಡಮಾರನಹಳ್ಳಿ ದಾಖಲೆಯ ಹೊಂಗಣಿದೊಡ್ಡಿ ಗ್ರಾಮದಲ್ಲಿನ ಸುಮಾರು 67 ಎಕರೆ 30 ಗುಂಟೆ ಜಮೀನನ್ನು ಇಕ್ಬಾಲ್ ಹುಸೇನ್ ತಮ್ಮ ಹೆಸರಿಗೆ ಮಾಡಿಕೊಂಡಿದ್ದು, ಗ್ರಾಮಸ್ಥರಲ್ಲಿ ಊರು ಒಕ್ಕಲೆಬ್ಬಿಸುವ ಆತಂಕ ಸೃಷ್ಠಿಯಾಗಿದೆ. ಕಳೆದ 50-60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು, ಜೀವನ ನಡೆಸುತ್ತಿದ್ದ ಇಡೀ ಊರನ್ನೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಖರೀದಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದ 60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ. ಮನೆ ಕಟ್ಟಲು ಜಾಗ ತೆಗೆದುಕೊಂಡಿದ್ದೇವೆ. ಇದೀಗ ಏಕಾಏಕಿ ಬಂದು ಈ ಜಾಗ ನಮ್ಮದು ಎಂದರೆ ಹೇಗೆ, ನಾವು ಈ ಬಗ್ಗೆ ಕೋರ್ಟ್ನಲ್ಲಿ ಕೇಸ್ ಹಾಕಿದ್ದೇವೆ. ಕನಕಪುರದ ಕಂದಾಯ ಅಧಿಕಾರಿಗಳು ಶಾಮೀಲಾಗಿ ಈ ರೀತಿ ಮಾಡಿದ್ದಾರೆ, ಕನಕಪುರ, ಹಾರೋಹಳ್ಳಿಯಲ್ಲಿ ಇದ್ದಂತಹ ಭೂ ನ್ಯಾಯ ಮಂಡಲಿ ನ್ಯಾಯಾಲಯವನ್ನು ಬೇಕಂತಲೇ ಮುಚ್ಚಿಸಿದ್ದಾರೆ. ನಾವು ಬೆಂಗಳೂರಿನ ಭೂ ನ್ಯಾಯ ಮಂಡಲಿಯಲ್ಲಿ ಕೇಸ್ ದಾಖಲಿಸಿದ್ದೇವೆ. ಕೇಸ್ ಇತ್ಯರ್ಥ ಆಗದೇ ಶಾಸಕರು ಹೇಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಾಸಕ ಇಕ್ಬಾಲ್ ಹುಸೇನ್, ನಾನು ಖರೀದಿ ಮಾಡಿದ ಜಮೀನಿನ ಸರ್ವೆನಂಬರ್ ಒಂದರಲ್ಲಿ ಗ್ರಾಮ ಇದೆ. ಆ ಗ್ರಾಮದ ಜನರಿಗೆ ಹಕ್ಕುಪತ್ರ ಇಲ್ಲ. ನಾನು ಖರೀದಿ ಮಾಡಿರುವ ಜಮೀನಿನಲ್ಲಿ ಆ ಗ್ರಾಮ ಇರುವ ಜಾಗವನ್ನು ಜನರಿಗೆ ಬಿಟ್ಟು ಕೊಡುತ್ತೇನೆ. ಈಗಾಗಲೇ ಅಧಿಕಾರಿಗಳಿಗೆ ಹಕ್ಕುಪತ್ರ ಮಾಡಿಕೊಡಲು ಹೇಳಿದ್ದೇನೆ. ಆದರೆ ನನ್ನ ವಿರುದ್ಧದ ಆರೋಪದಲ್ಲಿ ಸತ್ಯವಿಲ್ಲ. ಯಾರೋ ಸಂಘ ಕಟ್ಟಿಕೊಂಡು ಬಂದು ರೋಲ್ ಕಾಲ್ ಮಾಡುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲೇ ತನಿಖೆ ಆಗಲಿ ಎಂದಿದ್ದಾರೆ.
