ಇಸ್ಲಾಮಾಬಾದ್:
ಕಳೆದ ಒಂದು ತಿಂಗಳಿನಿಂದ ತಮ್ಮ ಸಹೋದರನನ್ನು ಭೇಟಿ ಮಾಡಲು ಪಾಕಿಸ್ತಾನ ಸರ್ಕಾರ ಅವಕಾಶ ನೀಡಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೂವರು ಸಹೋದರಿಯರು ಆರೋಪಿಸಿದ್ದಾರೆ. ಈ ನಡುವೆಯೇ ಇಮ್ರಾನ್ ಖಾನ್ ಅವರು ಜೈಲಿನಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇಮ್ರಾನ್ ಖಾನ್ ಅವರನ್ನು ಭೇಟಿಯಾಗಲು ಹೋಗಿದ್ದ ಮೂವರು ಸಹೋದರಿಯರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇಮ್ರಾನ್ ಖಾನ್ ಅವರು ಜೈಲಿನಲ್ಲಿ ನಿಧನರಾಗಿದ್ದಾರೆ ಎನ್ನುವ ವದಂತಿಯ ನಡುವೆ ಅವರನ್ನು ಭೇಟಿಯಾಗಲು ಜೈಲಿಗೆ ತೆರಳಿದ ಮೂವರು ಸಹೋದರಿಯರನ್ನು ಪೊಲೀಸರು ಕ್ರೂರವಾಗಿ ಥಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಖಾನ್ ಅವರ ಸಹೋದರಿಯರಾದ ನೊರೀನ್ ಖಾನ್, ಅಲೀಮಾ ಖಾನ್ ಮತ್ತು ಉಜ್ಮಾ ಖಾನ್, ತಾವು ಸಹೋದರನನ್ನು ಭೇಟಿ ಮಾಡಲು ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿಗರೊಂದಿಗೆ ಹೋಗಿದ್ದಾಗ ಪೊಲೀಸರು ತಮ್ಮ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇಮ್ರಾನ್ ಖಾನ್ ಅವರನ್ನು 2023ರಿಂದ ಅಡಿಯಾಲಾ ಜೈಲಿನಲ್ಲಿ ಇರಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಅವರನ್ನು ಭೇಟಿಯಾಗಲು ತಮಗೆ ಅವಕಾಶ ನೀಡಲಾಗಿಲ್ಲ. ಅವರ ಸಹೋದರಿಯರು ಮತ್ತು ಬೆಂಬಲಿಗರು ಅವರನ್ನು ಭೇಟಿಯಾಗಲೆಂದು ಜೈಲಿನ ಹೊರಗೆ ಕುಳಿತಿದ್ದಾಗ ಪೊಲೀಸ್ ಸಿಬ್ಬಂದಿ ಅವರ ಮೇಲೆ ದಾಳಿ ನಡೆಸಿದ್ದಾರೆ. ಇಮ್ರಾನ್ ಖಾನ್ ನನ್ನು ಭೇಟಿಯಾಗಲು ಪ್ರಯತ್ನಿಸಿದ್ದು ಅಪರಾಧ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಆಗ್ರಹಿಸಿದೆ.
ಈ ಕುರಿತು ಪಂಜಾಬ್ ಪೊಲೀಸ್ ಮುಖ್ಯಸ್ಥ ಉಸ್ಮಾನ್ ಅನ್ವರ್ ಅವರಿಗೆ ಇಮ್ರಾನ್ ಖಾನ್ ಸಹೋದರಿಯರು ಪತ್ರ ಬರೆದಿದ್ದು, ಇದು ಕ್ರೂರ ನಡವಳಿಕೆ. ನಾವು ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೆವು. ನಾವು ರಸ್ತೆಗಳನ್ನು ನಿರ್ಬಂಧಿಸಿಲ್ಲ ಅಥವಾ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿಲ್ಲ. ಯಾವುದೇ ಕಾನೂನುಬಾಹಿರ ನಡವಳಿಕೆ ತೋರಿಸಿಲ್ಲ. ಆದರೂ ಯಾವುದೇ ಎಚ್ಚರಿಕೆ ಅಥವಾ ಪ್ರಚೋದನೆಯಿಲ್ಲದೆ ಆ ಪ್ರದೇಶದಲ್ಲಿನ ಬೀದಿ ದೀಪಗಳನ್ನು ಹಠಾತ್ತನೆ ಸ್ಥಗಿತಗೊಳಿಸಲಾಗಿದೆ. ಉದ್ದೇಶಪೂರ್ವಕವಾಗಿ ಸಂಪೂರ್ಣ ಪ್ರದೇಶವನ್ನು ಕತ್ತಲೆಯಲ್ಲಿ ಮುಳುಗಿಸಲಾಯಿತು. ಬಳಿಕ ಪಂಜಾಬ್ ಪೊಲೀಸ್ ಸಿಬ್ಬಂದಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ನೊರೀನ್ ತಿಳಿಸಿದ್ದಾರೆ.
71 ವಯಸ್ಸಿನವಳಾದ ನನ್ನ ಕೂದಲನ್ನು ಹಿಡಿದು ನೆಲಕ್ಕೆ ಎಸೆದು, ರಸ್ತೆಯುದ್ದಕ್ಕೂ ಎಳೆದುಕೊಂಡು ಹೋಗಿದ್ದಾರೆ. ಜೈಲಿನ ಹೊರಗೆ ಹಾಜರಿದ್ದ ಇತರ ಮಹಿಳೆಯರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಪೊಲೀಸರ ಈ ನಡವಳಿಕೆಯು ಕಳೆದ ಮೂರು ವರ್ಷಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ವಿರುದ್ಧ ನಡೆಸಿರುವ ವಿವೇಚನಾರಹಿತ ಬಲಪ್ರಯೋಗವಾಗಿದೆ ಎಂದು ದೂರಿದ್ದಾರೆ.
ಇದು ಸಂಪೂರ್ಣವಾಗಿ ಕ್ರಿಮಿನಲ್, ಕಾನೂನುಬಾಹಿರ, ನೈತಿಕವಾಗಿ ಖಂಡನೀಯ. ಈ ಕ್ರೂರ ದಾಳಿಯಲ್ಲಿ ಭಾಗಿಯಾಗಿರುವ ಎಲ್ಲಾ ಪೊಲೀಸ್ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಖಾನ್ ಅವರ ಸಹೋದರಿಯರು ಒತ್ತಾಯಿಸಿದ್ದಾರೆ.ಇಮ್ರಾನ್ ಖಾನ್ ಭೇಟಿ ನಿಷೇಧದ ಪ್ರತಿಕ್ರಿಯಿಸಿರುವ ಅವರ ಖಾಲಿದ್ ಯೂಸಫ್ ಚೌಧರಿ, ಇಮ್ರಾನ್ ಖಾನ್ ಅವರು ಸಂಪೂರ್ಣ ಪ್ರತ್ಯೇಕತೆ ಮತ್ತು ಏಕಾಂತ ಬಂಧನದಲ್ಲಿದ್ದಾರೆ. ಪುಸ್ತಕಗಳು, ಅಗತ್ಯ ವಸ್ತುಗಳನ್ನು ಪೂರೈಸಲು ಮಾತ್ರವಲ್ಲ ಅವರ ವಕೀಲರಿಗೂ ಕೂಡ ಅವರನ್ನು ಭೇಟಿ ಮಾಡಲು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.








