ಶಿರಾ:
ಕರ್ನಾಟಕ ರಾಜ್ಯದ ಖಾಸಗಿ ಐಟಿಐ ಸಿಬ್ಬಂದಿಯನ್ನು ವೇತನಾನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಹೊರಟಿರುವ ಪಾದಯಾತ್ರೆಯು ಬುಧವಾರ ಶಿರಾ ತಾಲ್ಲೂಕನ್ನು ಪ್ರವೇಶಿಸಿತು.
ಶಿರಾ ಬೈಪಾಸ್ ರಸ್ತೆಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪಾದಯಾತ್ರಿಗಳ ತಂಡ ಆಗಮಿಸಿದಾಗ ಸ್ಥಳೀಯ ಐ.ಟಿ.ಐ. ಕಾಲೇಜುಗಳ ಸಿಬ್ಬಂದಿ ಪಾದಯಾತ್ರಿಗಳನ್ನು ಬರಮಾಡಿಕೊಂಡರು.
ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಒಕ್ಕೂಟದ ಸಂಚಾಲಕ ಸುರೇಶ್ ಮಾತನಾಡಿ, 1997 ರಲ್ಲಿ 7 ವರ್ಷ ಪೂರೈಸಿದ ಹಾಗೂ 2001 ರಲ್ಲಿ 196 ಖಾಸಗಿ ಐಟಿಐಗಳ ಸಿಬ್ಬಂದಿಯನ್ನು ವೇತನುದಾನಕ್ಕೆ ಒಳಪಡಿಸಿತ್ತು.
ನಂತರ 2011 ರಿಂದ ಸುಮಾರು 8 ಸಾವಿರ ಸಿಬ್ಬಂದಿಯನ್ನು ವೇತನಾನುದಾನಕ್ಕೆ ಒಳಪಡಿಸಿಲ್ಲ. ಈ ಕೂಡಲೇ ಸರಕಾರ ಖಾಸಗಿ ಐಟಿಐ ಸಿಬ್ಬಂದಿಯ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಶಿರಾ ತಾಲ್ಲೂಕಿನ ಖಾಸಗಿ ಐಟಿಐಗಳ ಅಧ್ಯಕ್ಷ ನಾಗೇಶ್ ಮಾತನಾಡಿ, ಖಾಸಗಿ ಐಟಿಐ ಸಿಬ್ಬಂದಿಗಾಗಿ ಹುಬ್ಬಳ್ಳಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಕೈಗೊಂಡಿರುವ ಪಾದಯಾತ್ರೆಗೆ ನಮ್ಮ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಂಪೂರ್ಣ ಬೆಂಬಲವಿದ್ದು, ಸರಕಾರ ನಮ್ಮ ಮನವಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಪಾದಯಾತ್ರೆಯಲ್ಲಿ ಲೋಹಿತ್ ಕುಂಬಾರ್, ಮಧುಗಿರಿ ತಾಲ್ಲೂಕಿನ ಖಾಸಗಿ ಐಟಿಐ ಸಂಘದ ಅಧ್ಯಕ್ಷ ಜಿ.ಎಸ್.ಜಗದೀಶ್, ನರೇಂದ್ರ, ಐಟಿಐ ಕಾರ್ಯದರ್ಶಿ ಎಂ.ಎನ್ ರಾಜೇಂದ್ರ, ವೆಂಕಟೇಶ್, ಬಿ.ಎನ್.ಶಂಕರಯ್ಯ, ಐಟಿಐ ಪ್ರಾಂಶುಪಾಲ ಎಂ.ಎಲ್. ಸಂತೋಷ್, ಆಕ್ಸಫಾಮ್ ಐಟಿಐ ಪ್ರಾಂಶುಪಾಲ ಶಿವಶಂಕರ್, ಬಿ.ಹೆಚ್.ಮಂಜುನಾಥ್, ಮಾತೃಶ್ರೀ ಐಟಿಐ ಕಾರ್ಯದರ್ಶಿ ಎಸ್.ಪಿ.ಹನುಮಂತರಾಯ, ಬಿ.ಎಸ್ ಪುನೀತ್, ದಯಾನಂದ್, ಸೈಯ್ಯದ್ ದಾದಾಪೀರ್ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/03/sira-photo-number-13.9.2022.jpg)