ನವದೆಹಲಿ:
ಮೋದಿ ಸರ್ಕಾರ ಮಹಿಳೆಯರಿಂದ ಮಂಗಳಸೂತ್ರ ಕಸಿಯಲು ಪ್ರಮುಖ ಕಾರಣವಾಗಿದೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ. ಶೇ. 30 ರಷ್ಟು ಜನರು ಚಿನ್ನದ ಸಾಲ ಮರುಪಾವತಿದೆ ಮಂಗಳ ಸೂತ್ರ ಸೇರಿದಂತೆ ತಮ್ಮ ಚಿನ್ನಾಭರಣ ಕಳೆದುಕೊಳ್ಳುತ್ತಿರುವುದಾಗಿ ಮಹಿಳೆಯರು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಮೋದಿ ಸರ್ಕಾರದ ಕ್ರೋನಿಸಂ ಮತ್ತಿತರ ಕಾರಣಗಳಿಂದ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮಹಿಳೆಯರಿಂದ ಮಂಗಳಸೂತ್ರಗಳನ್ನು ಕಸಿಯುವ ಏಕೈಕ ಸರ್ಕಾರ ಎಂಬ ಹೆಸರು ಗಳಿಸಿದೆ ಎಂದು ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಮಂಗಳಸೂತ್ರ’ ಕಸಿಯುವ ಕೆಲವು ಕಲ್ಪಿತ ಸಂಚಿನ ಬಗ್ಗೆ ‘ಅಜೈವಿಕ ಪ್ರಧಾನಿ’ ಹೆದರುತ್ತಿದ್ದ ಸಮಯದಲ್ಲಿ, ನಾವು ಅವರ ಅಧಿಕಾರಾವಧಿಯಲ್ಲಿ ಚಿನ್ನದ ಸಾಲಗಳ ತ್ವರಿತ ಏರಿಕೆಯ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಭಾರತೀಯ ಕುಟುಂಬಗಳಿಂದ ಅಂದಾಜು ರೂ. 3 ಲಕ್ಷ ಕೋಟಿಯಷ್ಟು ಚಿನ್ನದ ಸಾಲಗಳನ್ನು ತೆಗೆದುಕೊಳ್ಳಲಾಗಿದ್ದು, ಇಂದಿನವರೆಗೆ ಇದು ಬಾಕಿ ಉಳಿದಿದೆ ಎಂದು ಹೇಳಲಾಗಿದೆ. ಹೆಚ್ಚುತ್ತಿರುವ ಋಣಭಾರ ಮತ್ತು ನಿಧಾನಗತಿಯ ಆರ್ಥಿಕತೆಯೊಂದಿಗೆ ಚಿನ್ನದ ಸಾಲ ಪಡೆದು ಮರುಪಾವತಿಸದರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.
“ಮಾರ್ಚ್ ಮತ್ತು ಜೂನ್ 2024 ರ ನಡುವಿನ ಮೂರು ತಿಂಗಳ ಅವಧಿಯಲ್ಲಿ ಚಿನ್ನದ ಸಾಲದ ಪಡೆದು ಮರುಪಾವತಿಸದೆ ಇರುವುದು ರೂ.5,149 ಕೋಟಿಗಳಿಂದ ರೂ.6,696 ಕೋಟಿಗೆ ಅಂದರೆ ಶೇ 30 ರಷ್ಟು ಏರಿಕೆಯಾಗಿದೆ. ಈ ಸಾಲ ಮರುಪಾವತಿಸದೆ ಇರುವವರು ಹೆಚ್ಚಾಗಿ ಚಿನ್ನಾಭರಣಗಳನ್ನು ಕಳೆದುಕೊಳ್ಳುತ್ತಾರೆ. ಮಹಿಳೆಯರು ಮಂಗಳಸೂತ್ರ ಮತ್ತಿತರ ಆಭರಣಗಳನ್ನು ಕಳೆದುಕೊಳ್ಳುತ್ತಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
