ಜಪಾನಂದಜಿರವರನ್ನು ಗೌರವಿಸಿದ ರಾಯಚೂರು ಜಿಲ್ಲಾಡಳಿತ

ಪಾವಗಡ :

      ಉತ್ತರ ಕರ್ನಾಟಕ ಪ್ರವಾಹ ಪರಿಹಾರ ಯೋಜನೆಯ 2020ರ ಅಂತಿಮ ಘಟ್ಟದ ಪರಿಹಾರ ಕಾರ್ಯಗಳಿಗೆ ಪೂಜ್ಯ ಸ್ವಾಮಿ ಜಪಾನಂದಜೀ ರಾಯಚೂರು, ಗುಲ್ಬರ್ಗಾ ಹಾಗೂ ಶೋಲಾಪುರ ಜಿಲ್ಲೆಗಳಿಗೆ ತೆರಳಿದ್ದರು. ನ. 11 ರಂದು ರಾಯಚೂರು ಜಿಲ್ಲಾಡಳಿತದ ವತಿಯಿಂದ ರಾಯಚೂರು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ್, ಐ.ಎ.ಎಸ್.ರವರು ತಮ್ಮ ಕಚೇರಿಯಲ್ಲಿ ಪೂಜ್ಯ ಸ್ವಾಮೀಜಿಯವರನ್ನು ಜಿಲ್ಲಾಡಳಿತದ ಪರವಾಗಿ ಹಾಗೂ ರಾಯಚೂರು ಜಿಲ್ಲಾ ರೆಡ್ ಕ್ರಾಸ್ ಸಮಿತಿಯ ಪರವಾಗಿ ಗೌರವಿಸಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ್, ದೂರದ ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್‍ನ ಪ್ರ್ರಾಯೋಜಕತ್ವದಲ್ಲಿ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಜಪಾನಂದಜೀ ರವರ ಮಾರ್ಗದರ್ಶನದಲ್ಲಿ ಕಳೆದ ತಿಂಗಳು 8ನೇ ತಾರೀಖಿನಿಂದ ರಾಯಚೂರು ಜಿಲ್ಲೆಗೆ ಆಗಮಿಸಿ ಅನೇಕ ಕುಗ್ರಾಮಗಳಿಗೆ ಸ್ವತಃ ಭೇಟಿ ನೀಡಿ ಸರಿ ಸುಮಾರು 1500ಕ್ಕೂ ಮಿಗಿಲಾದ ಕುಟುಂಬಗಳಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿದ್ದನ್ನು ಸ್ಮರಿಸಿದರು.

     ಇದೇ ಸಂದರ್ಭದಲ್ಲಿ ಸಂಪೂರ್ಣವಾಗಿ ಮನೆಯನ್ನು ಕಳೆದುಕೊಂಡ ಸಂತ್ರಸ್ತರಿಗೆ ಟಾರ್ಪಾಲಿನ್ ಹಾಗೂ ಅಕ್ಕಿ, ನೂತನ ವಸ್ತ್ರಗಳು, ದಿನಸಿ ಸಾಮಾನುಗಳು, ಎಣ್ಣೆ ಇತ್ಯಾದಿಗಳನ್ನು ವಿತರಿಸಿದ್ದಕ್ಕಾಗಿ ರಾಯಚೂರು ಜಿಲ್ಲಾ ಜನತೆಯ ಪರವಾಗಿ ಹಾಗೂ ಆಡಳಿತ ಮಂಡಲಿಯ ಪರವಾಗಿ ಪೂಜ್ಯ ಸ್ವಾಮಿ ಜಪಾನಂದಜೀ ರವರಿಗೆ ಗೌರವವನ್ನು ಸಲ್ಲಿಸಿದರು.

      ಈ ಸಂದರ್ಭದಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರಿಗೆ ಜಿಲ್ಲಾಡಳಿತದ ಪರವಾಗಿ ಮತ್ತೆರಡು ಮನವಿಯನ್ನು ಸಲ್ಲಿಸಲಾಯಿತು. ಮನವಿಯ ಪ್ರಕಾರ ನಾಲ್ಕು ಕುಗ್ರಾಮಗಳು ಸಂಪೂರ್ಣ ಜಲಾವೃತವಾಗಿ ತತ್ತರಿಸಿದ ಸಂದರ್ಭದಲ್ಲಿ ಆಯ್ದ ಸಂತ್ರಸ್ತರಿಗೆ ನೂತನ ಗೃಹಗಳನ್ನು ನಿರ್ಮಿಸುವ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಇನ್ಫೋಸಿಸ್ ಫೌಂಡೇಷನ್ ಮತ್ತು ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ 300 ಗೃಹಗಳನ್ನು ನಿರ್ಮಿಸುವ ಬಗ್ಗೆ ಮನವಿ ಸಲ್ಲಿಸಲಾಯಿತು. ಪೂಜ್ಯ ಸ್ವಾಮೀಜಿಯವರು ಮನವಿಯನ್ನು ಸ್ವೀಕರಿಸಿ ತಮ್ಮ ಕೈಲಾದ ಮಟ್ಟಿಗೆ ಸ್ಪಂದಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಈ ಎಲ್ಲ ಗೌರವಗಳು ಈ ದುಃಸ್ಥಿತಿಯಲ್ಲಿ ಮಾನವೀಯತೆಯನ್ನು ಮೆರೆದ ಕರುನಾಡಿನ ತಾಯಿ ಶ್ರೀಮತಿ ಸುಧಾಮೂರ್ತಿ, ಅಧ್ಯಕ್ಷಿಣಿ, ಇನ್ಫೋಸಿಸ್ ಫೌಂಡೇಷನ್ ರವರಿಗೆ ಸಲ್ಲಿಸಬೇಕು ಎಂದು ವಿನಮ್ರತೆಯಿಂದ ಸ್ವಾಮೀಜಿ ತಿಳಿಸಿದರು.

      ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ರೆಡ್ ಕ್ರಾಸ್ ಸಮಿತಿಯ ಕಾರ್ಯ ಯೋಜನಾಧಿಕಾರಿಗಳಾದ ವಿದ್ಯಾಸಾಗರ್, ಅತಾವುಲ್ಲಾ, ರಾಯಚೂರ್‍ಕರ್ ಮತ್ತು ಹಿರೇಮಠ್ ರವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link