ಮುಂಬೈ:
ಖ್ಯಾತ ಉದ್ಯಮಿ, ಕರುಣಾಮಯಿ, ಅಜಾತಶತ್ರು ಎನಿಸಿಕೊಂಡಿದ್ದ ರತನ್ ಟಾಟಾ ನಿಧನವಾರ್ತೆ ಎಲ್ಲರಿಗೂ ಶಾಕ್ ಕೊಟ್ಟಿದೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ರತನ್ ಟಾಟಾ ಅವರು ತಮ್ಮ ಒಳಿತಿಗಿಂತ ಸಮಾಜದ ಒಳಿತಿಗಾಗಿ ಹೆಚ್ಚು ಶ್ರಮಿಸಿದ್ದರು. ಟಾಟಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ಅವರು, ಇಂದು ನಮ್ಮ ಜೊತೆ ಇಲ್ಲ. ಇದಕ್ಕೆ ಚಿತ್ರರಂಗದವರು ಸಂತಾಪ ಸೂಚಿಸಿದ್ದಾರೆ.
ರತನ್ ಟಾಟಾ ಅವರು ಅಕ್ಟೋಬರ್ 9ರಂದು ನಿಧನ ಹೊಂದಿದರು. ಅವರ ಸಾವು ಉದ್ಯಮ ರಂಗಕ್ಕೆ ಶಾಕಿಂಗ್ ಎನಿಸಿದೆ. ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ‘ಭಾರತದ ಹೆಮ್ಮೆಯ ಪುತ್ರ ರತನ್ ನಾವಲ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಶಿವಣ್ಣ ಟ್ವೀಟ್ ಮಾಡಿದ್ದಾರೆ. ‘ರತನ್ ಟಾಟಾ ನಿಧನವಾರ್ತೆ ಕೇಳಿ ದುಃಖವಾಗಿದೆ’ ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ.
‘ನಿಮ್ಮ ದಯೆಯಿಂದ ನೀವು ಲಕ್ಷಾಂತರ ಜನರ ಜೀವಗಳನ್ನು ತಲುಪಿದ್ದೀರಿ. ನಿಮ್ಮ ನಾಯಕತ್ವ ಮತ್ತು ಉದಾರತೆಯ ಪರಂಪರೆಯು ಮುಂದಿನ ತಲೆಮಾರಿಗೆ ಸ್ಫೂರ್ತಿ ನೀಡುತ್ತದೆ. ನಮ್ಮ ದೇಶಕ್ಕಾಗಿ ನೀವು ನೀಡಿದ ಕೊಡುಗೆ, ನಿಮ್ಮ ಸಾಟಿಯಿಲ್ಲದ ಉತ್ಸಾಹ ಮತ್ತು ಸಮರ್ಪಣೆಗಾಗಿ ಧನ್ಯವಾದಗಳು. ನೀವು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ. ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಪ್ರಿಯಾಂಕಾ ಚೋಪ್ರಾ ಬರೆದುಕೊಂಡಿದ್ದಾರೆ. ‘ಉದ್ಯಮದ ಟೈಟಾನ್ ರತನ್ ಟಾಟಾ ಅವರ ನಿಸ್ವಾರ್ಥ ಲೋಕೋಪಕಾರ ಮತ್ತು ದೂರದೃಷ್ಟಿಯ ನಾಯಕತ್ವವು ಅಸಂಖ್ಯಾತ ಜೀವನವನ್ನು ಪರಿವರ್ತಿಸಿದೆ. ಅವರು ಶಾಂತಿಯಿಂದ ವಿಶ್ರಾಂತಿ ಪಡೆಯಲಿ’ ಎಂದು ಜೂನಿಯರ್ ಎನ್ಟಿಆರ್ ಟ್ವೀಟ್ ಮಾಡಿದ್ದಾರೆ.
