ನವದೆಹಲಿ:
ಎಲ್ಲರ ಗಮನ ಸೆಳೆದಿರುವ ಮೇಘಾಲಯದ ಹತ್ಯೆ ಪ್ರಕರಣದ ಬಗ್ಗೆ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಹನಿಮೂನ್ನಲ್ಲಿ ಪತಿಯನ್ನು ಕೊಲೆಗೈದ ಆರೋಪದ ಮೇಲೆ ಮಹಿಳೆ ಬಂಧಿತಳಾಗಿರುವ ಈ ಪ್ರಕರಣವನ್ನು ಕಂಗನಾ ‘ವಿಪರೀತ ಮತ್ತು ಮೂರ್ಖತನದ’ ಕೃತ್ಯ ಎಂದು ಕರೆದಿದ್ದಾರೆ.
ಕಂಗನಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುದ್ದಿಯೊಂದನ್ನು ಹಂಚಿಕೊಂಡು, “ಯಾರಾದರೂ ಇದನ್ನು ವಿವರಿಸಬಲ್ಲಿರಾ? ತಂದೆ-ತಾಯಿಗೆ ಭಯಪಟ್ಟು ಮದುವೆಗೆ ಒಪ್ಪಿಕೊಂಡ ಮಹಿಳೆ, ಕೊಲೆಗಾರರೊಂದಿಗೆ ಯೋಜನೆ ರೂಪಿಸಿ ಪತಿಯನ್ನು ಕೊಂದಿದ್ದಾಳೆ! ಇದನ್ನು ತಿಳಿಯಲಾಗದೆ ತಲೆನೋವು ಕಾಡುತ್ತಿದೆ!” ಎಂದು ಬರೆದುಕೊಂಡಿದ್ದಾರೆ.
“ವಿಚ್ಛೇದನ ಪಡೆಯಲೂ ಆಗದೆ, ಪ್ರಿಯಕರನೊಂದಿಗೆ ಓಡಿಹೋಗಲೂ ಆಗದೆ, ಇಂತಹ ಕ್ರೂರ, ಅಮಾನವೀಯ ಮತ್ತು ಮೂರ್ಖ ಕೃತ್ಯ ಮಾಡಿದ್ದಾಳೆ. ಮೂರ್ಖರನ್ನು ಲಘುವಾಗಿ ಪರಿಗಣಿಸಬಾರದು; ಅವರು ಸಮಾಜಕ್ಕೆ ದೊಡ್ಡ ಅಪಾಯ. ಬುದ್ಧಿವಂತರು ತಮ್ಮ ಲಾಭಕ್ಕೆ ಹಾನಿ ಮಾಡಬಹುದು, ಆದರೆ ಮೂರ್ಖರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ ಎಚ್ಚರಿಕೆಯಿಂದಿರಿ” ಎಂದು ಕಂಗನಾ ಹೇಳಿದ್ದಾರೆ.
ಮೇಘಾಲಯದ ಸೊಹ್ರಾದಲ್ಲಿ ಸೋನಮ್ ರಘುವಂಶಿ ತನ್ನ ಪತಿ ರಾಜಾ ರಘುವಂಶಿಯನ್ನು ಹನಿಮೂನ್ನಲ್ಲಿ ಕೊಲೆಗೈದ ಆರೋಪ ಎದುರಿಸುತ್ತಿದ್ದಾಳೆ. ಪತಿಯನ್ನು ಕೊಲ್ಲು ಸೋನಮ್ ಕೊಲೆಗಾರರನ್ನು ನೇಮಿಸಿದ್ದಳು ಎಂದು ಆರೋಪಿಸಲಾಗಿದೆ. ಕೊಲೆಯಾದ ರಾಜಾ ಜೂನ್ 2 ರಂದು ಪತ್ತೆಯಾಗಿದ್ದಾರೆ. ಪತ್ನಿ ಸೋನಮ್ ‘ಕಾಣೆ’ಯಾಗಿ, ನಂತರ ಉತ್ತರ ಪ್ರದೇಶದ ಘಾಜಿಪುರದಲ್ಲಿ ಶರಣಾಗಿದ್ದಾರೆ. ಆಕಾಶ್ ರಾಜ್ಪುತ್ (19), ವಿಶಾಲ್ ಸಿಂಗ್ ಚೌಹಾಣ್ (22) ಮತ್ತು ರಾಜ್ ಸಿಂಗ್ ಕುಶ್ವಾಹ (21) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಇಂದೋರ್ನಲ್ಲಿ ಮೇ 11 ರಂದು ವಿವಾಹವಾದ ದಂಪತಿ, ಹನಿಮೂನ್ಗಾಗಿ ಮೇಘಾಲಯಕ್ಕೆ ತೆರಳಿತ್ತು. ಮೇ 23 ರಂದು ಅವರು ಕಾಣೆಯಾದರು. ಸೋನಮ್ನ ತಂದೆ ದೇವಿ ಸಿಂಗ್ ರಘುವಂಶಿ, “ನನ್ನ ಮಗಳು ನಿರಪರಾಧಿ. ಮೇಘಾಲಯ ಪೊಲೀಸರು ತನಿಖೆಯಲ್ಲಿ ವಿಫಲರಾಗಿದ್ದಾರೆ” ಎಂದು ಆರೋಪಿಸಿದ್ದಾರೆ. ಕುಟುಂಬವು ಸಿಬಿಐ ತನಿಖೆಗೆ ಒತ್ತಾಯಿಸಿದ್ದು, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.
