ತಿರುಪತಿ:
ತಿಮ್ಮಪ್ಪನ ಸನ್ನಿಧಿಯಲ್ಲಿ ವಿವಿಐಪಿ ದರ್ಶನವನ್ನು ಸ್ಥಗಿತಗೊಳಿಸುವ ಮೂಲಕ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ನಿರ್ಧರಿಸಿದೆ. ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಅವರು ನಿನ್ನೆ ಈ ಘೋಷಣೆ ಮಾಡಿದ್ದು, ಇನ್ಮುಂದೆ ದೇಗುಲದಲ್ಲಿ ವಿವಿಐಪಿ ದರ್ಶನ ಮುಂದುವರೆಯುವುದಿಲ್ಲ ಎಂದಿದ್ದಾರೆ.
ಸದ್ಯ ದೇಗುಲದಲ್ಲಿ ವಿವಿಐಪಿಗಳಿಗಾಗಿ 3 ಪ್ರತ್ಯೇಕ ಸಾಲುಗಳಿವೆ. ತುರ್ತು ದರ್ಶನಕ್ಕೆ ವಿವಿಪಿಗಳಿಗೆ ಅವಕಾಶ ಕಲ್ಪಿಸುವುದರಿಂದ ಸಾಮಾನ್ಯ ಭಕ್ತರು ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಕಾಯಬೇಕಾಗಿದೆ.
ಆಡಳಿತದಲ್ಲಿ ಪಾರದರ್ಶಕತೆ ತಂದಿರುವ ಸಿಎಂ ಜಗನ್ಮೋಹನ್ ರೆಡ್ಡಿ ಅವರ ತತ್ವವನ್ನು ಟಿಟಿಡಿಯಲ್ಲೂ ತರಲು ಮುಂದಾಗಿದ್ದೇನೆ. ಅದರಂತೆ ಮೂರು ಸಾಲುಗಳ ವಿವಿಐಪಿ ದರ್ಶನ ಇನ್ನು ಮುಂದುವರೆಯುವುದಿಲ್ಲ.
ಶಿಷ್ಟಾಚಾರದ ಬಗ್ಗೆ ಆನಂತರ ಚಿಂತನೆ ನಡೆಸುತ್ತೇವೆ. ಸಾಮಾನ್ಯ ಭಕ್ತರಿಗೆ ಪ್ರಾಮುಖ್ಯತೆ ನೀಡುವುದೇ ನಮ್ಮ ಉದ್ದೇಶ ಎಂದು ಸುಬ್ಬಾರೆಡ್ಡಿ ಹೇಳಿದ್ದಾರೆ. ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ರೆಡ್ಡಿ ಅವರ ಮಾವನಾದ ಸುಬ್ಬಾರೆಡ್ಡಿ ಅವರು ಜೂನ್ 23ರಂದು ಟಿಟಿಡಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
