ತುಮಕೂರು :
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಬಜೆಟ್ ಅನ್ನು ಸೋಮವಾರ ಮಂಡಿಸಿದ್ದು, ಕರ್ನಾಟಕದ ಮೆಟ್ರೋ 2ನೇ ಹಂತ ಬಿಟ್ಟರೆ ಹೆಚ್ಚಿನ ಕೊಡುಗೆಗಳು ಸಿಕ್ಕಿಲ್ಲ. ವಿಧಾನಸಭೆ ಚುನಾವಣೆ ನಡೆಯಲಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಿಗೆ ಬಂಪರ್ ಕೊಡುಗೆಗಳನ್ನು ಪ್ರಕಟಿಸಿದ್ದು, ಚುನಾವಣೆ ಬಜೆಟ್ ಎಂಬ ಟೀಕೆಗೆ ಗುರಿಯಾಗಿದೆ.
ಪೆಟ್ರೋಲ್ – ಡೀಸೆಲ್ , ಮೊಬೈಲ್ ಮದ್ಯ, ಅಡುಗೆ ಎಣ್ಣೆ, ರಸಗೊಬ್ಬರ, ವಾಹನದ ಬಿಡಿಭಾಗಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿ ಹಲವು ವಸ್ತುಗಳ ಖರೀದಿ ಮೇಲೆ ಕೃಷಿ ಮೂಲಸೌಕರ್ಯದ ಸೆಸ್ ವಿಧಿಸಿರುವುದು ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗುವ ಆತಂಕಕ್ಕೆ ಕಾರಣವಾಗಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ಸುದ್ದಿಗೋಷ್ಠಿಯಲ್ಲಿ ಅಲ್ಲಗಳೆದು ಯಾವುದೇ ಹೊರೆಯಿಲ್ಲ ಎಂದು ಸ್ಪಷ್ಟೀಕರಿಸಿದ್ದು, ಸೆಸ್ನಿಂದ ಸಂಗ್ರಹವಾಗುವ ಮೊತ್ತದ ಲಾಭ ಕೃಷಿಕರಿಗೆ ಹೇಗೆ ಹಂಚಿಕೆಯಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟೀಕರಿಸದಿರುವುದು ಗೊಂದಲ ಮುಂದುವರಿಯುವಂತೆ ಮಾಡಿದೆ.
34. 83,326 ಕೋಟಿ ಮೊತ್ತದ ಬಜೆಟ್ ಅನ್ನು ಮಂಡಿಸಿರುವ ಕೇಂದ್ರ ಸರಕಾರ ಈ ಮೊತ್ತದ ಕ್ರೂಢೀಕರಣಕ್ಕೆ ಶೇ.17ರಷ್ಟು ಮೊತ್ತವನ್ನು ಸರಕಾರಿ ಉದ್ದಿಮೆಗಳಲ್ಲಿ ತೊಡಗಿರುವ ಬಂಡವಾಳವನ್ನು ಹಿಂತೆಗೆದು ಖಾಸಗಿ, ವಿದೇಶಿ ಬಂಡವಾಳ ಹೂಡಿಕೆಗೆ ಆಸ್ಪದ ಮಾಡಿಕೊಟ್ಟಿರುವುದು ಟೀಕೆ -ಚರ್ಚೆಗೆ ಗ್ರಾಸವೊದಗಿಸಿದೆ.
ಚಿನ್ನ-ಬೆಳ್ಳಿ ದರ ಇಳಿಕೆ ನಿರೀಕ್ಷೆ :
ವಿಶೇಷವಾಗಿ ಭಾರತೀಯ ಜೀವವಿಮಾ ನಿಗಮದಿಂದ 1.75 ಲಕ್ಷ ಕೋಟಿ ಬಂಡವಾಳ ಹಿಂತೆಗೆಯುವುದಾಗಿ ಘೋಷಿಸಿ ವುದು, ವಿಮಾ ಕ್ಷೇತ್ರದ ಖಾಸಗೀಕರಣದಿಂದ ಆಗುವ ಪರಿಣಾಮಗಳ ಚರ್ಚೆಗೆ ಎಡೆ ಮಾಡಿದೆ. ಚಿನ್ನ-ಬೆಳ್ಳಿ ಮೇಲಿನ ಆಮದು ಕಸ್ಟಮ್ಸ್ ಸುಂಕವನ್ನು ಶೇ.12.5 ರಿಂದ ಶೇ.10ಕ್ಕೆ 2021 ಅ.1ರಿಂದ ಇಳಿಸಿದ್ದು, ದುಬಾರಿಯಾಗಿದ್ದ ಚಿನ್ನ-ಬೆಳ್ಳಿ ಆಭರಣಗಳ ದರ ಇಳಿಯುವ ನಿರೀಕ್ಷೆ ಮೂಡಿಸಿದೆ. 15 ವರ್ಷ, 20 ವರ್ಷ ದಾಟಿದ ಸ್ಕ್ರಾಪ್ ವಾಹನಗಳನ್ನು ನಿಷೇಧಿಸಬೇಕೆಂಬ ನೀತಿ ಜಾರಿಗೆ ತರುತ್ತಿರುವುದು ಆಟೊ ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಎಂದು ವಿಶ್ಲೇಷಿಸಲಾಗುತ್ತಿದೆ.
ಬಜೆಟ್ ಸೆಸ್ ಅವಲೋಕಿಸಿ ಪೆಟ್ರೋಲ್ , ಡೀಸೆಲ್, ಮದ್ಯ, ವಾಹನಗಳ ಬಿಡಿಭಾಗಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಚರ್ಮದ ಶೂ, ಮೊಬೈಲ್ ಚಾರ್ಜರ್, ವಿದೇಶಿ ಅಡುಗೆ ಎಣ್ಣೆ, ಸೇಬು, ಹತ್ತಿ, ಕಲ್ಲಿದ್ದಲು, ರಸ ಗೊಬ್ಬರ, ಕಾಬೂಲ್ ಕಡಲೆ, ಬೇಳೆಕಾಳುಗಳು ದುಬಾರಿಯಾಗುತ್ತದೆ ಎಂದು ಹೇಳಲಾಗುತ್ತಿದ್ದು, ಕಬ್ಬಿಣ, ಸ್ಟೀಲ್, ನೈಲಾನ್ ಬಟ್ಟೆಗಳು, ತಾಮ್ರದ ಲೋಹಗಳು, ಇಳಿಯುವ ನಿರೀಕ್ಷೆ ಎಂದು ಹೇಳಲಾಗುತ್ತಿದೆ.
6 ಆಧಾರ ಸ್ತಂಬಗಳಲ್ಲಿ ಅನುದಾನ ಹಂಚಿಕೆ :
ಆರು ಆಧಾರ ಸ್ತಂಭಗಳಲ್ಲಿ ಬಜೆಟ್ ಹಂಚಿಕೆ ಮಾಡಲಾಗಿದ್ದು, ಆರೋಗ್ಯ ಕ್ಷೇತ್ರಕ್ಕೆ 23.846 ಕೋಟಿ ರೂ. ಅನುದಾನ, ರೈಲ್ವೆ ಇಲಾಖೆಗೆ 1,10,055 ಕೋಟಿ, ಉತ್ಪಾದನಾ ವಲಯಕ್ಕೆ 1.94 ಲಕ್ಷ ಕೋಟಿ, ಮೀನುಗಾರಿಕೆಗೆ 2 ಸಾವಿರ ಕೋಟಿ, ಸಂಶೋಧನಾ ವಲಯಕ್ಕೆ 50 ಸಾವಿರ ಕೋಟಿ, ರಕ್ಷಣಾ ಇಲಾಖೆಗೆ .4.78 ಲಕ್ಷ ಕೋಟಿ, ಗೃಹ ಇಲಾಖೆಗೆ 1.66 ಲಕ್ಷ ಕೋಟಿ, ಕೃಷಿ ಕ್ಷೇತ್ರಕ್ಕೆ ಕೃಷಿ ಉತ್ಪನ್ನ ಖರೀದಿಗಾಗಿಯೇ 1.72 ಲಕ್ಷ ಕೋಟಿ ಹಾಗೂ ರೈಲ್ವೆ ವಲಯಕ್ಕೆ 1,10,055 ಕೋಟಿ ಅದುನಾ ಹಂಚಿಕೆ ಮಾಡಲಾಗಿದೆ.
ಹಾಗೆಯೇ ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉನ್ನತೀಕರಣಕ್ಕೆ 18 ಸಾವಿರ ಕೋಟಿ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ರೂ. 1,41,678 ಕೋಟಿ, ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಗೆ ರೂ.64,180 ಕೋಟಿ, ವಾಯು ಮಾಲಿನ್ಯ ನಿಯಂತ್ರಣಕ್ಕೆ ರೂ.2,217 ಕೋಟಿ, ಕೌಶಲ್ಯಾಭಿವೃದ್ಧಿ ಯೋಜನೆಗೆ ರೂ.3 ಕೋಟಿ, ಜಲಜೀವನ ಮಿಷನ್?ಗೆ ರೂ.2.87 ಲಕ್ಷ ಕೋಟಿ, ಅರ್ಬನ್ ಕ್ಲೀನ್ ಇಂಡಿಯಾ ಮಿಷನ್ಗೆ ರೂ.1.41 ಲಕ್ಷ ಕೋಟಿ, ನಿರ್ಮಾಣ ಕ್ಷೇತ್ರಕ್ಕೆ ರೂ.1.97 ಲಕ್ಷ ಕೋಟಿ
ಕೋವಿಡ್ ವ್ಯಾಕ್ಸಿನ್ಗೆ 35ಸಾವಿರ ಕೋಟಿ ಮೀಸಲು :
ಕೊವಿಡ್ ವ್ಯಾಕ್ಸಿನ್ಗಾಗಿ 35 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರೂ.55 ಸಾವಿರ ಕೋಟಿ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ರೂ. 1 ಲಕ್ಷ 18 ಸಾವಿರ ಕೋಟಿ, ವಾಹನ ಸ್ಕ್ರಾಪಿಂಗ್ ಯೋಜನೆಗೆ ರೂ.4.12 ಲಕ್ಷ ಕೋಟಿ, ಬೆಂಗಳೂರು ಮೆಟ್ರೋ ರೈಲ್ವೆ ಯೋಜನೆಗೆ ರೂ. 14,788 ಕೋಟಿ, ಪಶ್ಚಿಮ ಬಂಗಾಳದಲ್ಲಿ ರಸ್ತೆ ಯೋಜನೆಗೆ 5 ಸಾವಿರ ಕೋಟಿ, ಕೃಷಿ ಮೂಲಸೌಕರ್ಯಕ್ಕಾಗಿ ರೂ.40,000 ಕೋಟಿ, ಸಣ್ಣ ನೀರಾವರಿ ಬೆಳೆಗೆಳ ಸೌಕರ್ಯಕ್ಕೆ ರೂ.10,000 ಕೋಟಿ., ಗೋವಾ ವಿಮೋಚನಾ ವರ್ಷ ಆಚರಣೆಗೆ ರೂ. 300 ಕೋಟಿ, ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಯೋಜನೆಗೆ ರೂ. 1,500 ಕೋಟಿ, ಡಿಜಿಟಲ್ ಜನಗಣತಿಗೆ. 3,768 ಕೋಟಿ ಮೀಸಲು, ಭತ್ತ ಬೆಳೆ ಖರೀದೆಗೆಂದೇ 1 ಲಕ್ಷದ 72 ಸಾವಿರ ಕೋಟಿ ಮೀಸಲಿರಿಸಿರುವುದು ಕಂಡುಬಂದಿದೆ.
ಸಮಸ್ಯೆಗಳಿಗೆ ಪರಿಹಾರ ತೋರದ ಬಜೆಟ್ :
ದೇಶದ ಜ್ವಲಂತ ಸಮಸ್ಯೆಗಳ ಪರಿಹಾರದ ಬಗ್ಗೆ ಬಜೆಟ್ನಲ್ಲಿ ಯಾವುದೇ ಯೋಜನೆಗಳು ಕಾಣುತ್ತಿಲ್ಲ. ಆಶ್ವಾಸನೆಗಳ ಸುರಿಮಳೆಯನ್ನೇ ಬಜೆಟ್ನಲ್ಲಿ ಕೇಂದ್ರ ಹಣಕಾಸು ಸಚಿವರು ಹರಿಸಿದ್ದು, ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. 27 ಲಕ್ಷ ಕೋಟಿಯಷ್ಟು ಕೋವಿಡ್ ನಿಯಂತ್ರಣಕ್ಕೆ ಖರ್ಚು ಮಾಡಿದ್ದೇವೆ ಅನ್ನುತ್ತಾರೆ ಅದಕ್ಕೆ ಯಾವುದೇ ಲೆಕ್ಕವಿಲ್ಲ. ನೌಕರರಿಗೆ ಸಂಬಳ ಕೊಡದ ಪರಿಸ್ಥಿತಿಯಲ್ಲಿ ಕೇಂದ್ರ ರಾಜ್ಯ ರಾಜ್ಯ ಸರಕಾರಗಳಿವೆ. ವಿಮಾನಯಾನ, ವಿಮೆ ಕಂಪನಿ ಖಾ¸ಗೀಕರಣ ಇದು ಸರಕಾರದ ಬಂಡವಾಳಶಾಹಿಪರವಾದ ಮೆಂಟಾಲಿಟಿಯನ್ನು ತೋರಿಸುತ್ತಿದ್ದು, ಜನಸಾಮಾನ್ಯರು ಬೇಡಿ ತಿನ್ನುವ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಪೆಟ್ರೋಲ್ ಅನ್ನು ಒಂದು ವರ್ಷಕ್ಕಾಗುವಷ್ಟು ಸಂಗ್ರಹಿಸಿಟ್ಟುಕೊಂಡು ತೈಲ ದರದಲ್ಲಿ ನಿಯಂತ್ರಣ ಸಾಧಿಸಲು ಏಕೆ ಸಾಧ್ಯವಾಗುತ್ತಿಲ್ಲ. ಇದು ಬರೀ ಆಶ್ವಾಸನೆಗಳ ಬಜೆಟ್ ಅಷ್ಟೇ. ಅನುಷ್ಟಾನದ ಬಜೆಟ್ ಅಲ್ಲ.
-ಟಿ.ಬಿ.ಜಯಚಂದ್ರ ಮಾಜಿ ಕೃಷಿ ಸಚಿವರು.
ನಿರಾಶಾದಾಯಕ ಬಜೆಟ್ :
ನಮ್ಮ ರಾಜ್ಯಕ್ಕೆ ಮೆಟ್ರೋ ವಿಸ್ತರಿತ ಯೋಜನೆ ಬಿಟ್ಟರೆ ವಿಶೇಷ ಕೊಡುಗೆಗಳು ಕಾಣುತ್ತಿಲ್ಲ. ಜಿಲ್ಲೆಗೆ ಸಂಬಂಧಿಸಿದಂತೆ ಹಿಂದೆ ಘೋಷಿತವಾಗಿರುವ ರೈಲ್ವೆ ಎಚ್ಎಎಲ್ ಇಸ್ರೋ, ಹೆದ್ದಾರಿ ಯೋಜನೆಗಳ ಬಗ್ಗೆ ಚಕಾರವಿಲ್ಲ. ಇದೊಂದು ನಿರಾಶದಾಯಕ ಬಜೆಟ್. ಕೃಷಿ ಮೂಲಸೌಕರ್ಯ ಹೆಸರಲ್ಲಿ ಹಾಕುವ ಸೆಸ್ ಯಾರಿಗೆ ಹೊರೆಯೆಂಬುದು ತಿಳಿಯದು. ಇದೊಂದು ನಿರಾಶಾದಾಯಕ ಬಜೆಟ್
-ಎಸ್.ಪಿ ಮುದ್ದಹನುಮೇಗೌಡ ಮಾಜಿ ಸಂಸದರು.
ಕೇಂದ್ರದ ಬಜೆಟ್ ಆರ್ಥಿಕತೆಯ ಉತ್ತೇಜನಕ್ಕೆ ಸಹಕಾರಿಯಾಗಿದೆ. ಸಾರಿಗೆ, ಉದ್ಯಮ, ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ಸಾಮಾಜಿಕ-ಆರ್ಥಿಕ ವಲಯಗಳಿಗೆ ಅನೇಕ ಯೋಜನೆ ಘೋಷಿಸಿರುವುದು ಸ್ವಾಗತಾರ್ಹ ಅಂಶ. ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ 20 ಲಕ್ಷ ಕೋಟಿ ಕೃಷಿ ಸಾಲ ನೀಡಿಕೆಗೆ ಹೆಚ್ಚುವರಿ ನೆರವು, ಕೃಷಿ ಅನುದಾನದಲ್ಲಿನ ಒಂದು ಭಾಗವನ್ನು ಎಪಿಎಂಸಿ ಮೂಲಸೌಕರ್ಯ ಕ್ಷೇತ್ರದ ಬಲವರ್ದನೆ, ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆಮ ಸ್ವಸ್ಥ ಭಾರತ ಯೋಜನೆ ಜಾರಿ, ವಿಮಾ ಕಂಪನಿಗಳಲ್ಲಿ ಸುರಕ್ಷತಾ ನಿಯಮಗಳೊಂದಿಗೆ ವಿದೇಶಿ ಮಾಲೀಕತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ. 100 ಸೈನಿಕ ಶಾಲೆ, ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಿರುವುದು ಒಳ್ಳೆಯ ಬೆಳವಣಿಗೆ.
-ಜಿ.ಬಿ.ಜ್ಯೋತಿಗಣೇಶ್, ಶಾಸಕರು, ತುಮಕೂರು ನಗರ.
‘ವರಿ’ಯಾಗಿಯೇ ಉಳಿದ ನೀರಾವರಿ
ಕೃಷಿ ಮೂಲಾಧಾರ ಮಣ್ಣು ಮತ್ತು ನೀರು. ಆದರೆ ಕೃಷಿ ಕ್ಷೇತ್ರಕ್ಕೆ ನೀರಾವರಿ ಭದ್ರತೆ ಕಲ್ಪಿಸುವ ದೂರದರ್ಶಿತ್ವ ಭದ್ರತೆ ಕಾಣುತ್ತಿಲ್ಲ. ಮುರ್ನಾಲ್ಕು ದಶಕಗಳ ಹಿಂದೆಯೇ ಭಾರತ ಸರಕಾರದ ಜಲಸಂಪನ್ಮೂಲ ಮಂತ್ರಿ ಕೆ.ಎಲ್.ರಾವ್ ರಾಷ್ಟ್ರೀಯ ನದಿ ಜೋಡಣೆಯ ಮಾಸ್ಟರ್ ಪ್ಲ್ಯಾನ್ ಮಾಡಿದ್ದ ದಿನ್ಶಾದಾಸ್ತೂರ್ ಮತ್ತು ಕರ್ನಾಟಕ ಪಶ್ಚಿಮ ವಾಹಿನಿ ನದಿ ಜೋಡಣೆಯ ಕನಸು ಕಂಡಿದ್ದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರ ಆಶಯಗಳು ಹಾಗೂ ರಾಷ್ಟ್ರೀಯ ನದಿಗಳನ್ನು ಜೋಡಿಸುವ ಸಂಕಲ್ಪ ಮಾಡಿದ್ದ ವಾಜಪೇಯಿ ಅವರ ದೂರದರ್ಶಿತ್ವ ಮೋದಿ ಅವರ ಬಜೆಟ್ನಲ್ಲಿ ಕಾಣದಾಗಿದೆ. ರಾಜ್ಯದ ಮಟ್ಟಿಗೆ ನೀರಾವರಿ ವರಿಯಾಗಿಯೇ ಉಳಿದಿದೆ.
-ಆರ್.ಆಂಜನೇಯರೆಡ್ಡಿ, ನೀರಾವರಿ ಹೋರಾಟಗಾರರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
