ಕೊರಟಗೆರೆ
ಮುಂಗಾರು ಹಂಗಾಮಿನ ಕೊರತೆಯಿಂದ ಕೊರಟಗೆರೆ ತಾಲ್ಲೂಕಿನಲ್ಲಿ ಉಂಟಾದಂತಹ ಬೆಳೆ ನಷ್ಟ ಪರಿಶೀಲನೆಗೆ ಬಂದ ಕೇಂದ್ರ ಬರ ಅಧ್ಯಯನ ತಂಡವು ರಾಯವಾರ ಗ್ರಾಮದ ರೈತರ ಜಮೀನಿನ ಬೆಳೆ ನಾಶ ವೀಕ್ಷಿಸಿತು. ಕುಡಿಯುವ ನೀರು, ಜಾನುವಾರುಗಳ ಮೇವು ಸೇರಿದಂತೆ ಇನ್ನಿತರ ರೈತರ ಸಮಸ್ಯೆ ಆಲಿಸಿದ ಕೇಂದ್ರ ಬರಅಧ್ಯಯನ ತಂಡದ ಮುಖ್ಯಸ್ಥ ಮಾನಸ್ಚೌಧರಿ ನೇತೃತ್ವದ ತಂಡ ರೈತರ ಅಹವಾಲು ಸ್ವೀಕರಿಸಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ರಾಯವಾರ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡ ರಾಯವಾರ ಗ್ರಾಮದ ಸರ್ವೇ ನಂ.14/12ರಲ್ಲಿರುವ ರೈತ ರಾಮಚಂದ್ರಪ್ಪನ 2ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿರುವ ಮುಸುಕಿನ ಜೋಳ ಹಾಗೂ ಶೇಂಗಾ ಪರಿಶೀಲಿಸಿತು. ಇದೇ ಗ್ರಾಮದ ಸರ್ವೇ ನಂ.14/3ರ ಸುಶೀಲಮ್ಮ ಎಂಬುವರ 3ಎಕರೆ ಜಮೀನಿನಲ್ಲಿ ರಾಗಿ ಮತ್ತು ಮುಸುಕಿನ ಜೋಳ, ಇದೇ ಗ್ರಾಮದ ಮೈಲಾರಪ್ಪ ಎಂಬುವರ ಮೇವಿಗಾಗಿ ಬಿತ್ತನೆ ಮಾಡಲಾದ ಮೇವಿನ ಬೆಳೆ ವೀಕ್ಷಿಸಿತು. ಅವರ ರೊಪ್ಪದಲ್ಲಿದ್ದ ಕುರಿಗಳ ಮೇವಿನ ವಿಚಾರ ಸೇರಿದಂತೆ ಇನ್ನಿತರ ರೈತರ ಬೆಳೆ ನಾಶದ ಬಗ್ಗೆ ಕೇಂದ್ರ ತಂಡ ಕೂಲಂಕಶವಾಗಿ ಸಮಸ್ಯೆಗಳನ್ನು ಆಲಿಸಿದತು.
ಕೇಂದ್ರ ಬರ ಅಧ್ಯಯನ ತಂಡವು ಸ್ಥಳಕ್ಕೆ ಆಗಮಿಸಿ ಬೆಳೆ ವೀಕ್ಷಿಸುವ ಸಂದರ್ಭದಲ್ಲಿ ಹಲವು ರೈತರು ತಮ್ಮ ಅಂತರಾಳದ ನೋವು ತೋಡಿಕೊಂಡರು. ಕಳೆದ 8-10 ವರ್ಷಗಳಿಂದ ಭೀಕರ ಬರಗಾಲದಿಂದ ಇಟ್ಟ ಬೆಳೆ ಕೈ ಸೇರದೆ ಸಾಲ ಸೋಲ ಮಾಡಿಕೊಂಡು ತುಂಬಾ ಸಂಕಷ್ಟದಲ್ಲಿದ್ದೇವೆ. ಈ ಬಾರಿಯೂ ಮುಂಗಾರಿನಲ್ಲಿ ಮಳೆ ಉತ್ತಮವಾಗಿ ನಡೆಸಿತ್ತಾದರೂ, ಬಿತ್ತನೆ ಸಂದರ್ಭದಲ್ಲಿ ಹಾಗೂ ಬಿತ್ತನೆಯ ನಂತರ ಮಳೆ ಕೈಕೊಟ್ಟು, ಬಿತ್ತಿದ ಬೆಳೆ ಮಳೆ ಕೊರತೆಯಿಂದ ನೆಲ ಕಚ್ಚಿದ್ದು, ಮುಸುಕಿನ ಜೋಳ, ಶೇಂಗಾ, ರಾಗಿ, ಅವರೆ ಸೇರಿದಂತೆಇನ್ನಿತರ ಬೆಳೆಗಳು ನಾಶವಾಗಿವೆ. ಜಾನುವಾರುಗಳಿಗೆ ಮೇವು ಸಿಗದಂತಹ ಸ್ಥಿತಿ ನಿರ್ಮಾಣವಾಗಿ, ಕುಡಿಯುವ ನೀರಿಗೂ ಹಾಹಾಕಾರ ಸಂಭವಿಸುವ ಸ್ಥಿತಿಯಲ್ಲಿದ್ದೇವೆ. ನಾವು ಬಿತ್ತನೆ ಕಾರ್ಯಕ್ಕಾಗಿಖರ್ಚು ಮಾಡಲಾದ ಲP್ಫ್ಷಂತರ ರೂ. ಬೆಳೆ ನಾಶದಿಂದ ಕೈ ಕಚ್ಚಿದೆ. ಈಗ ಸರ್ಕಾರ ಕೈ ಹಿಡಿಯದಿದ್ದರೆ ರೈತರ ಪರಿಸ್ಥಿತಿ ತುಂಬಾ ಚಿಂತಾಜನಕವಾಗುತ್ತದೆ ಎಂದು ಹಲವು ರೈತರು ಅಳಲು ತೋಡಿಕೊಂಡರು.
ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಮಾನಸ್ಚೌಧರಿ ಹಾಗೂ ಅವರ ತಂಡದ ಇತರರಿಗೆ ಜಿಲ್ಲಾಧಿಕಾರಿ ರಾಕೇಶ್ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ಕಣ್ಮಣಿಜಾಯ್ ಹಾಗೂ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ, ರೈತರ ಜಮೀನಿನಲ್ಲಿನ ಬೆಳೆ ನಷ್ಟ ಮಾಹಿತಿ, ಕುಡಿಯುವ ನೀರಿನ ಬವಣೆ, ಸಾಕು ಪ್ರಾಣಿಗಳು ಹಾಗೂ ಜಾನುವಾರುಗಳಿಗೆ ಮುಂದಿನ ದಿನಗಳಲ್ಲಿ ಉಲ್ಬಣಗೊಳ್ಳುವ ಮೇವು ಹಾಗೂ ಕುಡಿಯುವ ನೀರಿನ ತೀವ್ರತೆಯ ಬಗ್ಗೆ ಕೂಲಂಕಶವಾಗಿ ಕೇಂದ್ರ ಬರಅಧ್ಯಯನ ತಂಡಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದಂತೆ ಕಂಡು ಬಂದರು. ರೈತರ ಮುಂದಿನ ಸಂಕಷ್ಟದ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು.
ಕೃಷಿ ಇಲಾಖೆಯಿಂದ ಮೊಬೈಲ್ ತಂತ್ರಾಂಶ ಮಾಹಿತಿ:- ಬರಪೀಡಿತ ಕೊರಟಗೆರೆ ತಾಲ್ಲೂಕು ಎಂದು ರಾಜ್ಯ ಸರಕಾರ ಘೋಷಣೆ ಮಾಡಿದ ಕೂಡಲೇ ಕೃಷಿ ಇಲಾಖೆಯಿಂದ ತಾಲೂಕಿನ ನಾಲ್ಕು ಹೋಬಳಿಯ 251 ಗ್ರಾಮಗಳ ಪೈಕಿ 28 ಮುಖ್ಯವಾದ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಮೊಬೈಲ್ ತಂತ್ರಾಂಶದಿಂದ ಬೆಳೆ ನಾಶದ ಮಾಹಿತಿ ಸಂಗ್ರಹಣೆ ಮಾಡಲಾಗಿದೆ. ಮೊಬೈಲ್ ತಂತ್ರಾಂಶದ ಮೂಲಕ ಬರಗಾಲದ ಬೆಳೆ ಸಮೀಕ್ಷೆಯ ರೈತನಗ್ರಾಮ, ಹೆಸರು, ಜಮೀನು, ನಾಶವಾದ ಬೆಳೆಯ ಮಾಹಿತಿಯ ಜೊತೆ ಫೋಟೊ ಕೂಡ ಶೇಖರಣೆ ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ನಾಗರಾಜು ಮತ್ತು ನೂರ್ ಆಜಾಂ ಕೇಂದ್ರ ತಂಡಕ್ಕೆ ವಿವರಣೆ ನೀಡಿದರು.
ಜಿಲ್ಲಾಧಿಕಾರಿ ರಾಕೇಶ್ಕುಮಾರ್ ಮಾತನಾಡಿ, ಕೇಂದ್ರದ ಮೂರು ಬರಅಧ್ಯಯನ ತಂಡ ಬರದ ಸಮೀಕ್ಷೆ ನಡೆಸಲು ರಾಜ್ಯಕ್ಕೆ ಬಂದಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾದಲ್ಲಿ ಬೆಳೆ ನಷ್ಟದ ಮಾಹಿತಿ ಮತ್ತು ಕೇಂದ್ರ ಸರಕಾರದ ಕಾಮಗಾರಿ ವಿವರಣೆ ಪಡೆಯುತ್ತಿದ್ದಾರೆ. ಜಿಲ್ಲೆಯ 10 ತಾಲೂಕಿನ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಬೆಳೆ ನಷ್ಟದ ಪರಿಹಾರಕ್ಕಾಗಿ 123 ಕೋಟಿ ರೂ ಪರಿಹಾರ ನೀಡುವಂತೆ ರಾಜ್ಯಕ್ಕೆ ಮನವಿ ಮಾಡಿರುವ ವರದಿಯನ್ನು ಕೇಂದ್ರ ತಂಡಕ್ಕೆ ನೀಡಿದ್ದೇವೆ. ರೈತರು ಧೃತಿಗೆಡುವ ಅವಶ್ಯಕತೆ ಇಲ್ಲಾ ಎಂದು ರೈತರಿಗೆ ಧೈರ್ಯ ತುಂಬಿದರು.
ಕುರಿರೊಪ್ಪ ವೀಕ್ಷಿಸಿದ ಕೇಂದ್ರ ತಂಡ:-
ಬರಗಾಲದಲ್ಲಿ ದನಕರುಗಳಿಗೆ ಮೇವಿನ ಕೊರತೆ ನೀಗಿಸಲು ಪಶು ಇಲಾಖೆಯಿಂದ ರಾಯವಾರ ಗ್ರಾಮದ ರೈತ ಮೈಲಾರಪ್ಪ ಎಂಬುವರಿಗೆ ಸೌತ್ ಆಫ್ರಿಕನ್ಟಾಲ್ ಮೈಲ್ ಎಂಬ ತಳಿಯ ಮುಸುಕಿನ ಜೋಳ ಬೀಜದಿಂದ ಬೆಳೆದಿರುವ ಮೇವಿನ ತೋಟದ ಪರಿಚಯ ಮಾಡಿಸಿದರು. ನಂತರ ರೈತರ ಜಮೀನಿನ ಸಮೀಪವೇ ಇದ್ದ ರೇಷ್ಮೆ ಹುಳುವಿನ ಸಾಕಾಣಿಕೆ ಕೇಂದ್ರ ಮತ್ತು ಕುರಿ ರೊಪ್ಪದಲ್ಲಿದ್ದ ಕುರಿಗಳ ಸಾಕಾಣಿಕೆ ಮತ್ತು ಅದರ ಲಾಭ ನಷ್ಟದ ವಿವರವನ್ನು ರೇಷ್ಮೆ ಮತ್ತು ಪಶು ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಬರಅಧ್ಯಯನ ತಂಡ ವೀಕ್ಷಣೆ ವೇಳೆ ಕೇಂದ್ರ ತಂಡದ ಅಧಿಕಾರಿಗಳಾದ ಸುಭಾಶ್ಚಂದ್ರ, ಸತ್ಯಕುಮಾರ್, ಶಾಲಿನಿ, ತುಮಕೂರು ಜಿಪಂ ಸಿಇಓ ಅನಿಸ್ ಕಣ್ಮಣಿಜಾಯ್, ಮಧುಗಿರಿ ಎಸಿ ಚಂದ್ರಶೇಖರ್, ತುಮಕೂರು ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಮಧುಗಿರಿ ಉಪನಿರ್ದೇಶಕ ಅಶೋಕ್, ತಹಸೀಲ್ದಾರ್ ನಾಗರಾಜು, ಇಓ ಶಿವಪ್ರಕಾಶ್, ಕೃಷಿ ಅಧಿಕಾರಿ ನಾಗರಾಜು, ನೂರ್ಆಜಾಂ, ಕಿರುನೀರು ಸರಬರಾಜು ಎಇಇ ರಂಗಪ್ಪ, ಎಂಜಿನಿಯರ್ ಮೋಹನ್, ಪಶು ಇಲಾಖೆಯ ಶಶಿಕುಮಾರ್, ರೇಷ್ಮೆಇಲಾಖೆಯ ಲಕ್ಷ್ಮೀನರಸಯ್ಯ ತೋಟಗಾರಿಕೆ ಪುಪ್ಪಲತಾ, ತಾ,ಪಂ ಉಪಾಧ್ಯಕ್ಷೆ ನರಸಮ್ಮ, ನರಸಿಂಹಮೂರ್ತಿ, ತಾಪಂ ಸದಸ್ಯ ವೆಂಕಟಪ್ಪ, ವೀರಣ್ಣ, ಗ್ರಾ,ಪಂ ಅಧ್ಯಕ್ಷೆ ಗಿರಿಯಮ್ಮ, ಗ್ರಾ,ಪಂ ಸದಸ್ಯ ರಾಮಕೃಷ್ಣ, ಮಾಜಿ ಗ್ರಾ,ಪಂ ಅಧ್ಯಕ್ಷ ನಾಗರಾಜು, ಪಿಡಿಒ ರಾಘವೇಂದ್ರ, ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ