ಪುಣೆ :
ಪತ್ನಿ ಹಾಗೂ 2 ವರ್ಷದ ಮಗುವನ್ನು ಕೂರಿಸಲು ಸೀಟು ಕೇಳಿದ ವ್ಯಕ್ತಿಯೊಬ್ಬನನ್ನು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಹಪ್ರಯಾಣಿಕರು ಹೊಡೆದು ಕೊಂದ ಘಟನೆ ಪುಣೆಯಲ್ಲಿ ನಡೆದಿದೆ.
26 ವರ್ಷದ ಸಾಗರ್ ಮಾರ್ಕಂಡ್ ಮೃತ ವ್ಯಕ್ತಿ. ಈತ ಬುಧವಾರ ರಾತ್ರಿ ತನ್ನ ಹೆಂಡತಿ ಜ್ಯೋತಿ ಮತ್ತು 2 ವರ್ಷದ ಮಗುವಿನ ಜೊತೆ ಮುಂಬೈ-ಲಾಥುರ್-ಬೀದರ್ ಎಕ್ಸ್ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ. ರೈಲು ಜನರಿಂದ ತುಂಬಿ ತುಳುಕುತ್ತಿತ್ತು. ಆದ ಕಾರಣ ಅವರಿಗೆ ಸೀಟು ಸಿಕ್ಕಿರಲಿಲ್ಲ. ಸಾಗರ್ ತನ್ನ ಹೆಂಡತಿ ಮಗುವನ್ನು ಕೂರಿಸಲು ಅಲ್ಲಿ ಕುಳಿತಿದ್ದ ಮಹಿಳೆಯರ ಬಳಿ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡು ಕುಳಿತುಕೊಳ್ಳಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ ಮಹಿಳೆಯರು ಅಶ್ಲೀಲವಾಗಿ ನಿಂದಿಸಿದ್ದರಿಂದ ಗಲಾಟೆ ಆರಂಭವಾಗಿದೆ.
ಈ ಜಗಳ ಅತಿರೇಕಕ್ಕೆ ತಿರುಗಿ ಮಹಿಳೆಯರು ಹಾಗೂ ಗಂಡಸರು ಸಾಗರ್ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಸಾಗರ್ ಹೆಂಡತಿ ಜ್ಯೋತಿ ತನ್ನ ಗಂಡನನ್ನು ಕಾಪಾಡುವಂತೆ ಅಲ್ಲಿದ್ದವರ ಬಳಿ ಸಹಾಯ ಕೇಳಿದ್ದಾಳೆ. ಆದರೆ ಯಾರೊಬ್ಬರೂ ಸಹ ಸಾಗರ್ನನ್ನು ರಕ್ಷಿಸಲು ಮುಂದೆ ಬರಲಿಲ್ಲ.
ಡಾಂಟ್ ಸ್ಟೇಷನ್ ಬಳಿ ರೈಲು ನಿಲ್ಲಿಸಿದಾಗ ಜ್ಯೋತಿ ರೈಲ್ವೆ ಪೊಲೀಸರ ಸಹಾಯ ಪಡೆದು, ಕೂಡಲೇ ಪಕ್ಕದ ಆಸ್ಪತ್ರೆಗೆ ಸಾಗರ್ನನ್ನು ರವಾನಿಸಿದ್ದಾರೆ. ತುಂಬಾ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಸಾಯುವ ಹಾಗೆ ವ್ಯಕ್ತಿಯನ್ನು ಥಳಿಸಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
