ತೊಪ್ಪನಹಳ್ಳಿ ಗ್ರಾಮದ ಹೇಮಂತ್, ಸ್ವಾಮಿ, ಯೋಗೇಶ್ ಹಾಗೂ ಶಿವರಾಜ್ ಬಂಧಿತ ಆರೋಪಿಗಳು. ನಿನ್ನೆ ಸಂಜೆ 8 ಜನರ ತಂಡ ಪ್ರಕಾಶ್ರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳಿಗಾಗಿ ಮದ್ದೂರು ಪೊಲೀಸರು ಬಲೆ ಬೀಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಂತ್ವನ ಹೇಳಿ ಮಾತನಾಡಿದ ಸಿಎಂ, ಪ್ರಕಾಶ್ ಜನಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದರು. ಇಂತಹ ವ್ಯಕ್ತಿ ಕಳೆದುಕೊಂಡು ನನಗೆ ನೋವಾಗಿದೆ ಎನ್ನುತ್ತಾ ಭಾವುಕರಾದರು.
ಎರಡು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಜೋಡಿ ಹತ್ಯೆಯಾದಾಗ ನಾನು ಈ ಗ್ರಾಮಕ್ಕೆ ಬಂದಿದ್ದೆ. ಆಗ ಪ್ರಕಾಶ್ ಕೊಲೆಯಾದ ವ್ಯಕ್ತಿಗಳ ಕುಟುಂಬದ ಪರ ನಿಂತಿದ್ದ. ಅದೇ ಇವತ್ತು ಪ್ರಕಾಶ್ ಕೊಲೆಯಾಗಲು ಕಾರಣ ಅನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಅವತ್ತು ಕೊಲೆ ಮಾಡಿದವರೇ ಇಂದು ಪ್ರಕಾಶ್ ಹತ್ಯೆ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ. ನಿನ್ನೆ ನಾನು ವಿಜಯಪುರದಲ್ಲಿದ್ದಾಗ ಪ್ರಕಾಶ್ ಸಾವಿನ ಸುದ್ದಿ ಬಂತು. ಆಗ ಮನಸ್ಸಿಗೆ ಅಘಾತವಾಗಿ ಉದ್ವೇಗದಿಂದ ಹಂತಕರನ್ನು ಶೂಟೌಟ್ ಮಾಡಿ ಎಂದಿದ್ದೆ. ನಾನು ಮುಖ್ಯಮಂತ್ರಿಯಾಗಿ ಆ ಮಾತು ಹೇಳಲಿಲ್ಲ. ಪ್ರಜೆಯಾಗಿ ಆ ಮಾತು ಹೇಳಿದೆ ಎಂದರು.
ಪ್ರಜೆಯಾಗಿ ಬಹಳ ನೋವಿನಿಂದ ಈ ಮಾತು ಹೇಳ್ತಿದ್ದೀನಿ. ಯಾಕಂದ್ರೆ ಕೊಲೆ ಮಾಡುವ ಹಂತಕರು ಬೇಲ್ ಮೇಲೆ ಆಚೆ ಬರ್ತಾರೆ.
ನಮ್ಮ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ . ಈ ರೀತಿಯ ವ್ಯವಸ್ಥೆ ನಮ್ಮ ಕಾನೂನಲ್ಲಿದೆ. ಶೂಟೌಟ್ ಹೇಳಿಕೆಯನ್ನು ಮಾಧ್ಯಮದವರು ವೈಭವೀಕರಿಸುತ್ತಾರೆ. ಬಿಜೆಪಿ ಅವರು ನಮ್ಮ ಕಾರ್ಯಕರ್ತರು ಸತ್ತರೆ ಈ ಕಾಳಜಿ ಇರಲ್ಲ ಅಂತಾರೆ. ಆದ್ರೆ ನನಗೆ ಯಾರ ಹತ್ಯೆಯಾದಾಗಲು ಮನಸ್ಸು ತಡೆಯಲ್ಲ ಎಂದರು.








