ನವದೆಹಲಿ:
ಮುಂಬರುವ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದರೆ, ದೇಶಾದ್ಯಂತ ಇರುವ ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಇಂದು ದೆಹಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ಪೂರ್ವಾಂಚಲ ಮಹಾಕುಂಭದಲ್ಲಿ ಭಾಗವಹಿಸಿ ಮಾತನಾಡಿದರು. ಅಕ್ರಮ ವಲಸಿಗರನ್ನು ಗೆದ್ದಲು ಹುಳಗಳಿಗೆ ಹೋಲಿಕೆ ಮಾಡಿರುವ ಅಮಿತ್ ಶಾ, ದೆಹಲಿ ಸೇರಿದಂತೆ ಇಡೀ ದೇಶದಲ್ಲಿ ಸುಮಾರು ಕೋಟಿಗೂ ಹೆಚ್ಚು ಅಕ್ರಮ ವಲಸಿಗರಿದ್ದಾರೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ತುಸು ಗೊಂದಲ ಮೂಡಿಸಿರುವುದೂ ನಿಜ. ಕೋಟಿಗೂ ಹೆಚ್ಚು ಅಕ್ರಮ ವಲಸಿಗರಿದ್ದಾರೆ ಎಂಬ ಶಾ ಹೇಳಿಕೆ ವಿವಾದ ಸೃಷ್ಟಿಸುವ ಸಾಧ್ಯತೆಯೂ ಇದೆ.
ಇದೇ ವೇಳೆ ರಾಹುಲ್ ಗಾಂಧಿ, ಕೇಜ್ರಿವಾಲ್ ಅಕ್ರಮ ವಲಸಿಗರನ್ನು ರಕ್ಷಿಸಿ, ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶಕ್ಕೆ ಸಮಸ್ಯೆ ಉಂಟುಮಾಡುತ್ತಿರುವ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಂಡರೆ ದೇಶಪ್ರೇಮಿಗಳಿಗೆ ಆತಂಕ ಉಂಟಾಗುವುದಿಲ್ಲ, ಆದರೆ ಅಕ್ರಮ ವಲಸಿಗರ ವಿರುದ್ಧ ನಾವು ಯಾವುದೇ ಕ್ರಮ ಕೈಗೊಂಡರೂ ರಾಹುಲ್ ಗಾಂಧಿ, ಕೇಜ್ರಿವಾಲ್ ನಮ್ಮ ಸರ್ಕಾರವನ್ನು ದೂರಲು ಪ್ರಾರಂಭಿಸುತ್ತಾರೆ ಎಂದು ಶಾ ಹರಿಹಾಯ್ದಿದ್ದಾರೆ.
ಬಾಂಗ್ಲಾದೇಶಿಯರನ್ನು ಗೆದ್ದಲು ಹುಳಕ್ಕೆ ಹೋಲಿಸಿದ ಶಾ ನಡೆಯಿಂದ ನೋವಾಗಿರುವುದಾಗಿ ಬಾಂಗ್ಲಾ ಹೇಳಿದೆ. ಇದೊಂದು ಅನಗತ್ಯ ಹೇಳಿಕೆ ಎಂದಿರುವ ಬಾಂಗ್ಲಾದೇಶ ಹೇಳಿಕೆಯನ್ನು ತೀವ್ರ ಖಂಡಿಸಿದೆ.
2019 ರಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚಿಸಿದ ನಂತರ ರಾಷ್ಟ್ರಾದ್ಯಂತ ಅಕ್ರಮ ವಲಸಿಗರನ್ನು ಪತ್ತೆ ಮಾಡುತ್ತೇವೆ ಎಂದು ಶಾ ಭರವಸೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/amit-shah-pti.gif)