ಶ್ರೀನಗರ :
ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾಪಡೆ ಸಿಬ್ಬಂದಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ.
ಭಾನುವಾರ ರಾತ್ರಿ ಮೂಲ್ ಚಿತ್ರಗಾಂ ಬಳಿಯ ಶೋಪಿಯಾನ್ ತುರ್ಕಾವಾನಗಮ್ನಲ್ಲಿ ತೆರಳುತ್ತಿದ್ದ ವಾಹನವನ್ನು ತಡೆದ ಭದ್ರತಾ ಸಿಬ್ಬಂದಿ ತಪಾಸಣೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ವಾಹನದಲ್ಲಿದ್ದ ಮೂವರು ಉಗ್ರರು ಗುಂಡಿನ ದಾಳಿ ಆರಂಭಿಸಿದ್ದರು. ಭದ್ರತಾಪಡೆ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ವಾಹನದಲ್ಲಿದ್ದ ಫಿರ್ದೋಸ್ ಅಹ್ಮದ್ ಬಟ್ ಮತ್ತಾತನ ಸಹಚರ ಸಜಾದ್ ಅಹ್ಮದ್ ಹತರಾದರು. ಮತ್ತೊಬ್ಬ ಉಗ್ರ ಕತ್ತಲಲ್ಲಿ ತಪ್ಪಿಸಿಕೊಂಡು ಪರಾರಿಯಾದ ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ.
ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಮೃತ ಸಂಬಂಧಿಕರ ವಶಕ್ಕೆ ನೀಡಲಾಗಿದೆ. ವಾಹನದ ತಪಾಸಣೆ ಮಾಡಿದಾಗ ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ದ್ವೇಷಕಾರಕ ದಾಖಲೆಗಳು ಪತ್ತೆಯಾದವು ಎಂದು ಮೂಲಗಳು ಹೇಳಿವೆ
ಇನ್ನು ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಶ್ಮೀರದ ಲಡಾಕ್ ಮತ್ತು ಸಿಯಾಚಿನ್ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನವೇ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ, ಸೇನಾ ಶಿಬಿರದಲ್ಲಿ ಯೋಧರ ಜತೆ ರಾಜನಾಥ್ ಸಿಂಗ್ ಸಂವಾದ ನಡೆಸಲಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
