ಬೆಂಗಳೂರು:
ಅಕ್ಟೋಬರ್ 15ರಿಂದ 18ರ ವರೆಗೆ ರಾಜ್ಕೋಟ್ನಲ್ಲಿ ನಡೆಯಲಿರುವ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಿಸಲಾಗಿದೆ. ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ. 2 ವರ್ಷಗಳ ಹಿಂದೆ ರಾಜ್ಯ ತಂಡ ತೊರೆದು ವಿದರ್ಭ ಪರ ಆಡಿದ್ದ ಕರುಣ್ ನಾಯರ್ ಮತ್ತೆ ಕರ್ನಾಟಕಕ್ಕೆ ಆಗಮಿಸಿದ್ದು, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ಭಾಗವಾಗಿರುವ ದೇವದತ್ ಪಡಿಕ್ಕಲ್ ಸೌರಾಷ್ಟ್ರ ವಿರುದ್ಧ ಪಂದ್ಯಕ್ಕೆ ಲಭ್ಯರಿಲ್ಲ. ಆ ಬಳಿಕದ ಪಂದ್ಯಗಳಿಗೆ ಅವರು ಲಭ್ಯರಿದ್ದಾರೆ. ಹಿರಿಯ ಆಟಗಾರರಾದ ಶ್ರೇಯಸ್ ಗೋಪಾಲ್, ವಿದ್ವತ್ ಕಾವೇರಪ್ಪ, ಅಭಿನವ್ ಮನೋಹರ್, ಯುವ ಬ್ಯಾಟರ್ ಆರ್.ಸ್ಮರಣ್ ಕೂಡಾ ತಂಡದಲ್ಲಿದ್ದಾರೆ. ಕೃತಿಕ್ ಕೃಷ್ಣ ಹಾಗೂ ಶಿಖರ್ ಶೆಟ್ಟಿ ಮೊದಲ ಬಾರಿ ತಂಡಕ್ಕೆ ಅಯ್ಕೆಯಾಗಿದ್ದಾರೆ.
ಎಲೀಟ್ ಹಂತದಲ್ಲಿ ಕರ್ನಾಟಕವು ಸೌರಾಷ್ಟ್ರ, ಗೋವಾ, ಕೇರಳ, ಮಹಾರಾಷ್ಟ್ರ, ಚಂಡೀಗಢ, ಮಧ್ಯಪ್ರದೇಶ ಮತ್ತು ಪಂಜಾಬ್ ತಂಡಗಳನ್ನು ಎದುರಿಸಲಿದೆ. ಎಲೈಟ್ ಡಿವಿಶನ್ನಲ್ಲಿ 32 ತಂಡಗಳಿರಲಿವೆ. ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ತಲಾ 8 ತಂಡಗಳಿವೆ. ಗ್ರೂಪ್ ಹಂತದಲ್ಲಿ ಪ್ರತೀ ತಂಡವೂ ತಲಾ 7 ಪಂದ್ಯಗಳನ್ನಾಡಲಿದೆ. ಗ್ರೂಪ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಉಲೀಯುವ ತಂಡಗಳು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಲಿವೆ. ಪ್ರತೀ ಗುಂಪಿನಲ್ಲಿ ತಳದಲ್ಲಿ ಉಳಿಯುವ ಎರಡು ತಂಡಗಳು ಮುಂಇನ ಸೀಸನ್ನಲ್ಲಿ ಪ್ಲೇಟ್ ಡಿವಿಶನ್ಗೆ ಹೋಗುತ್ತದೆ.
ಕರ್ನಾಟಕ ತಂಡ: ಮಯಾಂಕ್ ಅಗವಾರ್ಲ್ (ನಾಯಕ), ಕರುಣ್ ನಾಯರ್, ಸ್ಮರಣ್, ಶ್ರೀಜಿತ್ ಕೆ.ಎಲ್., ಶ್ರೇಯಸ್ ಗೋಪಾಲ್, ವೈಶಾಖ್, ವಿದ್ವತ್, ಅಭಿಲಾಶ್ ಶೆಟ್ಟಿ, ಎಂ. ವೆಂಕಟೇಶ್, ನಿಕಿನ್ ಜೋಸ್, ಅಭಿನವ್, ಕೃತಿಕ್ ಕೃಷ್ಣ, ಅನೀಶ್ ಕೆ.ವಿ., ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ.








