ಕಿವೀಸ್‌ ಪಂದ್ಯಕ್ಕೆ ರೋಹಿತ್‌, ಶಮಿಗೆ ರೆಸ್ಟ್‌ : ಕಾರಣ ಗೊತ್ತಾ….?

ದುಬೈ:

    ಮಾರ್ಚ್‌ 2 ರಂದು ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿಯ ಕೊನೆಯ ಲೀಗ್‌ ಪಂದ್ಯವನ್ನು ಆಡಲಿದೆ. ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿರುವ ಕಾರಣ ಈ ಪಂದ್ಯ ಅಷ್ಟಾಗಿ ಮಹತ್ವ ಪಡೆದಿಲ್ಲ. ಹೀಗಾಗಿ ನಾಯಕ ರೋಹಿತ್‌ ಶರ್ಮ ಮತ್ತು ವೇಗಿ ಮೊಹಮ್ಮದ್‌ ಶಮಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇವರಿಬ್ಬರ ಬದಲಿಗೆ ರಿಷಭ್‌ ಪಂತ್‌ ಮತ್ತು ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ಗೆ ಅವಕಾಶ ನೀಡಲಾಗುವುದು ಎಂದು ತಿಳಿದುಬಂದಿದೆ. ರೋಹಿತ್‌ ಅಲಭ್ಯರಾದರೆ ಕನ್ನಡಿಗ ಕೆ.ಎಲ್‌. ರಾಹುಲ್‌ ಆರಂಭಿಕನಾಗಿ ಗಿಲ್‌ ಜತೆ ಇನಿಂಗ್ಸ್‌ ಆರಂಭಿಸಲಿದ್ದಾರೆ ಎನ್ನಲಾಗಿದೆ.

   ಶಮಿ ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊಣಕಾಲಿ ಗಾಯದಿಂದ ಬಳಲಿದ್ದು ಕಂಡು ಬಂದಿತ್ತು. ನೋವಿನ ಮಧ್ಯೆಯೂ ಅವರು ಬೌಲಿಂಗ್‌ ಮುಂದುವರಿಸಿದ್ದರು. ರೋಹಿತ್‌ ಸ್ನಾಯು ಸೆಳೆತದಿಂದ ಬಳಲುತ್ತಿದ್ದು ಸ್ಪಲ್ಪ ಮಟ್ಟಿನ ಫಿಟ್ನೆಸ್‌ ಸಮಸ್ಯೆ ಹೊಂದಿದ್ದಾರೆ ಎನ್ನಲಾಗಿದೆ. ಸೆಮಿಫೈನಲ್‌ಗೆ ಇವರಿಬ್ಬರ ಲಭ್ಯತೆ ಮುಖ್ಯ. ಹೀಗಾಗಿ ಅವರಿಗೆ ಸೆಮಿ ಪಂದ್ಯಕ್ಕೂ ಮುನ್ನ ಟೀಮ್‌ ಮ್ಯಾನೇಜ್‌ಮೆಂಟ್‌ ಒಂದು ಪಂದ್ಯ ವಿಶ್ರಾಂತಿ ನೀಡಲು ಬಯಸಿದೆ ಎಂದು ಹೇಳಲಾಗಿದೆ. 

   ಪಾಕಿಸ್ತಾನ ಪಂದ್ಯಕ್ಕೂ ಮುನ್ನ ವೈರಲ್‌ ಜ್ವರದಿಂದ ಬಳಲುತ್ತಿದ್ದ ರಿಷಭ್‌ ಪಂತ್‌ ಸಂಪೂರ್ಣ ಗುಣಮುಖರಾಗಿ ಬುಧವಾರ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದರು. ಆದರೆ ಉಪ ನಾಯಕ ಶುಭಮನ್‌ ಗಿಲ್‌ ಅಭ್ಯಾಸ ನಡೆಸಿರಲಿಲ್ಲ.

   ಮತ್ತೆ ಬ್ಯಾಟಿಂಗ್‌ ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ ಅವರು ಸ್ಪಿನ್‌ ಬೌಲರ್‌ಗಳ ಎದುರು ಹೆಚ್ಚು ಹೊತ್ತು ಆಡಿ ಅಭ್ಯಾಸ ನಡೆಸಿದರು. ತಂಡದಲ್ಲಿರುವ ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜ ಅವರ ಬೌಲಿಂಗ್ ಎದುರು ಕೊಹ್ಲಿ ಅಭ್ಯಾಸ ಮಾಡಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಅವರು ಸ್ಪಿನ್ನರ್‌ಗಳೊಂದಿಗೆ ಆಡಿದರು. 

   ಶುಭಮನ್ ಗಿಲ್, ಕೆ.ಎಲ್‌ ರಾಹುಲ್‌, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರಿಷಭ್‌ ಪಂತ್‌, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಅರ್ಶ್‌ದೀಪ್‌ ಸಿಂಗ್‌, ಕುಲದೀಪ್ ಯಾದವ್.