ಕೊರಟಗೆರೆ :
ಬಯಲು ಸೀಮೆಯ ಭಾಗದ ಎತ್ತಿನಹೊಳೆ ಯೊಜನೆಯಲ್ಲಿ ಮೊದಲ ನಿರ್ಧಾರದಂತೆ ಕೊರಟಗೆರೆ ತಾಲ್ಲೂಕಿನ ಭೈರಗೊಂಡ್ಲು ಗ್ರಾಮದಲ್ಲಿ ನಿರ್ಮಾಣವಾಗಬೇಕಾಗಿರುವ ಬಫರ್ಡ್ಯಾಂನ್ನು ಸರ್ಕಾರ ರೈತರ ಪರಿಹಾರ ನೆಪವೊಡ್ಡಿ ಸ್ಥಳಾಂತರಿಸುವ ಹುನ್ನಾರ ಮಾಡಿದರೆ ರೈತರೊಂದಿಗೆ ಹೋರಾಟ ಮಾಡಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಶಾಸಕ ಡಾ:ಜಿ.ಪರಮೇಶ್ವರ ಸರ್ಕಾರವನ್ನು ಎಚ್ಚರಿಸಿದರು.
ಅವರು ಕೊರಟಗೆರೆ ವಿಧಾನ ಸಭಾಕ್ಷೇತ್ರದ ಕಸಬಾ ಹೋಬಳಿಯ ತುಂಬಾಡಿ ಹೊಸಕೆರೆ, ಚನ್ನರಾಯನದುರ್ಗ ಹೋಬಳಿಯ ಮಲ್ಲೇಕಾವುಕೆರೆ ಹಾಗೂ ಪುರವರ ಹೋಬಳಿಯ ಚೆನ್ನಸಾಗರದ ಚೆಕ್ಡ್ಯಾಂಮ್ ತುಂಬಿ ಕೋಡಿ ಬಿದ್ದ ಪ್ರಯುಕ್ತ ಕೆರೆಗಳಿಗೆ ಗಂಗಾಪೂಜೆ, ಬಾಗಿನ ಅರ್ಪಿಸಿ ಮಾತನಾಡಿ, ಕ್ಷೇತ್ರದಲ್ಲಿ ಕೆಲವು ಕಡೆ ಉತ್ತಮ ಮಳೆಯಾಗಿ ಕೆರೆಗಳು ತುಂಬಿವೆ. ಇನ್ನು ಹಲವುಕಡೆ ಮಳೆಯಾಗಬೇಕಿದೆ. ಪ್ರಾಕೃತಿಕ ಅಸಮತೋಲನವನ್ನು ನಾವೆಲ್ಲರೂ ಎದುರಿಸಬೇಕಿದೆ ಎಂದರು.
ಇದಕ್ಕಾಗಿಯೇ ಬಯಲು ಸೀಮೆಯ ಜನರ ನೀರಿನ ಬವಣೆಯನ್ನು ಕಡಿಮೆ ಮಾಡಲು ನೀರಾವರಿ ಯೋಜನೆಯಾಗಿ ಎತ್ತಿನಹೊಳೆ ಯೋಜನೆಯನ್ನು ಹಿಂದಿನ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿ 13,500 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಯಿತು. ನಂತರದ ಕುಮಾರಸ್ವಾಮಿರವರ ಸಮ್ಮಿಶ್ರ ಸರ್ಕಾರದಲ್ಲಿ ಈ ಯೋಜನೆಗೆ ಸಾಕಷ್ಟು ಹಣ ನೀಡಲಾಯಿತು. ಅಂದು ಉಪಮುಖ್ಯಮಂತ್ರಿಯಾಗಿದ್ದ ನಾನು ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಸಮಾನ ಪರಿಹಾರ ನೀಡಬೇಕು ಎಂದು ತೀರ್ಮಾನಿಸಲಾಯಿತು. ಹಿಂದೆಯೇ ಬಂದ ಯಡಿಯೂರಪ್ಪನವರ ಸರ್ಕಾರ ಈ ಯೋಜನೆ ವೆಚ್ಚವನ್ನು ಗುತ್ತಿಗೆದಾರರಿಗಾಗಿ ಪ್ರಸ್ತುತ ಬೆಲೆಗಿಂತ 10,000 ಕೋಟಿ ರೂ.ಗಳನ್ನು ಹೆಚ್ಚಿಸಿತು. ಆದರೆ ಬಫರ್ ಡ್ಯಾಂ ನಿರ್ಮಾಣದಲ್ಲಿ ಭೂಮಿ ಕಳೆದು ಕೊಳ್ಳುವ ರೈತರಿಗೆ ಸಮಾನ ಪರಿಹಾರಕ್ಕೆ 300 ಕೋಟಿ ಹೆಚ್ಚಿಗೆ ನೀಡಲು ಕಾನೂನು ತೊಡಕು ಎಂದು ಹೇಳುತ್ತಿರುವುದು ನೋವಾಗುತ್ತದೆ. ಗುತ್ತಿಗೆದಾರರಿಗೆ ಇಲ್ಲದ ಕಾನೂನು ರೈತರಿಗೆ ಎಂದರೆ ಏನು ಅರ್ಥ ಎನ್ನುವುದನ್ನು ಸರ್ಕಾರವೇ ಹೇಳಬೇಕು. ಇದರ ಹುನ್ನಾರ ಎನ್ನುವಂತೆ ಸರ್ಕಾರ ಡ್ಯಾಂ ಸ್ಥಳಾಂತರಕ್ಕೆ ಕೈ ಹಾಕಿದರೆ ರೈತರ ಜೊತೆಗೂಡಿ ಹೋರಾಟ ಮಾಡಲಾಗುವುದು ಎಂದರು.
ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಕ್ಷೇತ್ರದಲ್ಲಿ ಬಹಳಷ್ಟು ಚೆಕ್ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇದರಿಂದ ಮಳೆಯ ನೀರನ್ನು ಸಾಕಷ್ಟು ಹಿಡಿದಿಟ್ಟುಕೊಂಡರೆ ಸುತ್ತಲ ಪ್ರದೇಶಗಳ ಅಂತರ ಜಲ ಹೆಚ್ಚುತ್ತದೆ. ಜಾನುವಾರುಗಳಿಗೆ ಕುಡಿಯುವ ನೀರು ಅನುಕೂಲವಾಗುತ್ತದೆ.
ರೈತನ ನಿಜವಾದ ಸಂತೋಷ ಮಳೆ ಬಂದು ಕೆರೆಗಳು ಕೋಡಿ ಬಿದ್ದಾಗ, ಉತ್ತಮ ಬೆಳೆ ಪಡೆದಾಗ, ಅನ್ನದಾತನಿಗೆ ಯೋಜನೆ ನೀಡಿ ಕೆಲಸ ಮಾಡುವುದು ಸಾರ್ಥಕ ಸೇವೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಹಿದಾ ಜಮ್ ಜಮ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಪ್ಪ, ಕಿರುನಿರಾವರಿ ಎಇಇ ರಂಗನಾಥ್, ಜೆಇ ರಮೇಶ್ಕುಮರ್, ಎಇಇಗಳಾದ ಉಮಾಮಹೇಶ್, ಮಂಜುನಾಥ್, ಮಲ್ಲಯ್ಯ, ಗ್ರಾ.ಪಂ ಅಧ್ಯಕ್ಷರುಗಳಾದ ಪಾರ್ವತಮ್ಮರಾಜಣ್ಣ, ಶೈಲಾಜಪ್ರಸನ್ನಕುಮಾರ್, ಉಪಾಧ್ಯಕ್ಷರುಗಳಾದ ಪ್ರಸನ್ನಕುಮಾರ್, ಸಿದ್ದಗಂಗಮ್ಮನರಸಿಂಹಮೂರ್ತಿ, ನಟರಾಜು, ಕೃಷ್ಣಾರೆಡ್ಡಿ, ಚಲಪತಿ, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್.ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವತ್ಥ ನಾರಾಯಣ, ಶಂಕರ್, ಯುವಾಧ್ಯಕ್ಷ ವಿನಯ್ಕುಮಾರ್, ಮಾಹಿಳಾ ಅಧ್ಯಕ್ಷೆ ಜಯಮ್ಮ, ಮುಖಂಡರುಗಳಾದ ರಾಮಚಂದ್ರಪ್ಪ, ಲಕ್ಷ್ಮೀಶ ಟಿ.ಸಿ, ಗೊಂದಿಹಳ್ಳಿ ರಂಗರಾಜು, ಟಿ.ಸಿ.ರಾಮಯ್ಯ, ವೆಂಕಟ, ರಾಘವೇಂದ್ರ, ಹುಲಿಕುಂಟೆಪ್ರಸಾದ್, ಎಂಎನ್ಜೆ ಮಂಜುನಾಥ್, ಕಿರಣ್ಕುಮಾರ್, ಅರವಿಂದ್, ನಾಗಭೂಷಣ್, ಮಂಜುನಾಥ ಕೆ.ಎಲ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
