ಆರ್ಥಿಕ ಬಿಕ್ಕಟ್ಟು : ಶ್ವೇತಪತ್ರಕ್ಕೆ ಡಾ.ಜಿ.ಪರಮೇಶ್ವರ್ ಆಗ್ರಹ

 ಕೊರಟಗೆರೆ :

      ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಲ್ಲಿ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿಗೆ ಜನಸಂಖ್ಯೆಗನುಗುಣವಾಗಿ ಅಭಿವೃದ್ದಿ ಕಾರ್ಯಗಳನ್ನು ಪೂರೈಸಲು ದೇಶದಲ್ಲೇ ಪ್ರಥಮವಾಗಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಈ ಯೋಜನೆಯನ್ನು ಕೈಗೊಂಡಿತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.

      ಅವರು ತಾಲ್ಲೂಕಿನ ಚನ್ನರಾಯನ ದುರ್ಗ ಹೋಬಳಿಯಲ್ಲಿ ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ 24 ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದ ಕಾಲನಿಗಳಲ್ಲಿ ಸುಮಾರು 3.00 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

      ಅದೇ ರೀತಿಯಾಗಿ ಪ್ರತಿವರ್ಷದ ಆಯವ್ಯಯದಲ್ಲಿ ಸುಮಾರು 25,000 ಕೋಟಿ ರೂ.ಗಳನ್ನು ಈ ಯೋಜನೆಗೆ ಮೀಸಲಿಡಲಾಯಿತು. ಇದರ ಹಿನ್ನೆಲೆಯಲ್ಲಿ ಇಂದು 3.00 ಕೋಟಿ ರೂಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಬಹುತೇಕ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಇಂದು ಚಾಲನೆ ನೀಡಿದ್ದು ಅದೇ ರೀತಿಯಾಗಿ ಸಮಾಜ ಕಲ್ಯಾಣ, ಕೆಆರ್‍ಐಡಿಎಲ್ ಸೇರಿದಂತೆ ಇತರೆ ಇಲಾಖೆಗಳಿಗೂ ಸಹ ಈ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಶ್ವೇತ ಪತ್ರ ಹೊರಡಿಸಲು ಆಗ್ರಹ:-

      ರಾಜ್ಯ ಸರ್ಕಾರವು ಆರ್ಥಿಕ ಬಿಕ್ಕಟ್ಟನ್ನು ತೋರಿಸಿಕೊಳ್ಳುತ್ತಿದ್ದು, ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸರ್ಕಾರದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಿಬೇಕು. ಕೋವಿಡ್ ಸಮಯದಲ್ಲಿ ಸರ್ಕಾರದ ವಿರುದ್ದ ಹಣ ದುರುಪಯೋಗದ ಹಲವು ಆರೋಪಗಳು ಕೇಳಿಬರುತ್ತಿದ್ದು ಅದರ ವಿವರಣೆಯನ್ನು ನೀಡಬೇಕು. ರಾಜ್ಯದ ಜಿಎಸ್‍ಟಿಯಿಂದ ಕೇಂದ್ರ ಸರ್ಕಾರಕ್ಕೆ ಸುಮಾರೂ 1.50 ಲಕ್ಷ ಕೋಟಿ ತೆರಿಗೆ ಹಣ ರಾಜ್ಯ ಸರ್ಕಾರದಿಂದ ಸಂದಾಯವಾಗುತ್ತದೆ. ಅದರಲ್ಲಿ 45% ಹಣವು ನ್ಯಾಯಬದ್ದವಾಗಿ ರಾಜ್ಯಕ್ಕೆ ಬರಬೇಕು. ಕೇಂದ್ರವು ರಾಜ್ಯಕ್ಕೆ 30 ಸಾವಿರ ಕೋಟಿ ಹಣವನ್ನು ನೀಡಬೇಕು. ಇದರಲ್ಲಿ 18 ಸಾವಿರ ಕೋಟಿ ರಾಜ್ಯ ಸರ್ಕಾರಕ್ಕೆ ಬರಬೇಕು. ಉಳಿದ 12 ಸಾವಿರ ಕೋಟಿ ಸಾಲದ ರೂಪದಲ್ಲಿ ಬರಬೇಕು. ಆದರೆ ಕೇಂದ್ರ ಸರ್ಕಾರವು ಇಲ್ಲಿಯವರೆಗೂ ಕೊಟ್ಟಿರುವುದು 5600 ಕೋಟಿ ಮಾತ್ರ. ಕಳೆದ ತಿಂಗಳು ಮುಲಾಜಿಗೆ ನೀಡಿದಂತೆ ಕೇವಲ 864 ಕೋಟಿಗಳನ್ನು ಕೇಂದ್ರವು ನೀಡಿದ್ದು, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ನೀಡಬೇಕಾದ ನಿರ್ದಿಷ್ಟ ಹಣವನ್ನು ಇಲ್ಲಿಯವರೆಗೂ ನೀಡಿರುವುದಿಲ್ಲ. ರಾಜ್ಯ ಸರ್ಕಾರವು ಸಂಗ್ರಹಿಸಬೇಕಾದ ಹಣವನ್ನು ಸಂಗ್ರಹಿಸಿರುವುದಿಲ್ಲ. ಇದರ ಕೊರತೆಯಿಂದಾಗಿ ರಾಜ್ಯ ಸರ್ಕಾರವು ಹಣಕಾಸು ಶ್ವೇತಪತ್ರವನ್ನು ಮಾರ್ಚ್ ತಿಂಗಳ ಒಳಗಾಗಿ ಆಯವ್ಯಯ ಮಂಡನೆಗೂ ಮುಂಚೆ ತಿಳಿಸುವುದು ಒಳಿತು ಎಂದರು.

ಅಕ್ಕಾಜಿಹಳ್ಳಿ ಸರ್ವೇ ನಂ 33 ರ ಜಮೀನು ತನಿಖೆಗೆ ಆದೇಶ :-

      ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಾಜಿಹಳ್ಳಿ ಸರ್ವೇ ನಂ 33 ರಲ್ಲಿ ಹಲವು ವರ್ಷಗಳಿಂದ ಅನುಭವದಲ್ಲಿರುವ ರೈತರನ್ನು ಹೊರತುಪಡಿಸಿ ಹೊರಗಿನವರು ಸ್ಥಳೀಯ ವಿಳಾಸದೊಂದಿಗೆ ಅನುಭವದಲ್ಲಿಲ್ಲದಿದ್ದರೂ ಭೂಮಂಜೂರಾತಿಯನ್ನು ಪಡೆದಿರುವುದು ಗಮನಕ್ಕೆ ಬಂದಿದ್ದು, ಅವರಿಗೆ 2017 ರಲ್ಲಿ ಸಾಗುವಳಿ ಪತ್ರವನ್ನು ನೀಡಿರುವುದು ತಿಳಿದು ಬಂದಿದೆ. ಈ ಸಂಬಂಧ ಈಗಾಗಲೇ ತಹಸೀಲ್ದಾರ್ ರವರಿಗೆ ಪರಿಶೀಲಿಸಿ ತನಿಖೆ ಮಾಡುವಂತೆ ಆದೇಶಿಸಿದ್ದು, ಈ ಅಕ್ರಮ ಮಂಜೂರಾತಿಯ ಸಂಪೂರ್ಣ ವಿವರ ಮತ್ತು ದಾಖಲೆಗಳ ತನಿಖೆಗೆ ಜಿಲ್ಲಾಧಿಕಾರಿ ಮತ್ತು ಉನ್ನತ ಅಧಿಕಾರಿಗಳಿಗೆ ಪರಿಶೀಲಿಸುವಂತೆ ಪತ್ರವನ್ನು ಬರೆಯುವುದಾಗಿ ತಿಳಿಸಿದರು.

ಪಿಡಿಓ ಅಮಾನತಿಗೆ ಸೂಚನೆ:-

      ಶಾಸಕ ಡಾ.ಜಿ. ಪರಮೇಶ್ವರ್ ಎಸ್‍ಸಿಪಿ-ಟಿಎಸ್‍ಪಿ ಕಾಮಗಾರಿಗಳ ಭೂಮಿ ಪೂಜೆಗೆ ಜನವರಿ 19 ರಂದು ಬೆಳಗ್ಗೆ 10.30 ಕ್ಕೆ ಕುರಂಕೋಟೆ ಎಸ್‍ಸಿ ಕಾಲನಿಯಲ್ಲಿ ಭೂಮಿ ಪೂಜೆ ಮಾಡುವ ಸಂದರ್ಭದಲ್ಲಿ ಸ್ಥಳೀಯರು ಪಂಚಾಯತಿ ಕಾಮಗಾರಿಗಳ ಬಗ್ಗೆ ದೂರುಗಳನ್ನು ನೀಡಿದರು. ಆದರೆ ಸ್ಥಳದಲ್ಲಿ ಕುರಂಕೋಟೆ ಪಂಚಾಯತಿ ಪಿಡಿಒ ನಾಗರಾಜು ಸ್ಥಳದಲ್ಲಿ ಗೈರು ಹಾಜರಾಗಿದ್ದು, ಪಂಚಾಯತಿಗೆ ದಿನವು ಸಹ ಕರ್ತವ್ಯಕ್ಕೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಶಾಸಕರು ಇಒ ಶಿವಪ್ರಕಾಶ್‍ಗೆ ಸೂಚಿಸಿದರು.

      ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಅಕ್ಕಮಹಾದೇವಿ ನರಸಿಂಹರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ತಾ.ಪಂ ಅಧ್ಯಕ್ಷ ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಜಿ.ಪಂ ಮಾಜಿ ಸದಸ್ಯ ಪ್ರಸನ್ನಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಮಾಮಹೇಶ್, ಎಇಇಗಳಾದ ಮಂಜುನಾಥ್, ನಾಗಯ್ಯ, ಇಂಜಿನಿಯರ್‍ಗಳಾದ ಬಸವರಾಜು, ತಿಪ್ಪೇಸ್ವಾಮಿ ಕೆಂಚಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆಶಂಕರ್, ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೈಲಜಾ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಕವಿತಾ, ಮುಖಂಡರುಗಳಾದ ಶಿವಕುಮಾರ್, ಗಿರೀಶ್‍ಆರಾಧ್ಯ, ಗೊಂದಿಹಳ್ಳಿ ರಂಗರಾಜು, ರಾಮಸ್ವಾಮಿ., ರವಿಕುಮಾರ್, ಎಸ್‍ಎಲ್‍ಎನ್ ಸ್ವಾಮಿ, ಮಹೇಶ್, ವೆಂಕಟೇಶ್, ಅರವಿಂದ್, ರವಿಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link