ಕೊರಟಗೆರೆ :
ಪ್ರ್ರಾಮಾಣಿಕತೆ ಮತ್ತು ನಿಷ್ಠೆ ಅತ್ಯಂತ ಮಹತ್ವಪೂರ್ಣವಾದವುಗಳಾಗಿದ್ದು, ಯುವಕರು ಇದನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಡಾ||ಜಿ.ಪರಮೇಶ್ವರ ತಿಳಿಸಿದರು.
ಅವರು ಪಟ್ಟಣದ ಶ್ರೀ ಗುಂಡಾಂಜನೇಯಸ್ವಾಮಿ ದೇವಾಲಯದಲ್ಲಿ ನೂತನ ಸುರಕ್ಷಾ ಚಾರಿಟಬಲ್ ಸೇವಾ ಸಮಿತಿ ಉದ್ಘಾಟನೆ ಹಾಗೂ ಬಡಜನರಿಗೆ ಹೊಸ ಬಟ್ಟೆಯನ್ನು ವಿತರಿಸುವ ಸಮಾರಂಭದಲ್ಲಿ ಮಾತನಾಡಿದರು. ಪಟ್ಟಣದ ಗುಂಡಾಂಜನೇಯಸ್ವಾಮಿ ದೇವಸ್ಥಾನ ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ. ಅದೇ ರೀತಿಯಾಗಿ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯ 3000 ವರ್ಷಗಳ ಪುರಾತನ ಇತಿಹಾಸ ಹೊಂದಿದೆ. ಕೊರಟಗೆರೆ ವಿಧಾನ ಸಭಾ ಕ್ಷೇತ್ರದಾದ್ಯಂತ ಹೆಚ್ಚು ಆಂಜನೇಯ ಸ್ವಾಮಿ ದೇವಾಲಯಗಳಿವೆ. ಮಹರ್ಷಿ ವಾಲ್ಮೀಕಿ ರಚಿಸಿರುವ ಹಿಂದೂಗಳ ಪವಿತ್ರ ಗ್ರಂಥ ರಾಮಾಯಣದಲ್ಲಿ ಹನುಮ ದೇವರಿಗೆ ವಿಶೇಷ ಸ್ಥಾನ ನೀಡಲಾಗಿದೆ. ರಾಮಾಯಣದಲ್ಲಿ ಶ್ರೀ ರಾಮರಿಗೆ ಅತ್ಯಂತ ನಿಷ್ಠೆ ಮತ್ತು ಪ್ರ್ರಾಮಾಣಿಕತೆಯಿಂದ ಹನುಮ ದೇವರು ಸದಾಕಾಲ ನಡೆದುಕೊಂಡಿದ್ದಕ್ಕೆ ಅವರಿಗೆ ಅತ್ಯಂತ ಶಕ್ತಿ ಮತ್ತು ಆಧುನಿಕ ಜಗತ್ತಿನಲ್ಲಿ ಆರಾಧನೆಗಳು ಹೆಚ್ಚಾಗಿ ನಡೆಯುತ್ತಿವೆ. ಇದನ್ನು ಇಂದಿನ ಯುವ ಸಮಾಜದಿಂದ ನಿರೀಕ್ಷೆಯನ್ನು ಮಾಡಲಾಗುತ್ತಿದೆ. ಪ್ರಸ್ತುತ ಸಮಾಜದಲ್ಲಿ ಅದರಲ್ಲೂ ರಾಜಕೀಯರಂಗದಲ್ಲಿ ನಿಷ್ಠೆ ಮತ್ತು ಪ್ರ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಜನರು ಇದನ್ನು ನೋಡುವ ದೃಷ್ಟಿ ಬದಲಾಗಿದೆ. ದಲಿತ ಸಮಾಜಗಳು ಧಾರ್ಮಿಕ ಕಾರ್ಯಗಳಲ್ಲೂ ಸಹ ಮುಂದೆ ಬರಬೇಕಿದ್ದು, ಶೋಷಿತ ವರ್ಗಗಳೂ ಸಹ ಧಾರ್ಮಿಕ ಸೇವೆಗಳನ್ನು, ಸಾಮಾಜಿಕ ಸೇವೆಗಳನ್ನು ಮಾಡಬಲ್ಲದು ಎಂದು ನಿರೂಪಿಸಬೇಕಿದೆ. ಗುಂಡಾಂಜನೇಯ ದೇವಸ್ಥಾನದ ಅಭಿವೃದ್ದಿಗೆ ತಾವು ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿ, ಬಡವರಿಗೆ ಹೊಸ ಬಟ್ಟೆ ನೀಡುತ್ತಿರುವ ಕೆಲಸ ಅತ್ಯಂತ ಪವಿತ್ರವಾದದ್ದು ಎಂದರು.
ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಬಿ.ಎಚ್. ಅನಿಲ್ಕುಮಾರ್ ಮಾತನಾಡಿ, ತುಮಕೂರಿನಲ್ಲಿ ಸಿದ್ದಾರ್ಥ ವಿದ್ಯಾಸಂಸ್ಥೆ ಅನೇಕ ಶೋಷಿತ ಮತ್ತು ತುಳಿತಕ್ಕೆ ಒಳಗಾದ ವರ್ಗದವರಿಗೆ ವಿದ್ಯಾಭ್ಯಾಸ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ದಲಿತರು ಮುಖ್ಯ ಭೂಮಿಕೆಗೆ ಬರಬೇಕಾದ ಅನಿವಾರ್ಯತೆ ಇದೆ. ಗುಂಡಾಂಜನೇಯ ದೇವಸ್ಥಾನವನ್ನು ಅಭಿವೃದ್ದಿ ಮಾಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ನಿವೃತ್ತ ಐ.ಎ.ಎಸ್ ಅಧಿಕಾರಿ ಬಲದೇವಕೃಷ್ಣ ಮಾತನಾಡಿ, ಸುರಕ್ಷಾ ಚಾರಿಟಬಲ್ ಸೇವಾ ಸಮಿತಿ ಮುಂಬರುವ ದಿನಗಳಲ್ಲಿ ಧಾರ್ಮಿಕ ಕಾರ್ಯದೊಂದಿಗೆ ಸಮಾಜ ಸೇವೆಯನ್ನು ಸಹ ರೂಢಿಸಿಕೊಂಡು ಬರಬೇಕು. ಮುಂಬರುವ ದಿನಗಳಲ್ಲಿ ದೇವಸ್ಥಾನದ ಅಭಿವೃದ್ದಿಯೊಂದಿಗೆ ಬಡಜನರು ಮದುವೆ ಮತ್ತು ಇತರ ಕಾರ್ಯಗಳನ್ನು ಮಾಡಿಕೊಳ್ಳುವ ಸಮುದಾಯ ಭವನವನ್ನು ನಿರ್ಮಿಸಿಕೊಳ್ಳಬೇಕು. ಇದಕ್ಕೆ ಶಾಸಕರು ಸಂಪೂರ್ಣ ಸಹಕಾರ ನೀಡುವ ಭರವಸೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಅಶೋಕ್ರಾಜವರ್ಧನ್, ರೋಹಿಣಿ ಸುರೇಶ್, ವೆಂಕಟಾಚಲಯ್ಯ, ಎಂ.ಎನ್.ಜೆ ಮಂಜುನಾಥ್, ಕೆ.ಪಿ.ಸಿ.ಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವತ್ಥನಾರಾಯಣ್, ಅರಕೆರೆಶಂಕರ್, ಯುವಕಾಂಗ್ರೆಸ್ ಅಧ್ಯಕ್ಷ ವಿನಯ್ಕುಮಾರ್, ಮಹಿಳಾ ವಿಭಾಗದ ಅಧ್ಯಕ್ಷೆ ಜಯಮ್ಮ, ಪ.ಪಂ ಸದಸ್ಯರಾದ ನಾಗರಾಜು, ಕೆ.ಆರ್ ಓಬಳರಾಜು, ಮಾಜಿ ಉಪಾಧ್ಯಕ್ಷ ಕೆ.ವಿ. ಮಂಜುನಾಥ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಘವೇಂದ್ರ, ಟ್ರಸ್ಟ್ ಅಧ್ಯಕ್ಷ ಶಂಕರ್, ಮುಖಂಡರಾದ ಗಣೇಶ್, ಮಂಜುನಾಥ್, ಛಾಯಾಪತಿ, ಕಣಿವೆ ಹನುಮಂತರಾಯಪ್ಪ, ಗಂಗಾಧರ್, ಮಧುಸೂದನ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
