ಕೊರಟಗೆರೆ : ಎಟಿಎಂನಲ್ಲಿ ಕಂದಾಯ ಪಾವತಿಗೆ ಅವಕಾಶ

 ಕೊರಟಗೆರೆ :

     ಪಟ್ಟಣ ಪಂಚಾಯತಿಯ ಎಸ್‍ಎಎಸ್ ಕಂದಾಯಗಳ ಮೊತ್ತವನ್ನು ಎಟಿಎಂ ಮುಖಾಂತರ ಕಛೇರಿಯಲ್ಲೇ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್ ತಿಳಿಸಿದರು.

     ಅವರು ಪಟ್ಟಣ ಪಂಚಾಯತಿಯಲ್ಲಿ ಎಸ್‍ಎಎಸ್ ಕಂದಾಯಗಳನ್ನು ಎಟಿಎಂ ಮುಖಾಂತರ ಪಾವತಿಸುವ ಯಂತ್ರಕ್ಕೆ ಚಾಲನೆ ಫೆ. 22ರಂದು ನೀಡಿ ಮಾತನಾಡಿದರು. ಪಟ್ಟಣ ಪಂಚಾಯತಿಯ ಕಂದಾಯದ ಮೊತ್ತವನ್ನು ಪಾವತಿಸಲು ಸಾರ್ವಜನಿಕರು ಬ್ಯಾಂಕ್‍ನಲ್ಲಿ ದಿನಗಟ್ಟಲೆ ನಿಲ್ಲಬೇಕಿತ್ತು. ಅದರಲ್ಲೂ ಹಲವರು 10 ವರ್ಷ ಸೇರಿದಂತೆ ಹಲವು ವರ್ಷಗಳ ಕಂದಾಯವನ್ನು ಒಟ್ಟಿಗೆ ಪಾವತಿಸಲು ಬ್ಯಾಂಕ್‍ನಲ್ಲಿ ಷರತ್ತಿನಂತೆ ದಿನಕ್ಕೆ ಎರಡೇ ಚಲನ್ ಪಾವತಿಸುವ ಅವಕಾಶವಿತ್ತು. ಇದರಿಂದ ಸಾರ್ವಜನಿಕರು ಕೆಲವು ದಿನಗಳನ್ನು ಚಲನ್ ಹಣ ಪಾವತಿಯಲ್ಲೇ ಕಳೆಯುವಂತಾಗಿತ್ತು. ಇದರಿಂದ ಕಂದಾಯ ಪಾವತಿಸುವವರಿಗೆ ಕೆಲಸ, ಶ್ರಮ, ಸಮಯ ವ್ಯರ್ಥದಿಂದ ಮಾನಸಿಕ ಕಿರಿಕಿರಿ ಉಂಟಾಗುತ್ತಿದ ದೂರುಗಳು ಕೇಳಿಬರುತ್ತಿತ್ತು.

     ಈ ವಿಷಯವನ್ನು ಪ.ಪಂ ನ ಅಧ್ಯಕ್ಷೆ ಮಂಜುಳ ಸತ್ಯನಾರಾಯಣ್ ಮತ್ತು ಉಪಾಧ್ಯಕ್ಷೆ ಭಾರತಿ ಸಿದ್ದಮಲ್ಲಯ್ಯರವರ ಅಧ್ಯಕ್ಷತೆಯಲ್ಲಿ ನಡೆದ ಪ.ಪಂನ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಕಂದಾಯ ಪಾವತಿದಾರರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ಮತ್ತು ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿರ್ಣಯ ಕೈಗೊಂಡರು. ಅದರ ಅನ್ವಯ ಕಂದಾಯದಾರರು ಎಟಿಎಂ ಮುಖಾಂತರ ಕಂದಾಯ ಪಾವತಿಸಲು ಪ್ರತ್ಯೇಕ ವಿಭಾಗವನ್ನು ಪಟ್ಟಣ ಪಂಚಾಯತಿಯಲ್ಲಿ ತೆರೆಯಲಾಗಿದೆ. ಹಣ ಪಾವತಿಸಿದ ರಸೀತಿಯಲ್ಲಿ ಒಂದನ್ನು ಪಪಂ ಕಛೇರಿಯಲ್ಲಿ ಇಟ್ಟುಕೊಂಡು ಮತ್ತೊಂದನ್ನು ಪಾವತಿದಾರರಿಗೆ ನೀಡಲಾಗುವುದು. ಇದಕ್ಕೆ ಪ್ರತ್ಯೇಕ ಹಣವನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಸಾರ್ವಜನಿಕರಿಗಾಗಿ ಪಟ್ಟಣ ಪಂಚಾಯತಿ ಈ ನೂತನ ವ್ಯವಸ್ಥೆಯನ್ನು ಜಾರಿ ಮಾಡಿದೆ.

     ಸಾರ್ವಜನಿಕರು ಕಾಲಕಾಲಕ್ಕೆ ಎಲ್ಲಾ ಕಂದಾಯಗಳನ್ನು ಪಾವತಿಸಿದಲ್ಲಿ ಪಟ್ಟಣದ ಅಭಿವೃದ್ದಿಗೆ ಒಳಿತಾಗುವುದರೊಂದಿಗೆ ಕಂದಾಯದ ಹೊರೆಯಿಂದ ಸಾರ್ವಜನಿಕರು ಮುಕ್ತವಾಗಬಹುದು ಎಂದ , ಪಟ್ಟಣ ಪಂಚಾಯತಿಯ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.

      ಈ ಸಂದರ್ಭದಲ್ಲಿ ಸದಸ್ಯರಾದ ಅನಿತ, ನಾಗರಾಜು, ಮುಖಂಡರಾದ ಸತ್ಯನಾರಾಯಣ್, ಸಿದ್ದಮಲ್ಲಯ್ಯ, ಗಣೇಶ್, ರಮೇಶ್, ಮಂಜುನಾಥ್, ಕಲೀಂ, ಚೈತ್ರ ಸೇರಿದಂತೆ ಪ.ಪಂ ಸದಸ್ಯರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link