ಬ್ಲ್ಯಾಸ್ಟಿಂಗ್‍ಗೆ ಹಸುಗೂಸು ಮೃತ : ಶವಸಂಸ್ಕಾರಕ್ಕೆ ಅಡ್ಡಿಗೆ ವ್ಯಾಪಕ ಖಂಡನೆ 

ಕೊರಟಗೆರೆ/ ತುಮಕೂರು :

      ಕೊರಟಗೆರೆ ತಾಲೂಕು ಜಂಪೇನಹಳ್ಳಿಯ ಕೈಮರ ಗ್ರಾಮದ ದಲಿತ ಕುಟುಂಬದ 3 ತಿಂಗಳ ಹೆಣ್ಣುಮಗು ಎತ್ತಿನಹೊಳೆ ಕಾಮಗಾರಿ ಪೈಪ್‍ಲೈನ್ ಸಂದರ್ಭದಲ್ಲಿ ಉಂಟಾದ ಬ್ಲಾಸ್ಟಿಂಗ್ ಶಬ್ದಕ್ಕೆ ಬೆಚ್ಚಿಬಿದ್ದು ಸಾವನ್ನಪ್ಪಿದ್ದು, ಸುವರ್ಣಮುಖಿ ನದಿ ರಾಜಕಾಲುವೆ ಬಳಿ ಅಂತ್ಯ ಸಂಸ್ಕಾರಕ್ಕೆ ಮಂದಾದ ಮಗುವಿನ ಶವವನ್ನು ಖಾಸಗಿ ಗಾರ್ಮೆಂಟ್ಸ್ ಸೆಕ್ಯೂರಿಟಿ ಗುಂಡಿಯಿಂದ ಹೊರತೆಗೆಸಿದ ಅಮಾನವೀಯ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೊಳಗಾಗಿದೆ.

ಗಂಭೀರ ಸ್ವರೂಪ ಪಡೆದಿರುವ ಕೃತ್ಯದ ಬಗ್ಗೆಪರಾಮರ್ಶಿಸಲು ರಾಜ್ಯ ಅನುಸೂಚಿತ ಜಾತಿ, ಬುಡ್ಡಕಟ್ಟಗಳ ಆಯೋಗದ ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿ ಮಂಗಳವಾರ ಬೆಳಿಗ್ಗೆ ಜಂಪೇನಹಳ್ಳಿಗೆ ಭೇಟಿ ಕೊಡುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ದಲಿತ ಕುಟುಂಬಕ್ಕೆ ನ್ಯಾಯಕೊಡಿಸಬೇಕೆಂಬ ಆಗ್ರಹಗಳು ಕೇಳಿ ಬಂದಿವೆ.

    ಏನಿದು ಘಟನೆ:

      ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಸಮೀಪದ ಜಂಪೇನಹಳ್ಳಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಎತ್ತಿನಹೊಳೆಯ ಬ್ರೀಡ್ಜ್‍ನ ಕಾಮಗಾರಿ ಕಳೆದ ತಿಂಗಳಿಂದ ನಡೆಯುತ್ತಿದೆ. ಪೈಪ್‍ಲೈಲ್ ಅಳವಡಿಸಲು ಕಲ್ಲುಬಂಡೆ ಅಡ್ಡವಾದ ಹಿನ್ನೆಲೆ ಶನಿವಾರ ರಾತ್ರಿ ಸ್ಥಳೀಯರಿಗೆ ಮಾಹಿತಿಯೆ ನೀಡದೆ ಬ್ಲಾಸ್ಟಿಂಗ್ ಕೆಲಸ ನಡೆದಿದೆ. ಬ್ಲಾಸ್ಟಿಂಗ್‍ನ ಕರ್ಕಶ ಶಬ್ದದಿಂದ ಬೆಚ್ಚಿ ಬಿದ್ದ 3 ತಿಂಗಳ ಹಸುಗೂಸು ಹೆಣ್ಣು ಮಗು ಮನೆಯಲ್ಲಿಯೇ ಮೃತಪಟ್ಟಿದೆ.

      ಶಕ್ತಿಯಿಲ್ಲದ ದಲಿತ ಕುಟುಂಬ ಸುವರ್ಣಮುಖಿ ನದಿಗೆ ಹೊಂದಿಕೊಂಡ ಸ್ಮಶಾನದ ಜಾಗದಲ್ಲಿ ಮೃತ ಮಗುವಿನ ಅಂತ್ಯಕ್ರಿಯೆ ನಡೆಸಲು ಮುಂದಾಗಿದೆ. ಅಂತ್ಯಕ್ರಿಯೆ ಮಾಡದಂತೆ ಕುಟುಂಬಕ್ಕೆ ಬೆದರಿಕೆ ಹಾಕಿದ ಖಾಸಗಿ ಗಾರ್ಮೆಂಟ್ಸ್‍ನ ಸೆಕ್ಯೂರಿಟಿ 3 ತಿಂಗಳ ಹಸುಗೂಸಿನ ಮೃತ ದೇಹವನ್ನು ಗುಂಡಿಯಿಂದ ಹೊರಗಡೆ ತೆಗೆಸಿ ಬೇರೆಡೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ನೋವಿನ ವಿರುದ್ದ ಪ್ರಶ್ನಿಸುವ ಶಕ್ತಿಯಿಲ್ಲದ ದಲಿತ ಕುಟುಂಬವೊಂದು ದಾರಿ ಕಾಣದೆ ನದಿಯ ಮಧ್ಯದಲ್ಲೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ವಿಷಯ ತಿಳಿದು ತಹಸೀಲ್ದಾರ್ ಗೋವಿಂದರಾಜು ಸಂತ್ರಸ್ತ ಕುಟುಂಬದವರಿಂದ ಮಾಹಿತಿ ಸಂಗ್ರಹಿಸಿದ್ದು, ಸುವರ್ಣಮುಖಿ ನದಿ, ರಾಜಕಾಲುವೆ ಸ್ಮಶಾನ ಒತ್ತುವರಿ ಸಂಬಂಧ ಸರ್ವೆಗೆ ಸೂಚಿಸಿದ್ದಾರೆ. ಮಂಗಳವಾರ ಮೃತ ಮಗುವಿನ ಪೋಷಕರು ದೂರು ನೀಡಿದ್ದು, ಅದರ ಆಧಾರದಲ್ಲಿ ತನಿಖೆ ನಡೆಯುತ್ತಿದೆ ಎಂದು ಎಎಸ್ಪಿ ಉದೇಶ್‍ಕುಮಾರ್ ತಿಳಿಸಿದ್ದಾರೆ.
ಕೋಟ್

ಗಾರ್ಮೆಂಟ್ಸ್ ದಾಖಲೆ ಅಲಭ್ಯ..

      ಸುವರ್ಣಮುಖಿ ನದಿ ಮತ್ತು ರಾಜಕಾಲುವೆ ಒತ್ತುವರಿಯ ಜೊತೆ ದಲಿತರ ಸ್ಮಶಾನವು ನಾಶವಾಗಿದೆ. ಜೆಟ್ಟಿಅಗ್ರಹಾರ ಗ್ರಾಪಂಗೆ ಮಾಹಿತಿಯೆ ಇಲ್ಲದೆ, ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕೌಂಪೌಂಡ್ ನಿರ್ಮಾಣ ಮಾಡಲಾಗಿದೆ. ಆದರೆ ಗಾರ್ಮೆಂಟ್ಸ್‍ಗೆ ಸಂಬಂಧಿಸಿದ ದಾಖಲೆ ಅಥವಾ ನಾಮಫಲಕದ ಬಗ್ಗೆ ಖುದ್ದು ತಹಶೀಲ್ದಾರ್ ಕೇಳಿದರೂ ಸಹ ಗಾರ್ಮೆಂಟ್ಸ್ ಮಾಲೀಕರು ಕೊಡದೇ ಇರುವುದೇ ಅಕ್ರಮ ಒತ್ತುವರಿಗೆ ಸಾಕ್ಷಿಯಾಗಿದೆ.

     ನಮಗೆ ಸ್ವಂತ ಮನೆಯೆ ಇಲ್ಲ. ಕತ್ತಲಿನ ಗುಡಿಸಲೆ ನಮ್ಮ ಮನೆ. ಬ್ಲಾಸ್ಟಿಂಗ್ ಶಬ್ದದಿಂದ ನನ್ನ ಮಗು ಬೆಚ್ಚಿ ಬಿದ್ದು ಮೃತ ಪಟ್ಟಿದೆ. ಅಂತ್ಯಕ್ರಿಯೆ ವೇಳೆ ಗುಂಡಿಯಿಂದ ಮಗುವನ್ನು ಬಲವಂತವಾಗಿ ಶಾಹಿ ಗಾರ್ಮೆಂಟ್ಸ್ ಸೆಕ್ಯುರಿಟಿ ಹೊರಗಡೆ ತೆಗೆಸಿದ್ದಾರೆ. ನಮಗೆ ಓದು ಬರಹ ಗೊತ್ತಿಲ್ಲ. ನಮ್ಮ ನೋವು ಕೇಳೋರು ಯಾರು ಇಲ್ಲ.

-ನೇತ್ರಾವತಿ, ಮೃತ ಮಗುವಿನ ತಾಯಿ, ಜಂಪೇನಹಳ್ಳಿ.

 
      ಮೃತ ಮಗುವಿನ ಅಂತ್ಯಕ್ರಿಯೆ ನಡೆಯುವ ವೇಳೆ ಶಾಹಿ ಗಾರ್ಮೆಂಟ್ಸ್ ಸೆಕ್ಯೂರಿಟಿಯಿಂದ ಅವಮಾನವೀಯ ದುರ್ಘಟನೆ ನಡೆದಿದೆ. ಬ್ಲಾಸ್ಟಿಂಗ್‍ನಿಂದ ಮಗು ಮೃತಪಟ್ಟಿದೆ ಎಂಬುದರ ಬಗ್ಗೆ ಪೋಷಕರಿಂದ ಮಾಹಿತಿ ಪಡೆಯಲಾಗಿದೆ. ಸುವರ್ಣಮುಖಿ ನದಿ ಮತ್ತು ರಾಜಕಾಲುವೆ ಒತ್ತುವರಿಯ ಬಗ್ಗೆ ತಕ್ಷಣ ಸರ್ವೇಗೆ ಸೂಚಿಸಿದ್ದೇನೆ. ಸ್ಮಶಾನ ಜಾಗ ಗುರುತಿಸಲು ಈಗಾಗಲೆ ಅಧಿಕಾರಿಗಳಿಗೆ ತಿಳಿಸಲಾಗಿದೆ.

-ಗೋವಿಂದರಾಜು, ತಹಸೀಲ್ದಾರ್, ಕೊರಟಗೆರೆ.

Recent Articles

spot_img

Related Stories

Share via
Copy link