ಕೊರಟಗೆರೆ :
ಗುಡುಗು-ಬಿರುಗಾಳಿ ಸಹಿತ ಮುಂಗಾರು ಮಳೆಗೆ ರೈತನೋರ್ವ ಬ್ಯಾಂಕಿನಿಂದ ಸಾಲ ಪಡೆದು ಒಂದು ಎಕರೆ ಜಮೀನಿನಲ್ಲಿ ಕಷ್ಟಪಟ್ಟು ಬೆಳೆಸಿದ್ದ 750ಕ್ಕೂ ಅಧಿಕ ಬಾಳೆಗಿಡಗಳು ನೆಲಕ್ಕೆ ಉರುಳಿರುವ ಘಟನೆ ಮಂಗಳವಾರ ನಡೆದಿದೆ.
ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲನಿಯ ರೈತ ಮಹಿಳೆ ಸಬ್ಜಾನ್ ಭೀ ಎಂಬುವರ ಜಮೀನಿನ ಬೆಳೆದಿರುವ ಬಾಳೆ ತೋಟವು ಸಂಪೂರ್ಣ ನೆಲಕಚ್ಚಿದೆ. ದಾರಿ ಕಾಣದ ರೈತ ಮಹಿಳೆ ಸರಕಾರದ ಪರಿಹಾರಕ್ಕೆ ಮನವಿ ಮಾಡಿದ್ದಾರೆ.
ಹಕ್ಕಿಪಿಕ್ಕಿ ಕಾಲನಿಯ ರೈತ ಮಹಿಳೆ ಸಬ್ಜಾನ್ಭೀ ಮಾತನಾಡಿ, ನಾವು ಭೈರೇನಹಳ್ಳಿ ಕೆನರಾ ಬ್ಯಾಂಕಿನಲ್ಲಿ ಸಾಲ ಪಡೆದು, ಒಂದು ಎಕರೆ ಜಮೀನಿನಲ್ಲಿ 1200 ಬಾಳೆಗಿಡ ಬೆಳೆಸಿದ್ದೆವು. ಮುಕ್ಕಾಲು ಭಾಗ ಬಾಳೆತೋಟ ನಾಶವಾಗಿ ಸುಮಾರು ಒಂದು ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ. ನಮ್ಮ ಜೀವನವೇ ಈಗ ಬೀದಿಗೆ ಬಿದ್ದಿದೆ. ಸರಕಾರ ಸಹಾಯ ಧನ ನೀಡಿ ರೈತರಾದ ನಮ್ಮನ್ನು ಉಳಿಸಬೇಕಾಗಿದೆ ಎಂದು ಮನವಿ ಮಾಡಿದರು.
ತಹಸೀಲ್ದಾರ್ ಗೋವಿಂದರಾಜು ಮಾತನಾಡಿ, ರೈತರ ಬಾಳೆತೋಟಕ್ಕೆ ಈಗಾಗಲೇ ಕಂದಾಯ ಅಧಿಕಾರಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟದ ಅಂಕಿ ಅಂಶದ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಗೆ ಪತ್ರ ಬರೆಯುತ್ತೇವೆ. ನಷ್ಟದ ಮಾಹಿತಿ ಬಂದ ಕೂಡಲೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಪುಷ್ಪ್ಪಲತಾ ಮಾತನಾಡಿ, ಕಂದಾಯ ಇಲಾಖೆಯಿಂದ ಮಾಹಿತಿ ಪಡೆದು ರೈತರು ತೋಟಕ್ಕೆ ಗುರುವಾರವೇ ಭೇಟಿ ನೀಡಿ ಪರಿಶೀಲನೆ ನಡೆಸಿ ನಷ್ಟದ ಅಂಕಿ ಅಂಶದ ವರದಿ ನೀಡುತ್ತೇವೆ. ರೈತರಿಗೆ ಪರಿಹಾರ ನೀಡುವಂತೆ ಸರಕಾರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
