ಸ್ವಾತಂತ್ರ್ಯಾ ನಂತರ ಶಿಕ್ಷಣ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ

 ಕೊರಟಗೆರೆ :

      ಸ್ವಾತಂತ್ರ್ಯಾ ನಂತರ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆಯಾಗಿದೆ. ಕೊರಟಗೆರೆ ವಿಧಾನಸಭಾ ವ್ಯಾಪ್ತಿಯಲ್ಲೂ ಸಹ ಪ್ರತಿಭಾನ್ವಿತ ಬಡ ಮಕ್ಕಳಿಗೆ 100 ಕೋಟಿ ರೂ. ಅನುದಾನದ ಬೃಹತ್ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಅವರು ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟ ಸಮೀಪದ ನೇಗಲಾಲ ಗ್ರಾಮದ ಹೊರವಲಯದಲ್ಲಿ 24.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾಗಾಂಧಿ ವಸತಿ ಶಾಲೆಯ ಕಟ್ಟಡವನ್ನು ಪರಿಶೀಲಿಸಿ ಮಾತನಾಡಿದರು. ಸ್ವಾತಂತ್ರ್ಯಾ ನಂತರ ದೇಶವು ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ಕ್ರಾಂತಿಯನ್ನು ಕಂಡಿದೆ. 1951 ರಲ್ಲಿ ಶೇಕಡ 18.33 ರಷ್ಟಿದ್ದ ಸಾಕ್ಷಾರತಾ ಪ್ರಮಾಣವು 2011ರ ಹೊತ್ತಿಗೆ ಶೇಕಡ 74.04 ರ ಮಟ್ಟಕ್ಕೆ ಏರಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆಯಾಗಿದೆ. ಅದಕ್ಕಾಗಿ ಸರ್ಕಾರವು ಸಾವಿರಾರು ಕೋಟಿ ರೂ. ಯೋಜನೆಗಳನ್ನು ಅಕ್ಷರ ಜ್ಞಾನಕ್ಕಾಗಿ ವೆಚ್ಚ ಮಾಡುತ್ತ್ತಿದೆ. ಸಮಾಜದಲ್ಲಿ ಬಡವರು, ತುಳಿತಕ್ಕೆ ಒಳಗಾದವರು ಶಿಕ್ಷಣದಿಂದ ಉನ್ನತ ಸ್ಥಾನವನ್ನು ತಲುಪಿದ್ದಾರೆ. ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಬಿ.ಆರ್ ಅಂಬೇಡ್ಕರ್‍ರವರ ಹೋರಾಟ ಮತ್ತು ಶ್ರಮದ ಸಾರ್ಥಕತೆ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಸಾಧ್ಯವಾಗುತ್ತಿದೆ. ನಮ್ಮ ಪರಿಸರ ಬದಲಾವಣೆಯಾಗಬೇಕಾದರೆ ಪ್ರತಿ ಮಗುವು ಕಡ್ಡಾಯ ಶಿಕ್ಷಣವನ್ನು ಪಡೆಯಬೇಕು. ಗುಣಾತ್ಮಕ, ಸಾಮಾನ್ಯ ಜ್ಞಾನದ ಶಿಕ್ಷಣವು ಪ್ರಸ್ತುತ ವಿದ್ಯಮಾನಗಳಿಗೆ ಅತಿ ಅವಶ್ಯಕತೆ ಇದೆ. ಇದರಿಂದ ಸಮಾನಾಂತರ ವ್ಯಕ್ತಿತ್ವದ ಮನಸುಗಳು ಮೂಡಿ ಮೇಲು-ಕೀಳುಗಳ ಭಾವನೆಯನ್ನು ತೊಲಗಿಸಬಹುದು ಎಂದರು.

ಕೊರಟಗೆರೆ ತಾಲ್ಲೂಕಿನಲ್ಲಿ ಶಾಸಕನಾಗಿದ್ದ ಮತ್ತು ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ 16 ಕೋಟಿ ರೂ.ಗಳ ಏಕಲವ್ಯ ವಸತಿಶಾಲೆಯನ್ನು ಪರಿಶಿಷ್ಟ ಪಂಗಡಕ್ಕಾಗಿ ನಿರ್ಮಾಣ ಮಾಡಲಾಯಿತು. ಅದೇ ರಿತಿಯಾಗಿ ಹುಲಿಕುಂಟೆ ಗ್ರಾಮದ ಬಳಿ ಕೋಟ್ಯಂತರ ರೂ. ಗಳ ವೆಚ್ಚದಲ್ಲಿ ಹೆಣ್ಣು ಮಕ್ಕಳಿಗಾಗಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜು, ರೆಡ್ಡಿಕಟ್ಟೆ ಬಾರೆ ಮತ್ತು ಬೈಚಾಪುರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸರ್ಕಾರಿ ಜಾಗವನ್ನು ಗುರ್ತಿಸಿ ನಿರ್ಮಾಣ ಮಾಡಲಾಯಿತು. ಇದರೊಂದಿಗೆ ಪಟ್ಟಣದಲ್ಲಿರುವ ಹೆಣ್ಣುಮಕ್ಕಳ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿನಿಲಯಗಳನ್ನು ಸಹ ಮೇಲ್ದರ್ಜೆಗೆ ಏರಿಸಲಾಗಿದೆ. ಪ್ರಸ್ತುತ ನೇಗಲಾಲ ಬಳಿ 24.50 ಕೋಟಿ ರೂ.ಗಳಲ್ಲಿ ಇಂದಿರಾಗಾಂಧಿ ವಸತಿ ಶಾಲೆ, ಕೋಳಾಲ ಬಳಿ 24.50 ಕೋಟಿ ರೂ.ಗಳಲ್ಲಿ ಅಂಬೇಡ್ಕರ್ ವಸತಿಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಂದು ಕಟ್ಟಡ ನಿರ್ಮಾಣವನ್ನು ಪರಿಶೀಲನೆ ಮಾಡಲಾಗುತ್ತಿದೆ. ಈ ಎಲ್ಲಾ ಶಾಲೆಗಳಿಗೂ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮೂಲಭೂತ ಸೌಕರ್ಯಗಳನ್ನು ಸರ್ಕಾರಗಳು ಒದಗಿಸುತ್ತವೆ. ಆದರೆ ಸರ್ಕಾರದ ಯೋಜನೆಗಳನ್ನು ಜನರು ಮತ್ತು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡರೆ ಮಾತ್ರ ಸಾರ್ಥಕವಾಗುತ್ತದೆ. ಕೊರಟಗೆರೆ ಕ್ಷೇತ್ರದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಬೆಳವಣಿಗೆಗೆ ಶ್ರಮ ವಹಿಸಿ ಕರ್ತವ್ಯ ನಿರ್ವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಗೋವಿಂದರಾಜು, ಬೆಸ್ಕಾಂ ಎಇಇ ಮಲ್ಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆಶಂಕರ್, ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಮೈಲಾರಪ್ಪ, ಯುವಾಧ್ಯಕ್ಷ ವಿನಯ್‍ಕುಮಾರ್, ತಾಪಂ ಮಾಜಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಮುಖಂಡರುಗಳಾದ ನಾಗಭೂಷಣ್, ಹುಲಿಕುಂಟೆ ಪ್ರಸಾದ್, ದಾಸರಹಳ್ಳಿ ರಮೇಶ್, ಚಿಕ್ಕರಂಗಯ್ಯ, ರಂಗಧಾಮಯ್ಯ, ರಂಗರಾಜು, ಗುರುಸಿದ್ದಪ್ಪ, ಕುಮಾರಸ್ವಾಮಿ , ನಂಜುಂಡಯ್ಯ, ಅರವಿಂದ್, ಮಂಜುನಾಥ್ ಕೆ.ಎಲ್ ಇತರರು ಹಾಜರಿದ್ದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap