ಶಿರಾ :
ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗೆ ಹೇಮಾವತಿಯ ನೀರು ಹರಿಯಲು ಹಿನ್ನೆಲೆಯಲ್ಲಿ ತುಮಕೂರು ನಾಲಾವಲಯದ ಪಟ್ರಾವತನಹಳ್ಳಿ ಎಸ್ಕೇಪ್ ಗೇಟ್ ಮೂಲಕ ಗುರುವಾರ ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ಚಾಲನೆ ನೀಡಿದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಯಲ್ಲಿ ಈಗಾಗಲೆ ಸ್ವಲ್ಪ ಪ್ರಮಾಣದ ನೀರಿದ್ದು ಈ ಎರಡೂ ಕೆರೆಗಳನ್ನು ತುಂಬಿಸಿಕೊಳ್ಳುವುದು ಖಚಿತ. ಹಾಗೆಯೇ ಮದಲೂರು ಕೆರೆಗೂ ನೀರನ್ನು ಹರಿಸುವುದು ನಮ್ಮ ಆದ್ಯ ಕರ್ತವ್ಯ ವಾಗಿದೆ ಎಂದರು.
ಮದಲೂರು ಕೆರೆಗೆ ನೀರು ಹರಿಸುವಂತೆ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರ ಬಳಿ ನಿಯೋಗ ತೆರಳಿ ಮನವಿ ಮಾಡಿಕೊಳ್ಳಲಾಗಿತ್ತು. ಇದೀಗ ಮುಖ್ಯಮಂತ್ರಿಗಳ ಬದಲಾವಣೆಯಾಗಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಅವರೂ ಕೂಡ ಸ್ಪಂದಿಸುವರೆಂಬ ವಿಶ್ವಾಸ ನಮ್ಮಲ್ಲಿದೆ ಎಂದರು.
2009ರಲ್ಲಿ ಬೊಮ್ಮಾಯಿ ಅವರು ಜಲ ಸಂಪನ್ಮೂಲ ಸಚಿವರಾಗಿದ್ದಾಗ ಮದಲೂರು ಕೆರೆಗೆ ಬಂದು ಪರಿಶೀಲನೆ ಮಾಡಿಕೊಂಡು ಹೋಗಿದ್ದರಲ್ಲದೆ, ಕೆರೆಗೆ ಹೇಮಾವತಿ ನೀರನ್ನು ಹರಿಸುವ ಭರವಸೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮದಲೂರು ಕೆರೆಗೆ ನೀರು ಹರಿಸುವ ಸಂಬಂಧ ಅವರೂ ಕೂಡ ಸಮ್ಮತಿಸುತ್ತಾರೆಂಬ ವಿಶ್ವಾಸವಿದ್ದು, ಈ ವರ್ಷ ಮದಲೂರು ಕೆರೆಯನ್ನೂ ತುಂಬಿಸಿಕೊಳ್ಳಲಾಗುವುದು. ಮದಲೂರು ಕೆರೆಯು ಭದ್ರಾ ಯೋಜನೆಯ ವ್ಯಾಪ್ತಿಗೂ ಒಳಪಟ್ಟಿದ್ದು, ಈ ಯೋಜನೆಯು ಕೂಡಲೇ ಫಲಪ್ರದಗೊಂಡಲ್ಲಿ ಮದಲೂರು ಭಾಗಕ್ಕೆ ಭದ್ರಾ ನೀರು ಕೂಡ ಹರಿಯಲಿದೆ ಎಂದು ಶಾಸಕರು ತಿಳಿಸಿದರು.
ತೆಂಗು ಮತ್ತು ನಾರು ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಮದಲೂರು ಕೆರೆಗೆ ನೀರು ಹರಿಸುವುದಾಗಿ ಸುಳ್ಳು ಹೇಳಿಕೊಂಡು ಓಡಾಡುವ ಜನಪ್ರತಿನಿಧಿಗಳು ನಾವಲ್ಲ. ನೀರಿನ ರಾಜಕಾರಣಿಗಳು ನಾವಲ್ಲ. ಮದಲೂರು ಕೆರೆಗೆ ನೀರನ್ನು ತರುವಲ್ಲಿ ಎಲ್ಲರೂ ಶ್ರಮಿಸುತ್ತೇವೆ ಎಂದರು.
ಗ್ರಾಮಾಂತರ ಬಿ.ಜೆ.ಪಿ. ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಮಾಲಿ ಮರಿಯಪ್ಪ, ತರೂರು ಬಸವರಾಜು, ಸುಧಾಕರಗೌಡ, ಮಾಲಿ ಸಿ.ಎಲ್.ಗೌಡ, ಮದಲೂರು ನರಸಿಂಹಮೂರ್ತಿ, ನಟರಾಜು, ಕೋಟೆ ರವಿ, ನರೇಂದ್ರ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
