ಕೊರಟಗೆರೆ ;
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಅವರ ಒಡೆತನದ ತುಮಕೂರು ಸಿದ್ದಾರ್ಥ ನಿರ್ವಹಣಾ ಅಧ್ಯಯನ ಸಂಸ್ಥೆಯ ಎಂಬಿಎ ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಅರಿವಿನ ಕಾರ್ಯಕ್ರಮ ನಮ್ಮ ಯುವ ಸಮಾಜಕ್ಕೆ ಮಾದರಿಯಾಗಿದೆ ಎಂದು ಗೊರವನಹಳ್ಳಿಯ ಶ್ರೀಮಹಾಲಕ್ಷ್ಮೀ ದೇವಾಲಯದ ಪ್ರಧಾನ ಅರ್ಚಕ ಡಾ.ಪ್ರಸನ್ನಕುಮಾರ್ ಅವರು ಅಭಿಪ್ರಾಯಪಟ್ಟರು.
ತಾಲೂಕಿನ ಕೋಳಾಲ ಹೋಬಳಿಯ ತೀತಾ ಗ್ರಾಪಂ ವ್ಯಾಪ್ತಿಯ ಕರುನಾಡಿನ ಸುಪ್ರಸಿದ್ಧ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಪುಣ್ಯಕ್ಷೇತ್ರದಲ್ಲಿ ತುಮಕೂರು ಸಿದ್ದಾರ್ಥ ನಿರ್ವಹಣಾ ಅಧ್ಯಯನ ಸಂಸ್ಥೆಯಿಂದ ಇತ್ತೀಚಿಗೆ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣೆ, ಕೊರೊನಾ ಜಾಗೃತಿ, ಪರಿಸರ ಸಂರಕ್ಷಣೆ ಮತ್ತು ಬಡಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆಮ್ಲಜನಕದ ಮಹತ್ವದ ಬಗ್ಗೆ ಕೊರೊನಾ ರೋಗವು ಈಗಾಗಲೇ ತಿಳಿಸಿಕೊಟ್ಟಿದೆ. ಪರಿಸರ ನಾಶವಾದರೇ ಮನುಕುಲ ಉಳಿಯಲು ಸಾಧ್ಯವಿಲ್ಲ. ಮಹಾಲಕ್ಷ್ಮಿ ಪುಣ್ಯಕ್ಷೇತ್ರದಲ್ಲಿ ಸಿದ್ದಾರ್ಥ ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಮತ್ತು ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದಾರೆ. ಸಿದ್ದಾರ್ಥ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳ ತಂಡಕ್ಕೆ ಶುಭವಾಗಲಿ. ಮಹಾಲಕ್ಷ್ಮಿ ದೇವಾಲಯಕ್ಕೆ ಆಗಮಿಸುವ ಭಕ್ತರು ಕೊರೊನಾ ರೋಗದ 3ನೇ ಅಲೆಯ ಬಗ್ಗೆ ಜಾಗೃತಿ ವಹಿಸಬೇಕಿದೆ ಎಂದು ಮನವಿ ಮಾಡಿದರು.
ಎಂಬಿಎ ವಿದ್ಯಾರ್ಥಿ ತೇಹರಾ ಫಾತೀಮಾ ಮಾತನಾಡಿ, ಗ್ರಾಮೀಣ ಪ್ರದೇಶದ ಹಿರಿಯ ನಾಗರೀಕರಿಗೆ ಆರೋಗ್ಯ ತಪಾಸಣೆ, ಕೊರೊನಾ ರೋಗದ ಜಾಗೃತಿ, ಪರಿಸರ ಸಂರಕ್ಷಣೆಯ ಅರಿವು, ಮತ್ತು ಸರ್ವಶಿಕ್ಷಣ ಅಭಿಯಾನದ ಮೂಲಕ ನಿರಾಶ್ರಿತ ಕುಟುಂಬದ ಬಡಮಕ್ಕಳಿಗೆ ನೋಟ್ಪುಸ್ತಕ ಮತ್ತು ಲೈಟ್ ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು.
ಎಂಬಿಎ ವಿದ್ಯಾರ್ಥಿಗಳಿಂದ ಗೊರವನಹಳ್ಳಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕೊರೊನಾ ರೋಗದ 3ನೇ ಅಲೆಯ ಜಾಗೃತಿ, ಮಾಸ್ಕ್ ವಿತರಣೆ, ಆರೋಗ್ಯ ತಪಾಸಣೆಯ ಜೊತೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ನಂತರ ತೀತಾ ಜಲಾಶಯದ ಹಿಂಭಾಗ ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ನೆಟ್ಟು, ನಿರಾಶ್ರಿತ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಹಾಗೂ ಬೆಳಕಿನ ದೀಪವನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಗೊರವನಹಳ್ಳಿ ಮಹಾಲಕ್ಷ್ಮಿ ಟ್ರಸ್ಟ್ನ ಅಧ್ಯಕ್ಷ ಬಿ.ಜಿ.ವಾಸುದೇವ, ಕಾರ್ಯದರ್ಶಿ ಚಿಕ್ಕನರಸಯ್ಯ, ಖಜಾಂಚಿ ಮಂಜುನಾಥ, ಸಿದ್ದಾರ್ಥ ನಿರ್ವಹಣಾ ಅಧ್ಯಯನ ಸಂಸ್ಥೆಯ ಎಂಬಿಎ ವಿದ್ಯಾರ್ಥಿಗಳಾದ ಕನಕಬಾಯಿ, ದಿವ್ಯಾಭಾರತಿ, ನೂರ್ಜೈಭಾ, ಮನೋಜ್ಞಾ, ರವಿರಾಜು, ಪೂಜಾ, ಕೌಸರ್, ಆದೀಯಾರೋಷನ್, ಮಮತಾ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
