ಕುಣಿಗಲ್ ; ರೈತರ ಸಮಸ್ಯೆ ನಿವಾರಣೆಗಾಗಿ ಜಾಗೃತಿ ಸಮಾವೇಶ

 ಕುಣಿಗಲ್ : 

      ಕೃಷಿ ಕ್ಷೇತ್ರದಲ್ಲಿ ರೈತಾಪಿ ಜನರು ಅನುಭವಿಸುತ್ತಿರುವ ನೋವು ಸಂಕಷ್ಟಗಳ ಬಗ್ಗೆ ಅರಿವು ಮೂಡಿಸಿ ರೈತರನ್ನು ಜಾಗೃತಿಗೊಳಿಸುವ ಜನಪರ ಹೋರಾಟವನ್ನು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಮಾಡುತ್ತಿದ್ದು ಇದೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಬೃಹತ್ ರೈತ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯಾಧ್ಯಕ್ಷ ಗುಡ್ಡೇಗೌಡರು ತಿಳಿಸಿದರು.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ರೈತ ಸಮುದಾಯಗಳಿಗೆ ಅಗತ್ಯ ಸಂಪನ್ಮೂಲಗಳು ದೊರಕದೆ ಸಾಲಗಾರರನ್ನಾಗಿ ಮಾಡಿ ನರಳುವಂತಹ ಪರಿಸ್ಥಿತಿ ಇದೆ. ಬ್ಯಾಂಕುಗಳು ಸಹಕಾರ ಸಂಘಗಳು ರೈತರನ್ನು ವಂಚಿಸುತ್ತಿವೆ, ಹಲವಾರು ವರ್ಷಗಳಿಂದ ಸರ್ಕಾರಿ ಬಗರ್ ಹುಕುಂ ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಸಾಗುವಳಿ ಚೀಟಿ ನೀಡದೆ ಸರ್ಕಾರಗಳು ವಂಚಿಸುತ್ತಿವೆ. ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಗಳು ರೈತರಿಗೆ ಅಗತ್ಯ ಸೌಲಭ್ಯಗಳನ್ನು ನೀಡದೆ ನಿಷ್ಕ್ರಿಯವಾಗಿವೆ ಎಂದು ರಾಜ್ಯಾಧ್ಯಕ್ಷರು ಆರೋಪಿಸಿದರು.

      ಈ ಎಲ್ಲಾ ಸಮಸ್ಯೆಗಳ ಬಗ್ಗೆ ಇಲಾಖೆಗಳನ್ನು ಒಂದು ಗೂಡಿಸಿ ಸಮಗ್ರ ಅಭಿವೃದ್ದಿಗೆ ಮುಂದಾಗುವಂತೆ ಒತ್ತಾಯಿಸಿ ಬೃಹತ್ ರೈತ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇತ್ತೀಚೆಗೆ ಕೆಲ ರೈತಪರ ಹೋರಾಟಗಾರರು ತಮ್ಮ ಅನುಕೂಲಕ್ಕಾಗಿ ಇತರೆ ಕೆಲ ರಾಜಕೀಯ ಪಕ್ಷಗಳೊಂದಿಗೆ ಶಾಮೀಲಾಗಿ ಗುರುತಿಸಿ ಕೊಳ್ಳುತ್ತಿದ್ದು, ಇದು ರೈತರ ಹೆಸರು ಬಳಸಿ ವಂಚನೆ ಮಾಡುವಂತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿರುವುದಕ್ಕೆ ಪುಷ್ಟಿ ನೀಡುವಂತಿರುವುದು ದುರಾದೃಷ್ಟಕರ ಎಂದರು.

      ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಹುಲಿಯೂರುದುರ್ಗದ ಯೋಗೀಶ್ ಕರಿಗೌಡ ಮಾತನಾಡಿ, ರೈತರ ಸಮಸ್ಯೆಗಳನ್ನು ಅವಲೋಕನ ಮಾಡಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ರೈತರ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕಾದ ಅನಿವಾರ್ಯತೆ ಇದ್ದು ಈ ನಿಟ್ಟಿನಲ್ಲಿ ರೈತರನ್ನು ಸಂಘಟಿಸಿ ಮಧ್ಯವರ್ತಿಗಳಿಂದ ರೈತರಿಗೆ ಆಗುತ್ತಿರುವ ಶೋಷಣೆಯನ್ನು ತಪ್ಪಿಸಲು ಜಾಗೃತಿ ಮೂಡಿಸಿ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ರಾಮಕೃಷ್ಣೇಗೌಡ, ಉತ್ತರ ಕರ್ನಾಟಕ ವಿಭಾಗದ ಅಂಬರೀಷ್, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ್, ಸಂಚಾಲಕ ಶಿವಕುಮಾರ್, ಹಾಗೂ ಕುಣಿಗಲ್ ತಾಲ್ಲೂಕಿನ ರಾಜೇಶ್, ಬೀಚಿನಳ್ಳಿ ಕೃಷ್ಣ ಕುಮಾರ್, ಗಂಗಾಧರ್, ಶ್ರೀನಿವಾಸ್ ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link