ಚಿತ್ರದುರ್ಗ:
ನಾಗರಹಾವು, ಹಂಸಗೀತೆ ಮೂಲಕ ಚಿತ್ರದುರ್ಗಕ್ಕೆ ಸ್ಟಾರ್ ವ್ಯಾಲ್ಯ್ವು ತಂದುಕೊಟ್ಟಿದ್ದೆ ಸಾಹಿತ್ಯ ದಿಗ್ಗಜ ತರಾಸು ಎಂದು ಖ್ಯಾತ ಸಾಹಿತಿ ಬಿ.ಎಲ್.ವೇಣು ಹೇಳಿದರು.ದೃಶ್ಯ ಮಾಧ್ಯಮ ಬಳಗದಿಂದ ಜಿಲ್ಲಾ ಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯದಲ್ಲಿ ಭಾನುವಾರ ನಡೆದ ತ.ರಾ.ಸು.ರವರ 100 ನೇ ಹುಟ್ಟುಹಬ್ಬದ ಪ್ರಯುಕ್ತ ತ.ರಾ.ಸು. ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ತ.ರಾ.ಸು.ರವರು ಬದುಕಿದ್ದರೆ 99 ವರ್ಷಗಳನ್ನು ಪೂರೈಸಿ ನೂರನೆ ವರ್ಷಕ್ಕೆ ಕಾಲಿಡುತ್ತಿದ್ದರು. ಕೆಲವರು ಬದುಕಿ ಸತ್ತಂತಿರುತ್ತಾರೆ. ಇನ್ನು ಕೆಲವರು ಸತ್ತು ಬದುಕಿದಂತಿರುತ್ತಾರೆ. ತ.ರಾ.ಸುರವರು ಸತ್ತರು ಬದುಕಿದಂತಿದ್ದಾರೆ. ತ.ರಾ.ಸು.ಬಗ್ಗೆ ಮಾತನಾಡಿದರೆ, ಬರೆದರೆ ದುರ್ಗದ ಬಗ್ಗೆ ಮಾತನಾಡಿದಂತೆ ನನ್ನ ಬರವಣಿಗೆಗೆ ತ.ರಾ.ಸು., ಹುಲ್ಲೂರು ಶ್ರೀನಿವಾಸ ಜೋಯಿಸರೆ ಕಾರಣ ಎಂದು ಸ್ಮರಿಸಿಕೊಂಡರು.
ಚಿತ್ರದುರ್ಗದ ಐತಿಹಾಸಿಕ ಕಾದಂಬರಿ ಬರೆಯಲು ಆರಂಭಿಸಿದಾಗ ನನಗೆ ಸಾಕಷ್ಟು ಒತ್ತಡಗಳು ಬಂದವು. ಕೆಲವರು ದಮ್ಕಿ ಹಾಕಿದರು. ಆಗಿನ ಡಿ.ಸಿ., ಎಸ್.ಪಿ.ಗಳು ಕರೆದು ಕೇಳಿದರು. ಆದರೆ ನಾನು ಬಂಡಾಯದಿಂದ ಬಂದವನಾಗಿದ್ದರಿಂದ ಯಾವುದಕ್ಕೂ ಹೆದರದೆ ಬರವಣಿಗೆಯನ್ನು ಮುಂದುವರೆಸಿಕೊಂಡು ಹೋದ ಪರಿಣಾಮ ಇಂದು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಹದಿನಾಲ್ಕು ವರ್ಷಗಳ ಕಾಲ ಐತಿಹಾಸಿಕ ಕಾದಂಬರಿಯನ್ನು ನಾನು ಬರೆಯಲು ಆಗಲಿಲ್ಲ. ಲಕ್ಷ್ಮಣತೆಲಗಾವಿ ನನಗೆ ಪ್ರೋತ್ಸಾಹಿಸಿದ್ದರಿಂದ ಬರೆಯಲು ಮತ್ತೆ ಆರಂಭಿಸಿದೆ. ತ.ರಾ.ಸು.ದಳವಾಯಿಗಳ ಬಗ್ಗೆ ಬರೆದರೆ ವಿನಃ ಮದಕರಿನಾಯಕ, ಹಿರೇಮದಕರಿನಾಯಕನ ಬಗ್ಗೆ ಬರೆಯಲಿಲ್ಲ. ಸಾಕಷ್ಟು ಸಲ
ತ.ರಾ.ಸು.ರವರ ಜೊತೆ ಮಾತಿನ ಘರ್ಷಣೆಯೂ ನಡೆದಿದೆ ಎಂದು ತಮಗಾದ ಅನುಭವಗಳನ್ನು ಹಂಚಿಕೊಂಡರು. ಏಪ್ರಿಲ್ ತಿಂಗಳಿಗೆ ವಿಶೇಷತೆಯಿದೆ. ತ.ರಾ.ಸು., ಶಂಕರಾಚಾರ್ಯ, ರಾಮಾನುಜಚಾರ್ಯ, ಮಹಾವೀರ, ಸಮಾನತೆಯ ಹರಿಕಾರ ಬಸವಣ್ಣ, ಅಂಬೇಡ್ಕರ್, ನಟ ರಾಜ್ಕುಮಾರ್, ಕ್ರಿಕೇಟ್ ತಾರೆ ಸಚಿನ್ ಇವರುಗಳೆಲ್ಲಾ ಹುಟ್ಟಿದ್ದು, ಇದೇ ತಿಂಗಳಿನಲ್ಲಿ ಎಂದು ಬಣ್ಣಿಸಿದರು.
ತ.ರಾ.ಸು.ರವರ ಸಾಧನೆ ತುಂಬ ದೊಡ್ಡದು. ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಕೆಲವೊಂದು ಕಾದಂಬರಿಗಳನ್ನು ನಾನು ಕೂಡ ಕಲ್ಪಿಸಿಕೊಂಡು ಬರೆದಿದ್ದೇನೆ. ಹಾಗಾಗಿ ನನ್ನ ಬರವಣಿಗೆಯೇ ಸುಳ್ಳು ಎಂದು ಕೆಲವರು ಟೀಕಿಸಿದ್ದುಂಟು. ವೀರಪುರುಷರ ಬಗ್ಗೆ ವೈಭವೀಕರಿಸಿ ಬರೆದಾಗ ಮಾತ್ರ ಓದುಗರಲ್ಲಿ ಅಭಿಮಾನ ಮೂಡುತ್ತದೆ. ಸಿನಿಮಾದಲ್ಲಿ ಕೇಕೆ, ಸಿಳ್ಳೆ ಹಾಕುತ್ತಾರೆ. ಇದರಿಂದ ಕಲೆಕ್ಷನ್ ಕೂಡ ಚೆನ್ನಾಗಿ ಆಗುತ್ತದೆ. ಇತಿಹಾಸವಿದ್ದಂತೆ ಕಾದಂಬರಿ ಬರೆಯಲು ಆಗುವುದಿಲ್ಲ. ಕಾದಂಬರಿಯಿದ್ದಂತೆ ಸಿನಿಮಾ ಮಾಡುವುದು ಆಗಲ್ಲ.
ಕಾದಂಬರಿಯೇ ಬೇರೆ, ಇತಿಹಾಸವೇ ಬೇರೆ. ಒಟ್ಟಾರೆ ಚಿತ್ರದುರ್ಗಕ್ಕೆ ಒಳ್ಳೆಯ ಹೆಸರು ತಂದು ಕೊಟ್ಟು ಭದ್ರ ಬುನಾದಿ ಹಾಕಿದವರು ತ.ರಾ.ಸು. ಎನ್ನುವುದನ್ನು ಯಾರು ಮರೆಯುವಂತಿಲ್ಲ. ಮೊಬೈಲ್ನಿಂದ ಓದುವವರೆ ಇಲ್ಲದಂತಾಗಿದ್ದಾರೆ. ಅಧಿಕಾರಕ್ಕೆ ಹೆಚ್ಚು ಶಕ್ತಿ ಇದೆ. ಐ.ಎ.ಎಸ್., ಐ.ಪಿ.ಎಸ್.ನಲ್ಲಿ ತೇರ್ಗಡೆಯಾದರೆ ಡಿ.ಸಿ., ಎಸ್.ಪಿ.ಆಗಬಹುದು ಆಗ ಜಾತಿಯತೆ ಅಡ್ಡಿ ಬರುವುದಿಲ್ಲ. ಅಧಿಕಾರಕ್ಕೆ ಅಂತಹ ಅಗಾಧವಾದ ಶಕ್ತಿಯಿದೆ. ಅದಕ್ಕಾಗಿ ಎಲ್ಲರೂ ಮೊದಲು ಶಿಕ್ಷಣವಂತರಾಗಿ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬರೀ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮಾತ್ರ ಮೀಸಲಾತಿಯನ್ನು ಕೊಟಿಲ್ಲ. ಎಲ್ಲಾ ವರ್ಗಕ್ಕೂ ಮೀಸಲಾತಿಯನ್ನು ನೀಡಿದ್ದಾರೆ. ಸರಿಯಾಗಿ ಬಳಸಿಕೊಂಡು ನಿಮ್ಮ ಜೀವನವನ್ನು ನೀವೆ ರೂಪಿಸಿಕೊಳ್ಳಬೇಕು. ಬೇರೆಯವರನ್ನು ಎದುರು ನೋಡಬಾರದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ, ಯೋಗೇಶ್ ಸಹ್ಯಾದ್ರಿ, ನಿಸರ್ಗ ಗೋವಿಂದರಾಜು, ಲಲಿತಾಕೃಷ್ಣಮೂರ್ತಿ, ಶಶಿಕಲ ರವಿಶಂಕರ್, ಯುವ ನ್ಯಾಯವಾದಿ ಅಶೋಕ್ಬೆಳಗಟ್ಟ, ಮುರಾರ್ಜಿ ಸೇರಿದಂತೆ ತ.ರಾ.ಸು.ಅಭಿಮಾನಿಗಳು ಹಾಗೂ ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
