ಹೂ, ಹಣ್ಣು, ಸಾಮಾನು ಖರೀದಿಯಲ್ಲಿ ಅಂತರ ಪಾಲನೆ ವಿಫಲ
ತುಮಕೂರು
ಶ್ರಾವಣ ಶುರುವಾಯಿತೆಂದರೆ ಹಬ್ಬಗಳು ಸಾಲುಗಟ್ಟಿ ಬರುತ್ತವೆ. ಕೊರೋನಾ ಕಾಲದಲ್ಲಿ ಹಬ್ಬಗಳನ್ನು ಆಚರಿಸಲಾಗದೆ, ಸುಮ್ಮನಿರಲಾಗದ ಸಂಕಷ್ಟದ ಪರಿಸ್ಥಿತಿಯನ್ನು ಜನರಲ್ಲಿ ಕೊರೋನಾ ತಂದೊಡ್ಡಿದೆ. ಈ ಸ್ಥಿತಿಯಲ್ಲಿ ಇದೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಎದುರಾಗಿದೆ.
ಕೊರೋನಾ ಕಷ್ಟದ ನಡುವೆ ಏನೆ ಸರಳವಾಗಿ ಹಬ್ಬ ಆಚರಿಸುತ್ತೇವೆಂದರೂ ಕೊಳ್ಳಬೇಕಾದ್ದನ್ನೆಲ್ಲಾ ಕೊಳ್ಳಲೇಬೇಕಾಗುತ್ತದೆ. ಮನೆಯಲ್ಲಿ ಲಕ್ಷ್ಮೀ ಪ್ರತಿಷ್ಠಾಪಿಸಿ ಪೂಜಿಸುವವರು ಹೊಸ ಸೀರೆ, ಪೂಜೆ ಪದಾರ್ಥಗಳನ್ನು ಕೊಳ್ಳಲೆಬೇಕಾಗುತ್ತದೆ. ಲಕ್ಷ್ಮೀ ಕೂರಿಸಿ ಹೊಸ ಸೀರೆ ಉಡಿಸಿ, ಒಡವೆ ತೊಡಿಸಿ, ಹೂವುಗಳಿಂದ ಅಲಂಕರಿಸಿ, ನೈವೇದ್ಯವಿರಿಸಿ, ಪೂಜಿಸಿ ಆಚರಿಸುವ ಹಬ್ಬದ ಹಿಂದಿನ ಸಂಭ್ರಮಗಳಿಗೆ ಈ ಬಾರಿ ಕೊರೋನಾ ಕಡಿವಾಣ ಹಾಕಿದೆ.
ಏನೇ ಆದರೂ ಹಬ್ಬ ಮಾಡಲೇಬೇಕು ಎಂಬ ಮನಸ್ಥಿತಿ ಜನರದ್ದು. ವರಮಹಾಲಕ್ಷ್ಮಿ ಹಬ್ಬವನ್ನು ಅವರವರ ಮನೆಗಳಲ್ಲಿಯೆ ಆಚರಿಸಿಕೊಳ್ಳುವುದರಿಂದ ಇದಕ್ಕೆ ಹೊರಗಿನಿಂದ ಕಡಿವಾಣ ಹಾಕಲು ಸಾಧ್ಯವಿಲ್ಲ. ಸರಳವಾಗಿ ಮನೆಯಲ್ಲಿಯೆ ಆಚರಿಸಿಕೊಳ್ಳಿ ಎಂದು ಈಗಾಗಲೆ ಹೇಳಲಾಗಿದೆ. ಈ ನಿಟ್ಟಿನಲ್ಲಿಯೆ ಹಬ್ಬದ ಆಚರಣೆ ಸಾಗಿದೆ. ಇಷ್ಟು ದಿನಗಳ ಕಾಲ ಯಾವುದೇ ಹಬ್ಬ ಹರಿದಿನ ಆಚರಿಸದ ಜನ ಸರಳವಾಗಿಯಾದರೂ ಮನೆಯಲ್ಲಿ ಲಕ್ಷ್ಮೀ ಹಬ್ಬ ಆಚರಿಸಲು ಕಳೆದ 2 ದಿನಗಳಿಂದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸ್ಥಿತಿವಂತರಿಗೆ ಯಾವುದೇ ಕೊರತೆ ಇಲ್ಲ. ಎಂದಿನಂತೆಯೇ ಹಬ್ಬ ಆಚರಿಸುತ್ತಾರೆ. ಆದರೆ ಸಂಕಟ ಎದುರಾಗಿರುವುದು ನಿರುದ್ಯೋಗಿಗಳಿಗೆ, ಸಂಬಳ ಕಡಿತ ಉಂಟಾಗಿರುವವರಿಗೆ, ಲಾಕ್ಡೌನ್ ಕೊರೊನಾ ಅವಧಿಯಲ್ಲಿ ಹಣ ಖಾಲಿ ಮಾಡಿಕೊಂಡಿರುವವರಿಗೆ. ಬದುಕು ಸಾಗಿದರೆ ಸಾಕು ಎನ್ನುವವರು ಈಗ ಹೆಚ್ಚಾಗಿದ್ದು, ಇಂತಹವರಿಗೆ ಲಕ್ಷ್ಮೀ ಹಬ್ಬ ಆಚರಿಸಲು ಕೊರೊನಾ ಕಡಿವಾಣ ಹಾಕಿದೆ.
ಮಾರುಕಟ್ಟೆಯಲ್ಲಿ ಹೂ, ಹಣ್ಣು ದರ ಕಳೆದ ಎರಡು ದಿನಗಳಿಂದ ಏರಿಕೆಯಾಗುತ್ತಲೆ ಇದೆ. ಹೂ ಒಂದು ಮಾರು 100 ರೂ.ಗಳವರೆಗೂ ಮಾರಾಟವಾಗಿದೆ. ಬಾಳೆಹಣ್ಣು ಕೆ.ಜಿ.ಗೆ 40 ರಿಂದ 50 ರೂ.ಗಳವರೆಗೆ ಮಾರಾಟವಾಗುತ್ತಿದ್ದು, ಈಗ 60 ರೂ.ಗಳಿಗೆ ಏರಿಕೆಯಾಗಿದೆ. ಸೇಬಿನ ದರ ಕೆ.ಜಿ. 1 ಕ್ಕೆ 200 ರೂ.ಗಳನ್ನು ದಾಟಿದೆ. ಗುಲಾಬಿ ಹೂ ಕೆ.ಜಿ.ಗೆ 200 ರಿಂದ 250 ರೂ.ಗಳವರೆಗೂ ಮಾರಾಟವಾಗಿದೆ. ಲಕ್ಷ್ಮೀ ಹಬ್ಬಕ್ಕೆ ಪೂಜೆಗಾಗಿ ಹೂವಿನ ಹಾರ ಬಯಸುವುದು ಸಾಮಾನ್ಯ. 100 ರೂ.ಗಳಿಂದ 500 ರೂ.ಗಳವರೆಗೂ ಒಂದು ಹೂವಿನ ಹಾರ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ದೃಶ್ಯ ಕಂಡು ಬಂದಿತು.
ವ್ಯವಹಾರ ನಷ್ಟ, ಆರ್ಥಿಕ ಸಂಕಷ್ಟ ನಡುವೆ ತಮ್ಮ ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ಹಬ್ಬ ಆಚರಣೆ ಮಾಡಿ, ಸಮಾಧಾನ ಕಾಣುವುದೆ ಸದ್ಯದ ಆದ್ಯತೆಯಾಗಿದೆ. ವರಮಹಾಲಕ್ಷ್ಮೀ ಹಬ್ಬ ಮಹಿಳೆಯರ ಹಬ್ಬವೆಂದು ಪ್ರಸಿದ್ಧಿ. ಲಕ್ಷ್ಮೀಗೆ ಹೊಸ ಸೀರೆ ಕೊಳ್ಳುವುದೇ ಈ ಹಬ್ಬದ ಪ್ರಧಾನ ಖರೀದಿ. ಸಾಧಾರಣ ಸೀರೆಯಿಂದ ದುಬಾರಿ ರೇಷ್ಮೆ ಸೀರೆವರೆಗೆ ಅವರವರ ಅನುಕೂಲಕ್ಕೆ ತಕ್ಕಂತೆ ಕೊಂಡು ಹಬ್ಬಕ್ಕೆ ಸಿದ್ಧರಾಗುತ್ತಾರೆ. ಯಾವ ಬೆಲೆಯ ಸೀರೆ ಕೊಂಡಿದ್ದಾರೆ ಎಂಬುದರ ಮೇಲೆಯೆ ಅವರ ಮನೆ ಹಬ್ಬದ ವೈಭವ ನಿರ್ಧರಿಸಬಹುದು ಎನ್ನುವ ಮಟ್ಟಿಗೆ ಕೊಂಡ ಸೀರೆಯು ಮಹತ್ವ ಪಡೆಯುತ್ತದೆ.
ಶ್ರಾವಣ ಮಾಸದ ಎರಡನೆ ಶುಕ್ರವಾರ ಮಹಾಲಕ್ಷ್ಮಿ ಹಬ್ಬದಂದು ಮನೆಯಲ್ಲಿ ವರಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜಿಸಿದರೆ ಧನ-ಧಾನ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಮಹಿಳೆಯರು ಹಬ್ಬದಂದು ಲಕ್ಷ್ಮೀ ಕೂರಿಸಿ ಹೊಸ ಸೀರೆ ಉಡಿಸಿ, ಆಭರಣ, ಹೂವುಗಳಿಂದ ಅಲಂಕರಿಸಲಾಗುತ್ತದೆ. ನೈವೇದ್ಯ ಮಾಡಿ ಸಂಜೆ ಮುತ್ತೈದೆಯರನ್ನು ಆಹ್ವಾನಿಸಿ ಅರಿಷಿಣ, ಕುಂಕುಮ, ಹೂವು, ಹಣ್ಣು ಕೊಡುವ ಮೂಲಕ ಮುತ್ತೈದೆಯರಲ್ಲಿ ಲಕ್ಷ್ಮೀ ರೂಪ ಕಾಣಲಾಗುತ್ತದೆ. ಭಕ್ತಿ-ಭಾವದ ಈ ಹಬ್ಬ ಮಹಿಳೆಯರ ಪಾಲಿಗೆ ಹೆಚ್ಚು ಸಡಗರ ತರುತ್ತದೆ. ಹಾಗಾಗಿ ಹಬ್ಬದ ಪದಾರ್ಥ ಖರೀದಿಯಲ್ಲೂ ಮಹಿಳೆಯರು ಹೆಚ್ಚು ಮುತುವರ್ಜಿ ವಹಿಸುತ್ತಾರೆ.
ಕೊರೊನಾ ಕಾಟ ಶುರುವಾದ ನಾಲ್ಕು ತಿಂಗಳಿನಿಂದ ನಗರದ ಎಂ.ಜಿ. ರಸ್ತೆಯ ಅಂಗಡಿಗಳಲ್ಲಿ ವ್ಯಾಪಾರವಿಲ್ಲದೆ ವಹಿವಾಟು ಮಂಕಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಐದಾರು ದಿನಗಳಿಂದ ಎಂ.ಜಿ.ರಸ್ತೆಯಲ್ಲಿ ವ್ಯಾಪಾರ ಚಟುವಟಿಕೆಯಲ್ಲಿ ಚೇತರಿಕೆ ಕಂಡು ಬಂದಿದೆ. ಎಲ್ಲಾ ಅಂಗಡಿಗಳಲ್ಲಿ ಮಹಿಳೆಯರೆ ಕಂಡು ಬರುತ್ತಿದ್ದಾರೆ. ವಿಶೇಷವಾಗಿ ಸೀರೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ಕಂಡು ಬಂದಿದೆ. ಬಹುತೇಕ ಅಂಗಡಿಗಳವರು ಹಬ್ಬದ ವಿಶೇಷ ರಿಯಾಯಿತಿ ಮಾರಾಟದ ಫಲಕ ಪ್ರದರ್ಶಿಸಿ ಗ್ರಾಹರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಹೆಚ್ಚಿನ ಅಂಗಡಿಗಳಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತದೆ. ಕೆಲವು ಕಡೆ ನಿರ್ಲಕ್ಷ್ಯ ಕಂಡು ಬಂದಿದೆ. ದೊಡ್ಡ ಅಂಗಡಿಗಳ ಎದುರು ಚೌಕಾಕಾರ, ವೃತ್ತಾಕಾರ ಬರೆದು ಗ್ರಾಹಕರು ವ್ಯಕ್ತಿಗತ ಅಂತರ ಕಾಪಾಡಿಕೊಂಡು ಸರತಿ ಸಾಲಿನಲ್ಲಿ ನಿಂತು ಅಂಗಡಿ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿದೆ. ಕೆಲವು ಅಂಗಡಿಗಳಲ್ಲಿ ಪ್ರವೇಶ ದ್ವಾರದಲ್ಲಿ ಗ್ರಾಹಕರಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ಮಾಡಿ ಒಳಗೆ ಬಿಡಲಾಗುತ್ತದೆ. ಅಂಗಡಿ ಒಳಗೆ ಗುಂಪುಗೂಡುವುದನ್ನು ತಡೆಯಲು ಕನಿಷ್ಠ ಜನರನ್ನು ಒಳಗೆ ಬಿಟ್ಟು, ಅವರ ವ್ಯಾಪಾರ ಮುಗಿದ ನಂತರ ಬೇರೆಯವರ ಪ್ರವೇಶಕ್ಕೆ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗಿದೆ.
ಒಳ ಪ್ರವೇಶಿಸುವವರಿಗೆ ಅಂಗಡಿಗಳ ಬಾಗಿಲಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ಮಾಡಿ, ಮಾಸ್ಕ್ ಧರಿಸಿರುವುದನ್ನು ಖಚಿತ ಪಡಿಸಿಕೊಂಡು ಒಳಗೆ ಬಿಡುವ ವ್ಯವಸ್ಥೆ ಅನುಸರಿಸಲಾಗುತ್ತಿದೆ.ಕೊರೊನಾ ಮುನ್ನೆಚ್ಚರಿಕೆ ಕ್ರಮ ಅನುಸರಿಸದ ಅಂಗಡಿಗಳ ವ್ಯಾಪಾರಿಗಳಿಗೆ 5 ರಿಂದ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದರೂ, ಕೆಲವು ಅಂಗಡಿಗಳಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ಮಾಸ್ಕ್ ಧರಿಸುವುದನ್ನು ಮಾತ್ರ ಕಡ್ಡಾಯ ಮಾಡಲಾಗುತ್ತಿದೆ. ಉಳಿದಂತೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸೇಷನ್, ವ್ಯಕ್ತಿಗತ ಅಂತರ ಕಾಪಾಡುವುದನ್ನು ಅನುಸರಿಸುತ್ತಿಲ್ಲ. ಅಂಗಡಿ ಒಳಗೆ ವ್ಯಕ್ತಿಗತ ಅಂತರ ಮರೆತು ಗುಂಪು ಗೂಡುವುದನ್ನು ನಿಯಂತ್ರಿಸುತ್ತಿಲ್ಲ. ಖರೀದಿಗೆ ಬಂದವರಿಗೂ ಅದರ ಭಯವಿದ್ದಂತೆ ಕಾಣುತ್ತಿಲ್ಲ.
ಕೊರೋನಾ ಹಾವಳಿ ಶುರುವಾದ ನಂತರ ಎಂ.ಜಿ. ರಸ್ತೆಯ ಮಳಿಗೆಗಳಲ್ಲಿ ಈ ಹಬ್ಬದ ಮೂಲಕ ವ್ಯಾಪಾರದ ಸುಧಾರಣೆ ಆರಂಭವಾದಂತಾಗಿದೆ. ಆದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈಗಿನ ವ್ಯಾಪಾರ ಡಲ್. ಜನರು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಿಲ್ಲ. ತೀರಾ ಅಗತ್ಯವೆನಿಸುವ ಪದಾರ್ಥಗಳನ್ನಷ್ಟೆ ಕೊಳ್ಳುತ್ತಿದ್ದಾರೆ. ಜೊತೆಗೆ ಈ ಬಾರಿ ಗ್ರಾಮೀಣ ಪ್ರದೇಶದ ಜನ ತುಮಕೂರಿಗೆ ಖರೀದಿಗೆ ಬರುತ್ತಿಲ್ಲ. ಬಂದು ಹೋಗಲು ಬಸ್ಸಿನ ಅನುಕೂಲವಿಲ್ಲ ಹಾಗೂ ಆರ್ಥಿಕ ತೊಂದರೆಯಿಂದ ಬೇಕಾದ್ದನ್ನು ಕೊಳ್ಳಲು ಹಿಂಜರಿಯುವಂತಾಗಿದೆ. ಸರಳವಾಗಿ ಹಬ್ಬ ಆಚರಿಸಿ, ಮುಗಿಸಿದರೆ ಸಾಕು ಎನ್ನುವ ಮನಸ್ಥಿತಿ ಹೆಚ್ಚಿನ ಜನರಲ್ಲಿ ಕಂಡು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
