ಹೊಸಪೇಟೆ :
ಕೇಂದ್ರದ ಮೋದಿ ಸರ್ಕಾರದಿಂದ ರೂ.500 ಹಾಗೂ 1000 ರೂ.ಗಳ ನೋಟು ಅಮಾನ್ಯಗೊಂಡು 2 ವರ್ಷ ತುಂಬಿದ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಹಾಗೂ ಹೊಸಪೇಟೆ ಮತ್ತು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಶುಕ್ರವಾರ ಕರಾಳ ದಿನಾಚರಣೆ ಆಚರಿಸಲಾಯಿತು.
ನಗರದ ರೋಟರಿ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವಾರು ಕಾರ್ಯಕರ್ತರು ಕಪ್ಪು ಬಟ್ಟೆ ಪಟ್ಟಿ ಕಟ್ಟಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರಧಾನಿ ಮೋದಿಯ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶಿವಯೋಗಿ ಮಾತನಾಡಿ, ಪ್ರಧಾನಿ ಮೋದಿ ನೋಟು ಅಮಾನ್ಯೀಕರಣ ಎಂಬ ಅವೈಜಾನಿಕ ತೀರ್ಮಾನ ಮಾಡಿ, ದೇಶದ ಆರ್ಥಿಕ ಸ್ಥಿತಿಯನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಇದರಿಂದ ನೂರಾರು ಅಮಾಯಕ ಜನ ತಮ್ಮ ಪ್ರಾಣವನ್ನು ಕಳೆದುಕೊಂಡರು. ಜೊತೆಗೆ 15 ಲಕ್ಷಕ್ಕೂ ಹೆಚ್ಚು ಜನ ತಮ್ಮ ಉದ್ಯೋಗ ಕಳೆದುಕೊಂಡರು. ಚುನಾವಣೆಯಲ್ಲಿ ಕೇವಲ ಸುಳ್ಳುಗಳನ್ನೇ ಹೇಳಿಕೊಂಡು ಅಧಿಕಾರಕ್ಕೆ ಬಂದು ಇವರು ಜನರಿಗೆ ಹೇಳಿದ ಒಂದೂ ಕೆಲಸ ಮಾಡದೇ, ಮಕ್ಮಲ್ ಟೋಪಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಆರ್ಥಿಕತೆ ದಿವಾಳಿಯಾಗಿದ್ದು, ಜಿ.ಡಿ.ಪಿ. ದರ ಪಾತಾಳಕ್ಕೆ ಕುಸಿದಿದೆ. ಆದರೂ ಪ್ರಧಾನಿಯವರು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ. ಇವರು ಹೇಳುವುದು ಒಂದು. ಮಾಡುವುದು ಇನ್ನೊಂದು ಅಂತಾ ದೇಶದ ಜನಕ್ಕೆ ಗೊತ್ತಾಗಿದೆ. ಹೀಗಾಗಿ ಮುಂಬರುವ 2019 ರ ಲೋಕಸಭಾ ಚುನಾವಣೆಯಲ್ಲಿ ಜನ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟವನ್ನು ತಿರಸ್ಕರಿಸಿ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಬ್ಲಾಕ್ಗಳ ಅಧ್ಯಕ್ಷರುಗಳಾದ ಎಂ.ರಫೀಕ್, ಅಮಾಜಿ ಹೇಮಣ್ಣ, ಮುಖಂಡರಾದ ಇಮಾಮ್ ನಿಯಾಜಿ, ಸಿದ್ದನಗೌಡ, ಗುಜ್ಜಲ ನಾಗರಾಜ್, ಸಂದೀಪ್ ಸಿಂಗ್, ನಿಂಬಗಲ್ ರಾಮಕೃಷ್ಣ, ವಿ.ಸೋಮಪ್ಪ, ಸಿ.ಆರ್.ಹನುಮಂತ, ಏಕಾಂಬ್ರೇಶ್, ಸೋಮಲಿಂಗಪ್ಪ, ಫಹೀಮ್ ಬಾಷ, ಪಾಂಡು, ಭಾಗ್ಯಲಕ್ಷ್ಮಿ ಭರಾಡೆ, ಎನ್.ವೆಂಕಟೇಶ್, ತೇಜುನಾಯ್ಕ್ ಸೇರಿದಂತೆ ಇನ್ನಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
