ತುಮಕೂರು
ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ಟಿಕೆಟ್ ದೊರೆಯದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ತಿಪಟೂರಿನ ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ತಿಳಿಸಿದರು.ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ತಿಪಟೂರು, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ನೀರು ಸರಬರಾಜು ಸೇರಿದಂತೆ ಸಮಾಜ ಸೇವೆಗಳನ್ನು ನಿಸ್ವಾರ್ಥವಾಗಿ ಮಾಡಿದ್ದೇನೆ. ಈ ಮೂಲಕ ತಾಲ್ಲೂಕಿನಲ್ಲಿ ಉತ್ತಮ ಜನಬೆಂಬಲ ಹೊಂದಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಸ್ನೇಹಿಯಾಗಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸಿ ಸೋಲನ್ನು ಕಂಡಿದ್ದೆ. ಆದರೂ ಜನಸೇವೆ ಮಾಡುವುದು ನಿಲ್ಲಿಸಿಲ್ಲ. ಜನರ ವಿಶ್ವಾಸ ಗಳಿಸಿದ್ದೇನೆ. ತಿಪಟೂರು ಭಾಗದ ಎಲ್ಲಾ ಹಳ್ಳಿಗಳಿಗೂ ಬರಗಾಲದಲ್ಲಿ ಗೋಶಾಲೆಗಳನ್ನು ತೆರೆದು ಪೋಷಣೆ ಮಾಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಬಂದಾಗ ನೀರು ಒದಗಿಸಿದ್ದೇನೆ. ಒಣಗಿದ ಕೆರೆಗಳಲ್ಲಿ ಹೂಳು ತೆಗೆಸಿ ನೀರು ಶೇಖರಣೆಯಾಗಲು ಅನುಕೂಲ ಮಾಡಿದ್ದೇನೆ. ಇನ್ನೂ ಅನೇಕ ರೀತಿಯಲ್ಲಿ ಸಮಾಜ ಸೇವೆ ಮಾಡಿ ಜನರ ಮನ್ನಣೆ ಗಳಿಸಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರು ಬೆಂಬಲ ನೀಡುತ್ತಿದ್ದು ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾನ ಮನಸ್ಕರಾದ ತುಮಕೂರಿನ ಉಮೇಶ್, ಗುಬ್ಬಿಯ ಗುರುಸ್ವಾಮಿ, ತಿಪಟೂರಿನ ಸ್ವಾಮಿ, ಗಿರೀಶ್, ದಿನೇಶ್ ಇತರರಿದ್ದರು.