ಬೆಂಗಳೂರು
ಕಂಠೀರವ ಸ್ಟುಡಿಯೋದಲ್ಲಿ ಸೋಮವಾರ ರಾತ್ರಿ ರೆಬಲ್ ಸ್ಟಾರ್ ಅಂಬರೀಶ್ ಅಂತ್ಯಕ್ರಿಯೆ ಮುಗಿಸಿಕೊಂಡು ಹೊರ ಬರುವಾಗ ನಡೆದುಕೊಂಡು ಹೋಗುತ್ತಿದ್ದ ನಟಿ ಜಯಪ್ರದಾ ಅವರನ್ನು ತಡೆದು ಕಾರಿನಲ್ಲಿ ಹತ್ತಿಸಿ ಕಳುಹಿಸಿ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಡಿಸಿಪಿ ಅಣ್ಣಾಮಲೈ ನೋಡಿಕೊಂಡಿರುವುದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ..
ಅಂಬರೀಶ್ ಅವರ ಅಂತ್ಯಕ್ರಿಯೆ ನಡೆದ ಕಂಠೀರವ ಸ್ಟುಡಿಯೋದ ಬಳಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದು ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಿಲಾಗಿತ್ತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ಜಯಪ್ರದಾ ಅವರು ಕಂಠೀರವ ಸ್ಟುಡಿಯೋದ ಗೇಟ್ ಬಳಿಯಿಂದ ನಡೆದುಕೊಂಡು ಬರುತ್ತಿದ್ದರು. ಗೇಟ್ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಎಸಿಪಿಯೊಬ್ಬರು ಸಾವಿರಾರು ಮಂದಿ ಸೇರಿದ್ದು ತಾವು ಕಾರಿನಲ್ಲಿ ಕುಳಿತು ಹೋಗುವಂತೆ ಮನವಿ ಮಾಡಿದ್ದಾರೆ.
ಇದನ್ನು ಒಪ್ಪದ ಜಯಪ್ರದಾ ಅವರೊಂದಿಗೆ ಜಗಳಕ್ಕಿಳಿದಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿ ಅಣ್ಣಾಮಲೈ ಅವರು ಕಾರಿನಲ್ಲಿ ಹೋಗಿ ಎಂದು ಕಾರಿನತ್ತ ಕೈ ತೋರಿಸಿ ಹೇಳಿ ಬೇಕಾದರೆ ತಮ್ಮ ಕಾರಿನಲ್ಲಿಯೇ ಹೋಗುವಂತೆ ಮನವಿ ಮಾಡಿದ್ದಾರೆ.
ಕೈ ತೋರಿದ್ದನ್ನು ಅಪಾರ್ಥ ಮಾಡಿಕೊಂಡ ಜಯಪ್ರದಾ ಅವರು ನಾನು ಮಾಜಿ ಸಾಂಸದೆ ಜನಪ್ರಿಯ ನಟಿ ನನ್ನತ್ತ ಡಿಸಿಪಿ ಕೈ ಮಾಡಿ ತಿಳಿಸುವುದು ಸರಿಯೇ ನನಗೆ ಅಗೌರವ ಬರುವಂತೆ ನೋಡಿಕೊಳ್ಳುವಿರಾ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕ್ರೋಶಕ್ಕೆ ಮಣಿಯದ ಅಣ್ಣಾಮಲೈ ಅವರು ಸಾವಿರಾರು ಮಂದಿ ಸೇರಿದ್ದಾರೆ ನಡೆದುಕೊಂಡು ಹೋದರೆ ಎನಾದರೂ ತೊಂದರೆಯಾದರೇ ಎನು ಮಾಡಬೇಕು ಕಾನೂನು ಪಾಲನೆ ನಮ್ಮ ಕರ್ತವ್ಯ ಕಾರಿನಲ್ಲಿ ಹೋದರೆ ಮಾತ್ರ ಅವಕಾಶ ನೀಡಲಾಗುವುದು ಇಲ್ಲದಿದ್ದರೆ ಸಾವಿರಾರು ಜನರ ಮಧ್ಯೆ ತಮಗೆ ನಡೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿ ಕಾರಿನಲ್ಲಿ ಕಳುಹಿಸಿಕೊಟ್ಟು ಮುಂದೆ ಆಗಬಹುದಾದ ತೊಂದರೆಯನ್ನು ನಿವಾರಿಸಿದ್ದಾರೆ.
ಪೊಲೀಸರ ಜೊತೆ ವಾಗ್ವಾದ
ನಟ ದರ್ಶನ್ ಕೂಡ ಪೊಲೀಸರ ಮೇಲೆ ಕೋಪಗೊಂಡು ಸರಿಯಾಗಿ ಸಂಚಾರ ನಿಭಾಯಿಸುತ್ತಿಲ್ಲ, ವಾಹನ ಸಂಚಾರಕ್ಕೆ ಸರಿಯಾಗಿ ದಾರಿ ಮಾಡಿಕೊಡುತ್ತಿಲ್ಲವೆಂದು ಕೂಗಾಡಿದರು. ಅಂಬರೀಷ್ ಅಂತ್ಯಕ್ರಿಯೆಗೂ ಮುನ್ನ ಅವರ ದರ್ಶನ ಮಾಡಿ ಅಂತಿಮ ನಮನ ಸಲ್ಲಿಸಲು ಕೆಲ ನಟರಿಗೆ ಅವಕಾಶ ಸಿಗಲಿಲ್ಲ. ಇದರಿಂದ ಕೋಪಗೊಂಡ ಗೋಲ್ಡನ್ ಸ್ಟಾರ್ ಗಣೇಶ್, ಜೈಜಗದೀಶ್, ರಂಗಾಯಣ ರಘು, ರವಿಶಂಕರ್ ಅವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದು ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ