ಚಿತ್ರದುರ್ಗ
ಇತ್ತೀಚಿನ ದಿನಗಳಲ್ಲಿ ಕನ್ನಡದ ಮೇಲೆ ಹೆಚ್ಚು ದಬ್ಬಾಳಿಕೆ ನಡೆಯುತ್ತಿದೆ. ಭಾಷೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಸಹಿಸಲಾರದ ಸಂಕಟವಾಗಿದೆ ಎಂದು ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಸ್.ಆರ್.ಗುರುನಾಥ್ ಹೇಳಿದರು
ಸಮೀಪದ ಮದಕರಿಪುರ ಗ್ರಾಮದಲ್ಲಿ ಶನಿವಾರ ನಡೆದ ಚಿತ್ರದುರ್ಗ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೆಲವು ಕಡೆ ಹೋದರೆ ತಮಿಳು, ಇನ್ನು ಕೆಲವು ಪ್ರದೇಶಗಳಿಗೆ ಹೋದರೆ ಇಂಗ್ಲಿಷ್ ಹಾವಳಿಯನ್ನು ನೋಡಿದರೆ ವಿದೇಶದಲ್ಲಿದ್ದೇವೇನೋ ಎನ್ನುವಂತೆ ಭಾಸವಾಗುತ್ತದೆ. ಕನ್ನಡದ ಮೇಲಿನ ದೌರ್ಜನ್ಯ ಸಹಿಸಲಾರದ ಸಂಕಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮದಕರಿಪುರದ ಗ್ರಾಮದೇವತೆಯ ಜಾತ್ರೆಯೋ, ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯೋ ಎನ್ನುವ ರೀತಿಯಲ್ಲಿ ಮದಕರಿಪುರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜನ ಸೇರಿರುವುದು ಮನಸ್ಸಿಗೆ ತುಂಬಾ ಖುಷಿಯಾಗಿದೆ ಎಂದರು
ಕನ್ನಡವನ್ನು ತಾಯಿಗಿಂತ ಹೆಚ್ಚು ಗೌರವಿಸಿದಾಗ ಮಾತ್ರ ಕರ್ನಾಟಕದಲ್ಲಿ ಕನ್ನಡ ಉಳಿಸಲು ಸಾಧ್ಯ. ಕರ್ನಾಟಕ ವಿಶಾಲವಾಗಿ ಬೆಳೆಯುತ್ತಿದೆ. ಆದರೆ ಕನ್ನಡದ ಮೇಲೆ ವಿಶ್ವಾಸ, ಭಕ್ತಿ, ಅಭಿಮಾನ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ. ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಬದಲಾವಣೆಯನ್ನು ಗೌರವಿಸಬೇಕು ಎಂದರು
ಮೊಬೈಲ್, ಟಿ.ವಿ.ಬೇಡ ಎಂದರೆ ಮನೆಯಿಂದ ಹೊರಗೆ ಎಸೆಯಲು ಸಾಧ್ಯವೇ. ಭಾಷೆ ಬಗ್ಗೆ ತೀರ ಮಡಿವಂತಿಕೆ ಇರಬಾರದು. ಕನ್ನಡದ ಜೊತೆ ಸಂಪರ್ಕ ಭಾಷೆ ಇಂಗ್ಲಿಷ್ ಇದ್ದರೆ ತಪ್ಪೇನಿಲ್ಲ. ಸಂಸ್ಕøತಿ, ಭಾಷೆ, ಧರ್ಮ ಬೆಳೆಯಲು ಸಹಕಾರಿಯಾಗಲಿದೆ. ಕನ್ನಡ ಮೊದಲ ಭಾಷೆ ಹಾಗಾಗಿ ಪ್ರಥಮ ಆದ್ಯತೆ ನೀಡಬೇಕು ಎಂದು ಗುರುನಾಥ್ ಅಭಿಪ್ರಾಯಪಟ್ಟರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಬಿ.ಪಿ.ವೀರೇಂದ್ರಕುಮಾರ್ ಎಂ.ಆರ್.ದಾಸೇಗೌಡರ ಮಕ್ಕಳಿಗಾಗಿ ವಿಜ್ಞಾನದ ರಂಜಕ ಕಥೆಗಳು, ಕೆ.ಪಿ.ಎಂ.ಗಣೇಶಯ್ಯರ ಮೆದಿಕೇರಿಪುರ ದರ್ಶನ, ಹಳವುದರ ಶಿವಕುಮಾರ್ರ ಸುಮ್ಮನಿದ್ದೀಯ ಎಚ್ಚರ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್.ದಾಸೇ ಗೌಡ, ತಹಶೀಲ್ದಾರ್ ಟಿ.ಸಿ.ಕಾಂತರಾಜ್, ಮದಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿಶಿವಮೂರ್ತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ರಂಗಾನಾಯ್ಕ, ಶ್ಯಾಮಲಶಿವಪ್ರಕಾಶ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.ಕಾಲ್ಕೆರೆ ಚಂದ್ರಪ್ಪ ಮತ್ತು ತಂಡದವರು ನಾಡಗೀತೆ ಹಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್.ದಾಸೇಗೌಡ ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಆಶಯನುಡಿಗಳನ್ನಾಡಿದರು.