ಹೊಸಪೇಟೆ :
ಬಿಜೆಪಿ ಪಕ್ಷವು ಆಪರೇಷನ್ ಕಮಲ ನಡೆಸಿ ಸಿಕ್ಕಿ ಬಿದ್ದಿರುವುದನ್ನು ಖಂಡಿಸಿ ಹೊಸಪೇಟೆ ಬ್ಲಾಕ್ ಹಾಗು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ನಗರದ ರೋಟರಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ಮಾಜಿ ಸಿಎಂ ಯಡಿಯೂರಪ್ಪನವರ ಕಾರ್ಟೂನ್ ಫೋಟೋದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಬಿಜೆಪಿ ವಿರುದ್ದ ಘೋಷಣೆಗಳನ್ನು ಕೂಗಿದರು.
ಬಳಿಕ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ ಮಾತನಾಡಿ, ಬಿಜೆಪಿ ಪಕ್ಷವು ಅಧಿಕಾರ ಹಿಡಿಯಲು ಪ್ರಜಾಪ್ರಭುತ್ವ, ಸಂವಿಧಾನವನ್ನು ಗಾಳಿಗೆ ತೂರಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ. ಕಳೆದ 8 ತಿಂಗಳುಗಳಿಂದ ನಿರಂತರವಾಗಿ ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷದ ಶಾಸಕರಿಗೆ ಹಣದ ಆಮೀಷ ಒಡ್ಡುತ್ತಿದೆ. ಮೊನ್ನೆ ಶಾಸಕರಿಗೆ ಸ್ವತಃ ಯಡಿಯೂರಪ್ಪನವರು ಆಮೀಷ ಒಡ್ಡಿದ ವೀಡಿಯೋ ಸಂಭಾಷಣೆಯೊಂದು ಬಯಲಿಗೆ ಬಿದ್ದಿದೆ. ಇದರಿಂದ ಬಿಜೆಪಿಯವರ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜು ಆಗಿದೆ ಎಂದರು.
ಬಿಜೆಪಿಯವರು ಎಷ್ಟೇ ಪ್ರಯತ್ನಿಸಿದರೂ ಸಮ್ಮಿಶ್ರ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ. ವಿರೋಧ ಪಕ್ಷವಾಗಿ ಬಿಜೆಪಿ ರಚನಾತ್ಮಕ ಕೆಲಸ ಮಾಡಲಿ. ಅದು ಬಿಟ್ಟು ಇದೇ ರೀತಿ ತಮ್ಮ ಚಾಳಿ ಮುಂದುವರೆಸಿದರೆ ಜನರೇ ಇವರಿಗೆ ಆಪರೇಷನ್ ಮಾಡುವ ದಿನಗಳು ದೂರವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿಂಕರ್ ರಫೀಕ್, ಅಮಾಜಿ ಹೇಮಣ್ಣ, ಮುಖಂಡರಾದ ಇಮಾಮ್ ನಿಯಾಜಿ, ಸಿದ್ದನಗೌಡ, ಸಂದೀಪಸಿಂಗ್, ಕವಿತಾಸಿಂಗ್, ಫಯಿಂ ಭಾಷಾ, ನಿಂಬಗಲ್ ರಾಮಕೃಷ್ಣ, ಎನ್.ವೆಂಕಟೇಶ, ದಲ್ಲಾಲಿ ಕುಬೇರ, ಮಧುರ ಚೆನ್ನಶಾಸ್ತ್ರಿ, ಭಾಗ್ಯಲಕ್ಷ್ಮಿ ಭರಾಡೆ, ಪಾಂಡು, ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/02/9hpt02.jpg)