ಚಿತ್ರದುರ್ಗ:
ಸ್ಪರ್ಧಾತ್ಮಕ ಯುಗದಲ್ಲಿ ಪಾಠದ ಕಡೆ ಮಕ್ಕಳು ಹೆಚ್ಚಿನ ಶ್ರದ್ದೆಯಿಟ್ಟಾಗ ಮಾತ್ರ ಏನಾದರೂ ಸಾಧನೆ ಮಾಡಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾಧಿಕಾರಿ ತಿಪ್ಪೇಸ್ವಾಮಿ ಹೇಳಿದರು.
ತ.ರಾ.ಸು.ರಂಗಮಂದಿರದಲ್ಲಿ ಶುಕ್ರವಾರ ಗುರುಕುಲ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.ಮಕ್ಕಳನ್ನು ಪ್ರೀತಿಯಿಂದ ಕಾಣುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರುಗಳ ಮೇಲಿದೆ. ಮಕ್ಕಳನ್ನು ಕೇವಲ ಪಠ್ಯಕ್ಕಷ್ಟೆ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿದಾಗ ಮಾನಸಿಕ ಹಾಗೂ ದೈಹಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಎಸ್.ಕೆ.ಬಿ.ಪ್ರಸಾದ್ ಮಾತನಾಡುತ್ತ ಪರೀಕ್ಷಾ ಸಮಯದಲ್ಲಿ ಮನೆಯಲ್ಲಿ ಪೋಷಕರು ಟಿ.ವಿ.ಮುಂದೆ ಕುಳಿತಾಗ ಮಕ್ಕಳ ಮನಸ್ಸು ಕೂಡ ಟಿ.ವಿ.ಕಡೆ ಸೆಳೆಯುತ್ತಿರುತ್ತದೆ. ಆದ್ದರಿಂದ ದೊಡ್ಡವರು ಟಿ.ವಿ.ನೋಡುವುದನ್ನು ಕಡಿಮೆ ಮಾಡಿ ಮಕ್ಕಳ ಓದಿನ ಕಡೆಗೆ ಗಮನ ಕೊಡಿ ಎಂದು ಸಲಹೆ ನೀಡಿದರು.
ಶಾಲೆಯಿಂದ ಬಂದ ಕೂಡಲೆ ಮಕ್ಕಳಿಗೆ ಓದಿ ಓದಿ ಎಂದು ಒತ್ತಡ ಹೇರುವ ಬದಲು ಹೇಗೆ ಓದುವುದು ಮತ್ತು ಹೇಗೆ ಬರೆಯಬೇಕು ಎನ್ನುವ ತಂತ್ರಗಾರಿಕೆಯನ್ನು ಪೋಷಕರು ಹಾಗೂ ಶಿಕ್ಷಕರು ಹೇಳಿಕೊಡುವುದು ಬಹಳ ಮುಖ್ಯ ಎಂದರು.ಗುರುಕುಲ ಶಾಲೆಯ ಕಾರ್ಯದರ್ಶಿ ರಾಮಲಿಂಗಶೆಟ್ಟಿ ವೇದಿಕೆಯಲ್ಲಿದ್ದರು.ಮಕ್ಕಳಿಂದ ಸಾಂಸ್ಕತಿಕ ನೃತ್ಯಗಳು ಪ್ರದರ್ಶನಗೊಂಡವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ