ಹಗರಿಬೊಮ್ಮನಹಳ್ಳಿ
ದೇಶಕ್ಕೆ ಅನ್ನನೀಡುವ ರೈತರು ಮತ್ತು ದೇಶಕಾಯುವ ಸೈನಿಕರು ಭಾರತ ದೇಶದ ದೊಡ್ಡ ಶಕ್ತಿಗಳು ಎಂದು ಹೂವಿನ ಹಡಗಲಿಯ ಡಾ.ಹಿರಿಶಾಂತವೀರ ಸ್ವಾಮೀಜಿ ಹೆಮ್ಮೆಯಿಂದ ಹೇಳಿದರು.
ತಾಲೂಕಿನ ಹಂಪಾಪಟ್ಟಣದಲ್ಲಿ ಭಾನುವಾರ ಜರುಗಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ತಾಲೂಕು ಸಂಚಾಲಕರಾದ ಶಿವಾನಂದ ಹುಲೇನರ ಅವರ ವಿವಾಹ ಮಹೋತ್ಸವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಸೈನಿಕರಿಗೆ ಸನ್ಮಾನಿಸಿದ ಬಳಿಕ ಅವರು ಮಾತನಾಡಿದರು. ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶದ ಗಡಿಕಾಯುತ್ತಿರುವುದರಿಂದ ನಾವು ಇಲ್ಲಿ ನೆಮ್ಮದಿಯಾಗಿದ್ದೇವೆ. ಇಂತಹ ವಿವಾಹ ಮಹೋತ್ಸವದಲ್ಲಿ ಅವರಿಗೆ ನೀಡುತ್ತಿರುವ ಗೌರವ ಸನ್ಮಾನ ಶ್ಲಾಘನೀಯ ಎಂದರು.
ನಂತರ ಬಿಜಾಪುರ ಜಿಲ್ಲೆಯ ಇಟ್ಟಿಗಿಯ ಗುರುಶಾಂತ ವೀರಸ್ವಾಮೀಜಿ ಮಾತನಾಡಿ, ಖಾಸಗಿ ಮದುವೆ ಸಮಾರಂಭದಲ್ಲಿ ಸೈನಿಕರನ್ನು, ರೈತರನ್ನು ಗುರುತ್ತಿಸಿ ಅವರಿಗೆ ಗೌರವ ಸಲ್ಲಿಸಿದರೆ ಅವರ ಸೇವೆ ಸಾರ್ಥಕವಾಗುತ್ತದೆ. ಅಲ್ಲದೆ, ಪ್ರತಿಯೊಂದು ಕುಟುಂಬದಲ್ಲಿ ತಮ್ಮ ಮಕ್ಕಳನ್ನು ದೇಶಕಾಯುವ ಸೇನೆಗೆ ಕಳಿಸುವ ಮನಸ್ಸು ಮಾಡುತ್ತಾರೆ ಎಂದರು.
ಯೋಧರಾದ ಭದ್ರವತಿಯ ನಾಗರಾಜ್ನಾಯ್ಕ, ತಾಲೂಕಿನ ಬನ್ನಿಕಲ್ಲು ಗ್ರಾಮದ ಅಶೋಕ ಪಾಟೀಲ್, ಮುತ್ಕೂರಿನ ಮಂಜುನಾಥ ಹಾಗೂ ಸೈನಿಕ ಸ್ವಯಂ ನಿವೃತ್ತಿಯಾದ ಸೊನ್ನದ ಮಂಜುನಾಥ ಇವರಿಗೆ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಹಿರೇಹಡಗಲಿಯ ಶ್ರೀ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜನವರು, ಮಾಜಿ ಶಾಸಕ ನೇಮಿರಾಜ್ನಾಯ್ಕ, ಕೂಡ್ಲಿಗಿ ತಾ.ಪಂ.ಅಧ್ಯಕ್ಷ ವೆಂಕಟೇಶ್ನಾಯ್ಕ, ಕಾಂಗ್ರೆಸ್ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಸೊನ್ನದ ಮಹೇಶ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಬಸವನಗೌಡ್ರು ಮತ್ತಿತರರು ಪಾಲ್ಗೊಂಡು ವಧುವರರನ್ನು ಹಾರೈಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ