ಚಿತ್ರದುರ್ಗ:
ಆಹಾರ ಪದ್ದತಿ ಜೀವನ ಶೈಲಿ ಬದಲಾವಣೆಯಾಗಿರುವುದರಿಂದ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆ ಕಾಡುತ್ತಿರುವುದರಿಂದ ಎಲ್ಲರೂ ದಿನಕ್ಕೆ ಒಂದು ಗಂಟೆಯಾದರೂ ಯೋಗ ಮಾಡಬೇಕೆಂದು ಭಾರತ್ ಸ್ವಾಭಿಮಾನ್ ಟ್ರಸ್ಟ್ ಚಿತ್ರದುರ್ಗ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಹೇಳಿದರು.
ಪತಂಜಲಿ ಯೋಗ ಪೀಠ ಹರಿದ್ವಾರ, ಭಾರತ್ ಸ್ವಾಭಿಮಾನ್ ಟ್ರಸ್ಟ್ ಚಿತ್ರದುರ್ಗ, ಭಾರತೀಯ ಪುರಾತತ್ವ ಇಲಾಖೆ, ಕೋಟೆ ವಾಯುವಿಹಾರಿಗಳ ಸಂಘದಿಂದ ಕೋಟೆ ಆವರಣದಲ್ಲಿ ಆರಂಭಗೊಂಡಿರುವ ಉಚಿತ ಯೋಗ ಪ್ರಾಣಾಯಾಮ ತರಬೇತಿ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಐದು ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಯೋಗವಿತ್ತು. ಸರ್ವ ರೋಗಕ್ಕೂ ಯೋಗ ರಾಮಬಾಣವಾಗಿರುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರಸಿದ್ದಿ ಪಡೆದಿದೆ. ಋಷಿಮುನಿಗಳು ಯೋಗ ಮಾಡುತ್ತಿದ್ದುದರಿಂದ ಭಾರತಕ್ಕೆ ಇದೊಂದು ಸಂಸ್ಕತಿಯಾಗಿದೆ. 2015 ರಲ್ಲಿ ವಿಶ್ವಸಂಸ್ಥೆಯಲ್ಲಿ ಯೋಗವನ್ನು ಅಂತರಾಷ್ಟ್ರೀಯ ದಿನವನ್ನಾಗಿ ಘೋಷಿಸಲಾಗಿದೆ. ಅಂದಿನಿಂದ ಪ್ರತಿ ವರ್ಷವೂ ಜೂನ್ ತಿಂಗಳಲ್ಲಿ ಯೋಗವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಯೋಗದ ಮಹತ್ವ ತಿಳಿಸಿದರು.
ಜಾತಿ, ಮತ, ಭೇದವಿಲ್ಲದೆ ಪ್ರತಿಯೊಬ್ಬರು ಯೋಗ ಮಾಡುವ ಮೂಲಕ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಬಹುದು. ಮನಸ್ಸು ಮತ್ತು ದೇಹವನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವುದೇ ಯೋಗ. ಎಲ್ಲಾ ಕಾಯಿಲೆಗಳಿಗೂ ಯೋಗದಲ್ಲಿ ಮದ್ದಿದೆ. ಚಿತ್ರದುರ್ಗದಲ್ಲಿ ಮೂವತ್ತು ಕೇಂದ್ರಗಳಲ್ಲಿ ಯೋಗವನ್ನು ಹೇಳಿಕೊಡಲಾಗುವುದು. ಎಲ್ಲಾ ರೋಗಗಳು ಉಲ್ಬಣಿಸುವುದು ಹೊಟ್ಟೆಯಿಂದಲೇ ಹಾಗಾಗಿ ಆಹಾರವನ್ನು ಚೆನ್ನಾಗಿ ಜಗಿದು ತಿನ್ನುಬೇಕು ಎಂದರು.
ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡುತ್ತ ಭೋಗದಿಂದ ರೋಗ ಬರುತ್ತದೆ. ರೋಗವನ್ನು ಹೋಗಲಾಡಿಸಲು ಯೋಗದ ಮೊರೆ ಹೋಗಬೇಕಾಗಿದೆ. ಹಿಂದಿನ ಕಾಲದಲ್ಲಿ ಬೀಸುವುದು ಕುಟ್ಟುವ ಪದ್ದತಿಯಿದ್ದುದರಿಂದ ಎಲ್ಲರೂ ಆರೋಗ್ಯವಂತರಾಗಿರುತ್ತಿದ್ದರು. ಈಗ ಎಲ್ಲದಕ್ಕು ಮಿಕ್ಸಿ, ಕುಕ್ಕರ್, ಗ್ರೈಂಡರ್, ವಾಷಿಂಗ್ಮಿಷನ್ ಬಳಸುತ್ತಿರುವುದರಿಂದ ದೇಹಕ್ಕೆ ಕೆಲಸವೇ ಇಲ್ಲದಂತಾಗಿ ನಾನಾ ರೀತಿಯ ಕಾಯಿಲೆಗಳಿಗೆ ಮಾನವ ತುತ್ತಾಗುತ್ತಿದ್ದಾನೆ. ಹಾಗಾಗಿ ಯೋಗವನ್ನು ಯಾರು ನಿರ್ಲಕ್ಷೆ ಮಾಡದೆ ಅಭ್ಯಾಸ ಮಾಡಿ ಎಂದು ಕರೆ ನೀಡಿದರು.ಕೋಟೆ ವಾಯುವಿಹಾರಿಗಳ ಸಂಘದ ಗೌರವಾಧ್ಯಕ್ಷ ಜಯಣ್ಣ, ನಿರ್ದೇಶಕರುಗಳಾದ ಕೂಬಾನಾಯ್ಕ, ನರಸಿಂಹಪ್ಪ, ವಿ.ಚನ್ನಬಸಪ್ಪ ವೇದಿಕೆಯಲ್ಲಿದ್ದರು.
ಕೋಟೆ ವಾಯುವಿಹಾರಿಗಳ ಸಂಘದ ಮಹಿಳಾ ನಿರ್ದೇಶಕಿಯರುಗಳಾದ ಲತ, ರತ್ನಮ್ಮ ಇನ್ನು ಮುಂತಾದವರು ಉಚಿತ ಯೋಗ ಪ್ರಾಣಾಯಾಮ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
