ಬೆಂಗಳೂರು
ಸ್ನೇಹಿತನ ಜೊತೆ ಮಾತನಾಡುತ್ತ ನಿಂತಿದ್ದ ರೌಡಿ ಸಲೀಂ ಅಲಿಯಾಸ್ ಚಟ್ನಿ ಸಲೀಂ ಮೇಲೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು ಗುಂಡೇಟು ತಗುಲಿ ಚಟ್ನಿ ಸಲೀಂ ಹಾಗೂ ವೈದ್ಯರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ದುಷ್ಕರ್ಮಿಗಳು ಹಾರಿಸಿದ ನಾಲ್ಕು ಸುತ್ತು ಗುಂಡುಗಳಲ್ಲಿ ಎರಡು ಗುಂಡುಗಳು ತಗುಲಿರುವ ಬಿಎಂ ಲೇಔಟ್ನ ಚಟ್ನಿ ಸಲೀಂ ಅಲ್ಲದೆ, ಹತ್ತಿರದಲ್ಲೇ ಕ್ಲಿನಿಕ್ ನಡೆಸುತ್ತಿದ್ದ ಡಾ. ಬಷೀರ್ ಗಾಯಗೊಂಡಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಟ್ನಿ ಸಲೀಂ ಸ್ಥಿತಿ ಚಿಂತಾಜನಕವಾಗಿದ್ದು, ಪೃಷ್ಠಕ್ಕೆ ಗುಂಡೇಟು ತಗುಲಿರುವ ಡಾ. ಬಷೀರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪರಾಧ ಚಟುವಟಿಕೆಗಳಿಂದ ಕಳೆದ ಕೆಲ ವರ್ಷಗಳಿಂದ ದೂರಉಳಿದಿದ್ದ ಚಟ್ನಿ ಸಲೀಂ, ಹಾಲಾ ಎನ್ನುವ ಚಿಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಹಣಕಾಸು ವ್ಯವಹಾರಗಳನ್ನು ಬಗೆಹರಿಸಿಕೊಡುತ್ತಿದ್ದ ಚಟ್ನಿ ಸಲೀಂ ರಾತ್ರಿ 11.30ರ ವೇಳೆ ಬಿಎಂ ಲೇಔಟ್ನ ಮನೆಗೆ ಹತ್ತಿರದ ರಸ್ತೆಯಲ್ಲಿ ಸ್ನೇಹಿತ ಜಾಫರ್ ಜೊತೆ ಮಾತನಾಡುತ್ತ ನಿಂತಿದ್ದರು. ಈ ವೇಳೆ ಎರಡು ಬೈಕ್ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳಲ್ಲಿ ಓರ್ವ, ಚಟ್ನಿ ಸಲೀಂ ಮೇಲೆ ನಾಲ್ಕು ಸುತ್ತು ಗುಂಡುಹಾರಿಸಿದ್ದಾನೆ.
ಒಂದು ಗುಂಡು ಬಲಗೈಗೆ, ಮತ್ತೊಂದು ಗುಂಡು ಕಿಬ್ಬೊಟ್ಟೆಗೆ ತಗುಲಿ ಚಟ್ನಿ ಸಲೀಂ ಕುಸಿದುಬಿದ್ದರೆ, ಬಲಗೈಗೆ ತಾಗಿಹೋದ ಗುಂಡು ಹಿಂದೆ ಬರುತ್ತಿದ್ದ ಡಾ. ಬಷೀರ್ ಅವರ ಪೃಷ್ಠಕ್ಕೆ ತಗುಲಿ ಕುಸಿದುಬಿದಿದ್ದಾರೆ. ಮತ್ತೊಂದು ಗುಂಡು ಗಾಳಿಯಲ್ಲಿ ಹಾರಿದೆ. ಗುಂಡು ಹಾರಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡ ಇಬ್ಬರನ್ನೂ ಸ್ಥಳೀಯರು, ಪೆÇಲೀಸರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಟ್ನಿ ಸಲೀಂ ಸ್ಥಿತಿ ಗಂಭೀರವಾಗಿರುವುದರಿಂದ ದುಷ್ಕರ್ಮಿಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ.ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೆಜಿ ಹಳ್ಳಿ ಪೆಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಳೆಯ ದ್ವೇಷ ಇಲ್ಲವೆ, ಹಣಕಾಸಿನ ಕಾರಣಕ್ಕಾಗಿ ಚಟ್ನಿ ಸಲೀಂ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕೃತ್ಯ ನಡೆಸಿರುವವರ ಸುಳಿವು ಪತ್ತೆಯಾಗಿದ್ದು, ಆದಷ್ಟು ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಪುರವಾಡ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








