ತಿಪಟೂರು
ಸ್ವತಂತ್ರ ಭಾರತದ ಈಗಿನ ಪ್ರಧಾನಿ ಮೋದಿ ದೇಶಕಂಡ ಮಹಾನ್ ಸುಳ್ಳುಗಾರ ಎಂದು ಜಿ.ಪರಮೇಶ್ವರ್ ಟೀಕಿಸಿದರು.
ನಗರದ ಗುರುಲೀಲಾ ಕಲ್ಯಾಣ ಮಂದಿರದಲ್ಲಿ ಸೋಮವಾರ ನಡೆದ ಲೋಕಸಭಾ ಚುನಾವಣಾ ಪ್ರಚಾರ ನಿಮಿತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜನರ ಮುಂದೆ ಪ್ರಧಾನಿ ಮೋದಿ ಕ್ಷಮೆ ಯಾಚಿಸಬೇಕು. ಕಳೆದ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಜನರಿಗೆ ಮಂಕುಬುದಿ ಎರಚಿದ್ದು ಮೋದಿ ಸಾಧನೆಯಾಗಿದೆ.
ಐದು ವರ್ಷದಿಂದ ಒಂದು ರೂಪಾಯಿ ಕಪ್ಪು ಹಣ ತಂದಿಲ್ಲಾ, ಯಾವುದೇ ಉದ್ಯೋಗ ನೀಡದೆ ಸುಳ್ಳು ಹೇಳಿ ಯುವಕರ ಭವಿಷ್ಯ ಹಾಳು ಮಾಡಿದರು, ಜಿಲ್ಲೆಯ ಅಭಿವೃದ್ಧಿಯಾಗಬೇಕಾದರೆ ದೇವೆಗೌಡರು ಲೋಕಸಭೆಗೆ ಜಿಲ್ಲೆಯಿಂದ ಪ್ರವೇಶಿಸಿಲು ಎರಡು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಬಂದ ಮೇಲೆ ನಮ್ಮ ಮುಖ್ಯಮಂತ್ರಿಗಳು 46 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ನಮ್ಮ ಸರಕಾರ ರೈತರ ಬಡವರ ಪರವಿದ್ದು ಹಗಲಿರುಳು ಶ್ರಮಿಸುತ್ತಿದೆ. ಆದರೆ ಕೇಂದ್ರ ಸರಕಾರ ಕೇವಲ ದೊಡ್ಡ ಉದ್ದಿಮೆಗಳ ಪರವಾಗಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಜಿ.ಎಸ್.ಬಸವರಾಜು 3 ಬಾರಿ ಜಿಲ್ಲೆಯಿಂದ ಆಯ್ಕೆಯಾಗಿದ್ದರೂ ಜಿಲ್ಲೆಯನ್ನು ಎಳ್ಳಷ್ಟು ಅಭಿವೃದ್ಧಿ ಮಾಡದೆ ತಮ್ಮ ಕುಟುಂಬವನ್ನು ಅಭಿವೃದ್ಧಿ ಮಾಡಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡರನ್ನು ಜಿಲ್ಲೆಯಿಂದ ಗೆಲ್ಲಿಸಿದರೆ ಜಿಲ್ಲೆಗೆ ಕೀರ್ತಿ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಂ.ಎಲ್.ಸಿ.ಗಳಾದ ಕಾಂತರಾಜು, ಚೌಡರೆಡ್ಡಿ, ಮಾಜಿ ಶಾಸಕರಾದ ಎಂ.ಟಿ. ಕೃಷ್ಣಪ್ಪ, ಎಂ.ಡಿ. ಲಕ್ಷ್ಮಿನಾರಾಯಣ್ , ಕೆ.ಷಡಕ್ಷರಿ, ಸುರೇಶ್ ಬಾಬು, ಜೆ.ಡಿ.ಎಸ್ ಮುಖಂಡ ಲೋಕೇಶ್ವರ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
