ಬೆಂಗಳೂರು:
ರಾಜ್ಯಕ್ಕೆ ಸಲ್ಲಬೇಕಾದ ಜಿಎಸ್ಟಿ ಬಾಕಿ ಉಳಿಸಿಕೊಂಡಿರುವ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಸೇರಿ ಜನಸಾಮಾನ್ಯರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ನಾಯಕರು ರಾಜ್ಯದ ಜಿಎಸ್ಟಿ ಪಾಲು ನೀಡದೇ ಇರುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಕೊರೊನಾ ನೆಪ ಹೇಳಿ ರಾಜ್ಯದ ಹಕ್ಕನ್ನು ನೀಡಲು ಹೀಂದೇಟು ಹಾಕುವುದು ಸರಿಯಲ್ಲ ಎಂದು ಆಗ್ರಹಿಸಿದ್ದರು. ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿಕೆಶಿ, ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಪಾಲಿನ ಜಿಎಸ್ಟಿ ಬಾಕಿ ಬಿಡುಗಡೆ ಮಾಡದೇ ಆರ್ಬಿಐನಿಂದ ಸಾಲ ಪಡೆಯಲು ಸಲಹೆ ನೀಡಿದ್ದು ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಲ್ಲವೇ? ಒಂದು ದೇಶ ಒಂದು ತೆರಿಗೆ’ ಎಂಬ ಭರವಸೆ ನೀಡಿ ಈಗ ನಮ್ಮ ಪಾಲಿನ ಹಣ ನೀಡದೇ ಸಾಲ ಮಾಡಿ ಎನ್ನುವುದು ರಾಜ್ಯಕ್ಕೆ ಬಗೆದ ದ್ರೋಹವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಡಿಕೆ ಶಿವಕುಮಾರ್, ಕೊರೊನಾ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ 71.61% ಜಿಎಸ್ಟಿ ಸಂಗ್ರಹವಾಗಿದೆ. ಆದರೂ ನರೇಂದ್ರ ಮೋದಿ ಸರ್ಕಾರ ₹13,764 ಕೋಟಿ ಬಾಕಿ ಉಳಿಸಿಕೊಂಡಿರುವುದೇಕೆ? ಈ ಬಾಕಿ ಜನವರಿ ವರೆಗೆ ₹27,000 ಕೋಟಿಗೆ ಏರಿಕೆಯಾಗಲಿದೆ. ರಾಜ್ಯದ ಜನತೆಯ ಮೇಲೆ ಇಷ್ಟು ದೊಡ್ಡ ಮೊತ್ತದ ಆರ್ಥಿಕ ಹೊರೆ ಹೊರೆಸಲು ಕೇಂದ್ರ ಸರ್ಕಾರಕ್ಕೆ ಯಾವ ಅಧಿಕಾರವಿದೆ? ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/05/DKS4_EPS_.gif)