ಹರಪನಹಳ್ಳಿ
ಆವಿಷ್ಕಾರದ ಜಗತ್ತಿನಲ್ಲಿ ಮುಂದುವರೆದಿದ್ದರೂ ಸಹ ಧರ್ಮದಲ್ಲಿ ನಂಬಿಕೆ ಇಟ್ಟವರು ಭಾರತೀಯರು ಎಂದು ತೆಗ್ಗಿನಮಠ ಸಂಸ್ಥಾನದ ಷ.ಬ್ರ.ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಅವರು ಪಟ್ಟಣದ ಕಾಶಿಸಂಗಮೇಶ್ವರ ಬಡಾವಣೆಯಲ್ಲಿ 8ನೇ ವರ್ಷದ ಶ್ರೀ ಗವಿಸಿದ್ದೇಶ್ವರರ ರಥೋತ್ಸವ, ಶ್ರೀ ಕಾರ್ತಿಕೋತ್ಸವದ ನಿಮಿತ್ತಾ ಶುಕ್ರವಾರ ಸಂಜೆ ನಡೆದ ಧರ್ಮ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಜ್ಞಾನಿಯ ಶೋಧನೆಯ ಹಿಂದೆ ಇನ್ನೊಬ್ಬ ವಿಜ್ಞಾನಿಯ ಶೋಧನೆಯ ಆಧಾರದ ಮೇಲೆ ಸಂಶೋಧನೆಯು ಅವಲಂಭಿತವಾಗಿರಬೇಕಾದರೆ ನಮ್ಮ ಮಕ್ಕಳಿಗೆ ಸಂಸ್ಕಾರವು ಸಹ ನಮ್ಮ ಪೂರ್ವಜರ ಸಂಸ್ಕಾರದ ಮೇಲೆ ನಿರ್ಧಾರವಾಗಿರುತ್ತದೆ ಎಂದರು.
ವೀರಶೈವ ಮಠಗಳು ಜನರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವಂತಹ ಕಾರ್ಯವನ್ನು ಮಾಡುತ್ತಿವೆ. ಆಧ್ಯಾತ್ಮೀಕವಾಗಿ ಧಾರ್ಮಿಕವಾಗಿ ಮಾರ್ಗದರ್ಶನ ಮಾಡುತ್ತಾ ಧರ್ಮದ ತಿರುಳನ್ನು ಮುಟ್ಟಿಸುವಲ್ಲಿ ಸಹಕಾರಿಯಾಗಿವೆ ಎಂದ ಅವರು ಸಾಧು ಸಂತರು ಮಹಾಂತರು ಕನ್ನಡ ನಾಡನ್ನು ತಮ್ಮ ತ್ಯಾಗ ವೈರಾಗ್ಯದಿಂದ ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.
ಹರಿಯುವ ನದಿ, ಕಾಮಧೇನುವಾದ ಆಕಳು, ಹಸಿವನುಣಿಸುವ ಹಣ್ಣಿನ ಮರಗಳು ಹೇಗೆ ಸಮಾಜೋಪಕಾರಿಯಾಗಿ ಬದುಕುತ್ತಿವೆಯೋ ಹಾಗೆ ಈ ಭೂಲೋಕದಲ್ಲಿ ಜನಿಸಿ ಬಂದ ನಾವು ಸಮಾಜೋಪಕಾರಿಯಾಗಿ ನಾಡಿಗೆ, ದೇಶಕ್ಕೆ, ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬುದನ್ನು ಯಾರು ಮರೆಯುವಂತಿಲ್ಲ. ಜೀವನದ ಜಂಜಾಟ ಎಷ್ಟಿದ್ದರೂ ಸಹ ನಮ್ಮ ಬಿಡುವಿನ ವೇಳೆಯಲ್ಲಿ ಸತ್ ಚಿಂತನೆ ಸತ್ ಕರ್ಮಗಳಲ್ಲಿ ನಿರತರಾದಾಗ ಮಾತ್ರ ಮನಸ್ಸಿಗೆ ನೆಮ್ಮದಿ ಸಿಗಲು ಸಾಧ್ಯ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಹಾಗೂ ಅಕ್ಷರ ಸೀಡ್ಸ್ ಮಾಲೀಕರಾದ ಅರಸಿಕೇರಿ ಎನ್.ಕೊಟ್ರೇಶ್ರವರಿಗೆ ಅವರಿಗೆ ಶ್ರೀ ಕಾಶಿಸಂಗಮೇಶ್ವರ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವಶಿವಯೋಗಿ ಸ್ವಾಮೀಜಿ ಮಾತನಾಡಿದರು. ಡಾ.ಹಿರಿಶಾಂತವೀರ ಸ್ವಾಮೀಜಿ, ಮೈನಳ್ಳಿ ಸಿದ್ದೇಶ್ವರ ಶಿವಾಚಾರ್ಯ, ಹಂಪಸಾಗರ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಸ್ವಾಮೀಜಿ, ಸಾನಿಧ್ಯವಹಿಸಿದ್ದರು. ಸುವರ್ಣ ಅರುಂಡಿ ನಾಗರಾಜ್, ಸಹಾಯಕ ನಿರ್ದೇಶಕ ಆನಂದ ವೈ.ಡೊಳ್ಳಿನ, ಪಂಡಿತ ಪಂಚಾಕ್ಷರಿ ಶಾಸ್ತ್ರಿ, ಮಾಜಿ ಪುರಶಬೆ ಅಧ್ಯಕ್ಷ ಎಂ.ರಾಜಶೇಖರ್, ಸಮಾಜಸೇವಕಿ ಎಚ್.ಎಂ.ಲಲಿತಮ್ಮ, ಸಾವಿತ್ರಮ್ಮ ಮಂಜುನಾಥ, ಪ್ರತಿಮಾ ಎಂ.ಗುರುಬಸವರಾಜ, ಎಚ್.ಎಂ.ಪಟ್ಟದಯ್ಯ, ನಜೀರ್ಸಾಹೇಬ್, ಗುಡಿಹಾಲಪ್ಪ, ಚನ್ನಬಸಪ್ಪ, ಎ.ಜಿ.ಚನ್ನಪ್ಪ, ವೀರೇಶ್ ಇಟಿಗಿ, ವಿನೋದ ಬಸವರಾಜ್ ಸೇರಿದಂತೆ ಇತರರಿದ್ದರು.
ಗವಿಸಿದ್ದೇಶ್ವರರ ವೈಭವದ ರಥೋತ್ಸವ: ಪಟ್ಟಣದ ಕಾಶಿ ಸಂಗಮೇಶ್ವರ ಮಠದ ಆವರಣದಲ್ಲಿ 8ನೇ ವರ್ಷದ ಶ್ರೀ ಗವಿಸಿದ್ದೇಶ್ವರ ರಥೋತ್ಸವ ಸಂಬ್ರಮ, ಸಡಗರದಿಂದ ರಾತ್ರಿ ಜರುಗಿತು. ಮಠದ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಚೌಡೇಶ್ವರಿ ದೇವಿಗೆ ಉಡಿ ತುಂಬುವ ಧಾರ್ಮಿಕ ಕಾರ್ಯ ಜರುಗಿತು. ನಂತರ ಮಹಿಳೆಯರಿಗೆ ಉಡಿ ತುಂಬಲಾಯಿತು. ಶ್ರೀ ಕಾಶಿಶಿವಲಿಂಗೇಶ್ವರ, ಸಂಗಮೇಶ್ವರರ ಮಹಾಧ್ವಾರ ಹಾಗೂ ಗವಿಸಿದ್ದೇಶ್ವರ ಅತಿಥಿಗಳ ನಿವಾಸ ಉದ್ಘಾಟನೆಯನ್ನು ನೇರವೇರಿಸಲಾಯಿತು.
ಸಂಜೆ 6.30ಕ್ಕೆ ಸ್ವಾಮಿಯ ರುದ್ರಾಕ್ಷಿ ಮಾಲೆ ಹಾಗೂ ಸ್ವಾಮಿ ಪಟಾಕ್ಸಿ ಹರಾಜು ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆಯೇ ಸಕಲ ವಾದ್ಯಗಳೊಂದಿಗೆ ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು. ನಂತರ ದೇವಸ್ಥಾನದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ತಿಕೋತ್ಸವ ಜರುಗಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
