ದಾವಣಗೆರೆ :
ಹಿಂದೂ ನಾವೆಲ್ಲಾ ಒಂದು ಎಂಬುದಾಗಿ ಹೇಳುವ ಪೇಜಾವರ ಸ್ವಾಮೀಜಿ, ಮೊದಲು ಅವರಲ್ಲಿರುವ ಮೇಲ್ಪಂಕ್ತಿ, ಜಾತೀಯತೆ, ಮತೀಯವಾದಗಳನ್ನು ಬಿಡಲಿ ಎಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀಗುರುಬಸವ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಇಲ್ಲಿನ ಗಾಂಧಿನಗರದಲ್ಲಿ ಶ್ರೀಗುರು ರಾಮದಾಸ ಸ್ವಾಮಿ ಆಧ್ಯಾತ್ಮ ಮಂದಿರ ಟ್ರಸ್ಟ್ ಆಶ್ರಯದಲ್ಲಿ 29ನೇ ವರ್ಷದ ಶ್ರೀಗುರು ಮಾದಾರ ಚನ್ನಯ್ಯಸ್ವಾಮಿಯವರ ಜಯಂತ್ಯುತ್ಸವ, ರಾಮದಾಸರ 63ನೇ ವರ್ಷದ ಮತ್ತು ಮಲ್ಲಯ್ಯ ಶ್ರೀಗಳ 18ನೇ ವರ್ಷದ ಹಾಗೂ ಕೊಂಡಯ್ಯ ಶ್ರೀಗಳ 14ನೇ ವರ್ಷದ ಪುಣ್ಯಸ್ಮರಣೆ ಏರ್ಪಡಿಸಿದ್ದ 29ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಪೇಜಾವರ ಸ್ವಾಮೀಜಿ ಹೇಳ್ತಾರೆ ಹಿಂದೂ ನಾವಲ್ಲಾ ಒಂದು ಎಂಬುದಾಗಿ. ಆದರೆ, ಅವರು ಹರಳ್ಳಯ್ಯ, ಮಾದರ ಚನ್ನಯ್ಯರ ಪರಂಪರೆ ಇರುವವರ ಎಷ್ಟು ಮನೆಗಳಿಗೆ ಹೋಗಿದ್ದಾರೆ? ಸಾಮೂಹಿಕವಾಗಿ ಭಾಗವಹಿಸಿದ್ದಾರೆಂದು ಪ್ರಶ್ನಿಸಿದ ಅವರು, ಲಿಂಗಾಯತರನ್ನು ಹಿಂದೂ ಧರ್ಮದಿಂದ ಬೇರೆಯಾಗಲು ಬಿಡುವುದಿಲ್ಲ ಎನ್ನುವ ಪೇಜಾವರ ಸ್ವಾಮೀಜಿ ಬ್ರಾಹ್ಮಣರಲ್ಲಿರುವ ಉಪ ಪಂಗಡಗಳನ್ನು ಒಂದು ಮಾಡಲಿ ಹಾಗೂ ಅವರಲ್ಲಿರುವ ಮೇಲ್ಪಂಕ್ತಿ, ಜಾತೀಯತೆ, ಮತೀಯವಾದಗಳನ್ನು ಬಿಟ್ಟು ಮನುಷ್ಯತ್ವವನ್ನು ಮೊದಲು ರೂಢಿಸಿಕೊಳ್ಳಲಿ ಎಂದರು.
ಯಾರಿಗೂ ಕೂಡ ಜಾತಿ ಮುಖ್ಯವಾಗಬಾರದು. ಬದಲಿಗೆ ಪ್ರೀತಿ-ಮನುಷ್ಯತ್ವ ಮುಖ್ಯವಾಗಬೇಕೆಂದು ಹೇಳಿದ ಶ್ರೀಗಳು, ಒಬ್ಬ ಮಾನವ-ಒಬ್ಬ ದೇವರು ಎಂಬ ಕಲ್ಪನೆ ಬಂದಾಗ ಮಾತ್ರ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಸಮಾನತೆಯನ್ನು ಸ್ಥಾಪಿಸಲು ಮುಂದಾಗುವ ಮೂಲಕ ನಿಜವಾದ ಜಾತ್ಯಾತೀತ ನಾಯಕರಾಗಿ ಹೊರಹೊಮ್ಮಿದ್ದರು ಎಂದು ಸ್ಮರಿಸಿದರು.
ವೈದಿಕ ಆಡಂಬರತನ ಇಲ್ಲದ ಮದುವೆ ದೇಶಕ್ಕೆ, ನಾಡಿಗೆ ಹಾಗೂ ಕುಟುಂಬಕ್ಕೆ ಒಳ್ಳೆಯದಾಗಿದೆ. ಆಡಂಬರ ಹಾಗೂ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ನಡೆಯುವ ಸರಳ ಸಾಮೂಹಿಕ ವಿವಾಹಗಳು ಆದರ್ಶ ಮದುವೆಗಳಾಗಿವೆ. ಇಂತಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದು ನಿಜಕ್ಕೂ ಸಾರ್ಥಕ ಬದುಕು ಬದುಕುತ್ತಾರೆಂದು ಹೇಳಿದರು.
ಪ್ರತಿಯೊಬ್ಬರೂ ಆರ್ಥಿಕ ಸುಭದ್ರತೆ ಸಾಧಿಸುವುದರ ಜತೆಗೆ ಆರ್ಥಿಕ ತಳಹದಿಯ ಮೇಲೆ ನಿಲ್ಲಲು ಇಂತಹ ಸಾಮೂಹಿಕ ವಿವಾಹಗಳು ಸಹಕಾರಿಯಾಗಿವೆ. ವೈದಿಕ ಆಚರಣೆಗಳಿಗಿಂತ ವೈಚಾರಿಕ ಪ್ರಜ್ಞೆಗೆ ಆದ್ಯತೆ ನೀಡಲು ಸಾಮೂಹಿಕ ಕಲ್ಯಾಣಕ್ಕೆ ಒತ್ತು ನೀಡಬೇಕು. ಇಲ್ಲಿ ಗರಹಸ್ಥಾಶ್ರಮಕ್ಕೆ ಕಾಲಿಸಿರುವ ಸತಿ-ಪತಿಗಳ ಮನಸ್ಸು ಒಂದಾದಾಗ ಮಾತ್ರ ಎರಡೂ ಮನೆತನಗಳು ಒಂದಾಗಲು ಸಾಧ್ಯ ಎಂದರು.
ಚಿತ್ರದುರ್ಗದ ಶ್ರೀಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, 29 ವರ್ಷಗಳಿಂದ ಸರಳ ಸಾಮೂಹಿಕ ಕಲ್ಯಾಣ ನಡೆಸಿಕೊಂಡು ಬಂದಿರುವ ವೀರಭದ್ರಪ್ಪ, ರಾಮಸ್ವಾಮಿ ಸೇರಿದಂತೆ ಹಲವರ ಕಾರ್ಯ ನಿಜಕ್ಕೂ ಮಠ-ಮಾನ್ಯಗಳನ್ನು ಹೊರತು ಪಡೆಸಿದರೆ, ಸಂಘ-ಸಂಸ್ಥೆಗಳು ಮಾಡು ಐತಿಹಾಸಿಕ ದಾಖಲೆಯಾಗಿದೆ. ಹಿಡಿದ ಕೆಲಸವನ್ನು ಛಲ ಬಿಡದೇ ಮಾಡಬೇಕಾದರೆ, ಇಚ್ಛಾಸಕ್ತಿ ಹಾಗೂ ಸಾಮೂಹಿಕ ಪ್ರಯತ್ನ ಅತ್ಯವಶ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು, ವೈದ್ಯ ಡಾ.ರವಿ ಮತ್ತಿತರರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮೇಯರ್ ಶೋಭಾ ಪಲ್ಲಾಗಟ್ಟೆ, ಪಾಲಿಕೆ ಸದಸ್ಯ ಎಂ.ಹಾಲೇಶ್, ಪೌರ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಂ.ಹನುಮಂತಪ್ಪ, ಜಿಲ್ಲಾ ಕಾರ್ಯದರ್ಶಿ ಎನ್.ನೀಲಗಿರಿಯಪ್ಪ, ರಾಮದಾಸಸ್ವಾಮಿ ಆಧ್ಯಾತ್ಮ ಮಂದಿರದ ಪದಾಧಿಕಾರಿಗಳಾದ ಬಿ.ಹೆಚ್.ವೀರಭದ್ರಪ್ಪ, ಬಿ.ಎಂ.ರಾಮಸ್ವಾಮಿ, ಬಿ.ಎಂ.ಈಶ್ವರ್, ಬೆಳ್ಳೂಡಿ ದುಗ್ಗಪ್ಪ, ಬಿ. ಗಂಗಾಧರ, ಡಿ.ಎನ್. ದಿನೇಶ್, ಚೌಡಕೆರ ನೀಲಕಂಠಪ್ಪ, ಮಂಜುನಾಥ ಬಿ.ಆರ್., ಎನ್. ಉಚ್ಚೆಂಗೆಪ್ಪ, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
