ಚಿತ್ರದುರ್ಗ:
ಎಸ್.ಎಸ್.ಎಲ್.ಸಿ.ನಂತರ ಮುಂದಿನ ಶಿಕ್ಷಣಕ್ಕೆ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಸ್ವತಂತ್ರವನ್ನು ಮಕ್ಕಳಿಗೆ ಬಿಡಿ. ಯಾವ ಕಾರಣಕ್ಕೂ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ಪ್ರಿಯಾ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಎಲ್.ಸಿ.ನಂತರ ಮುಂದೇನು? ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳ ಕುರಿತು ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಮಕ್ಕಳ ಜೀವನದಲ್ಲಿ ಮಹತ್ತರ ತಿರುವು ಪಡೆದುಕೊಳ್ಳುವ ಸಂದರ್ಭವಾಗಿರುವುದರಿಂದ ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎನ್ನುವುದನ್ನು ಪೋಷಕರು ತಿಳಿದುಕೊಂಡು ಅದಕ್ಕೆ ತಕ್ಕಂತೆ ಉತ್ತೇಜನ ನೀಡಬೇಕು. ಅದನ್ನು ಬಿಟ್ಟು ಪಿ.ಸಿ.ಎಂ.ಬಿ.ವಿಷಯವನ್ನೇ ಆಯ್ಕೆ ಮಾಡಿಕೊಂಡು ಡಾಕ್ಟರ್, ಇಂಜಿನಿಯರ್ಗಳೇ ಆಗಬೇಕೆಂದು ಪಟ್ಟು ಹಿಡಿಯುವುದು ಸರಿಯಲ್ಲ.
ಕೆಲವು ವಿದ್ಯಾರ್ಥಿಗಳಿಗೆ ಗಣಿತ ಕಷ್ಟವಾಗಬಹುದು. ಇನ್ನು ಕೆಲವರಿಗೆ ಜೀವಶಾಸ್ತ್ರದಲ್ಲಿ ಆಸಕ್ತಿ ಇರುವುದಿಲ್ಲ. ಯಾವ ವಿಷಯವೂ ಕೀಳಲ್ಲ ಎನ್ನುವುದನ್ನು ಮೊದಲು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಉತ್ತೀರ್ಣರಾದ ಮೇಲೆ ಪೋಷಕರು ಸರಿಯಾಗಿ ಆಲೋಚಿಸಿ ಮಕ್ಕಳಿಗೆ ಉಪಯುಕ್ತವಾಗುವಂತೆ ಮಾರ್ಗದರ್ಶನ ನೀಡುವುದು ಸೂಕ್ತ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಗಳಿವೆ ಎನ್ನುವುದು ನಮಗೂ ಗೊತ್ತಿದೆ. ಹಳ್ಳಿಗಾಡಿನಿಂದ ನಗರ ಮತ್ತು ತಾಲೂಕು, ಹೋಬಳಿ ಪ್ರದೇಗಳಿಗೆ ಹೋಗಿ ಶಿಕ್ಷಣ ಪಡೆಯಲು ಕಷ್ಟವಾಗುತ್ತದೆ. ಸವಾಲುಗಳು ಏನೆ ಇರಲಿ ಎಲ್ಲವನ್ನು ಎದುರಿಸಿ ಶಿಕ್ಷಣದ ಕಡೆ ಹೆಚ್ಚಿನ ಗಮನ ಕೊಟ್ಟು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ.
ಎಸ್.ಎಸ್.ಎಲ್.ಸಿ.ನಂತರ ದ್ವೀತಿಯ ಪಿ.ಯು.ಸಿ.ಯಲ್ಲಿ ಎರಡು ವರ್ಷ ಕಷ್ಟಪಟ್ಟು ಅತ್ಯುನ್ನತ ಶ್ರೇಣಿಯಲ್ಲಿ ಪಾಸ್ ಆದರೆ ಜೀವನವಿಡಿ ನೆಮ್ಮದಿಯಿಂದ ಇರಬಹುದು ಎಂದು ತಿಳಿಸಿದರು. ಕೆಲವು ಮಕ್ಕಳು ಪೋಷಕರೊಂದಿಗೆ ಹಬ್ಬ ಹರಿದಿನ ಜಾತ್ರೆಗಳಿಗೆ ಹೋದರೆ ಮತ್ತು ಶಾಲೆ-ಕಾಲೇಜುಗಳಿಗೆ ಬರಲು ಮಸ್ಸಿರುವುದಿಲ್ಲ. ಪೋಷಕರುಗಳು ಮಕ್ಕಳನ್ನು ಓದಿನ ಸಮಯದಲ್ಲಿ ಕೆಲಸಕ್ಕೆ ಕಳಿಸಬಾರದು. ಪಿ.ಯು.ಸಿ.ನಂತರ ಸಿ.ಇ.ಟಿ.ಕೋಚಿಂಗ್ ಕ್ಲಾಸ್ಗಳನ್ನು ಆಯೋಜಿಸಿದ್ದೇವೆ.
ಇದರ ಪ್ರಯೋಜನ ಪಡೆದುಕೊಂಡು ಸ್ವಾವಲಂಭಿಯಾಗಿ ಬದುಕುವುದನ್ನು ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದ ಜಿಲ್ಲಾಧಿಕಾರಿ ಸ್ಪರ್ಧಾತ್ಮಕ ಯುಗದಲ್ಲಿ ಒಂದೊಂದು ಅಂಕಕ್ಕೂ ಮೌಲ್ಯವಿರುವುದರಿಂದ ಪೋಷಕರು ಮಕ್ಕಳಿಗೆ ಯಾವ ವಿಷಯದ ಬಗ್ಗೆ ಆಸಕ್ತಿ ಇದೆ ಎನ್ನುವುದನ್ನು ತಿಳಿದುಕೊಂಡು ಉತ್ತೇಜನ ನೀಡಿ ಎಂದು ಮನವಿ ಮಾಡಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಮಾತನಾಡಿ ಬರದ ನಾಡು ಚಿತ್ರದುರ್ಗದ ಮಕ್ಕಳು ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ವಿಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಬರವಿದೆ. ಬರದನಾಡಿನ ಎಲ್ಲಾ ಮಕ್ಕಳು ಒಂದೊಂದು ಕಿಡಿಗಳಾಗಬೇಕು. ಜಿಲ್ಲೆಯಲ್ಲಿ ಇಬ್ಬರು ಐ.ಎ.ಎಸ್.ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಅತ್ಯಂತ ಸಂತೋಷದ ಸಂಗತಿ. ರಾಷ್ಟ್ರದಲ್ಲಿಯೇ ಐ.ಎ.ಎಸ್.ಅತ್ಯುನ್ನತ ಹುದ್ದೆ. ಶಿಕ್ಷಣಕ್ಕೆ ಪೋಷಕರುಗಳ ಬೆಂಬಲ ಬೇಕು. ಇಲ್ಲದಿದ್ದರೂ ಕೆಲವು ಪ್ರತಿಭಾವಂತರು ಉನ್ನತ ಮಟ್ಟಕ್ಕೆ ಹೋಗುತ್ತಾರೆ. ಸರ್ಕಾರಿ ಕೆಲಸಕ್ಕಾಗಿಯೇ ಶಿಕ್ಷಣ ಪಡೆಯಬೇಕು ಎನ್ನುವ ಮನೋಭಾವನೆಗಿಂತ ಜ್ಞಾನ, ತಿಳುವಳಿಕೆ, ಅರಿವಿಗೆ ಶಿಕ್ಷಣ ಮುಖ್ಯ. ದೊಡ್ಡ ಮಟ್ಟದ ಅಧಿಕಾರಿಯಾಗಬೇಕೆಂಬ ಕಿಚ್ಚು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಇರಬೇಕು. ಈಗ ಸರ್ಕಾರಿ ನೌಕರಿಯಲ್ಲಿ ಸಾಕಷ್ಟು ಏರುಪೇರುಗಳಿವೆ ಎಂದು ತಿಳಿಸಿದರು.
ಓದಿ ಸರ್ಕಾರಿ ನೌಕರಿ ಪಡೆದು ಸ್ವಂತ ಕಾಲ ಮೇಲೆ ನಿಂತು ಸ್ವಾವಲಂಭಿಯಾಗಿ ಬದುಕಲು ಶಿಕ್ಷಣ ಅತ್ಯಗತ್ಯವಾಗಿ ಬೇಕು. ಆದರೆ ಸ್ವಾಭಿಮಾನವಿಲ್ಲದ ಒಳ್ಳೆಯ ದಾರಿಯಲ್ಲಿ ಹೋಗುವುದನ್ನು ಕಲಿಸದ ಓದು ಓದಲ್ಲ. ಐ.ಎ.ಎಸ್., ಐ.ಪಿ.ಎಸ್. ಅಧಿಕಾರಿ, ಇಂಜಿನಿಯರ್, ಡಾಕ್ಟರ್ಗಳೇ ಆಗಬೇಕು ಎಂದು ಮಕ್ಕಳ ಮೇಲೆ ಪೋಷಕರು ಒತ್ತಡ ಹೇರುವುದು ಒಳ್ಳೆಯ ಲಕ್ಷಣವಲ್ಲ. ಶಿಕ್ಷಣ ಇಲಾಖೆಯ ನಲಿ-ಕಲಿ ಚಟುವಟಿಕೆ ಮೂಲಕ ಮಕ್ಕಳನ್ನು ಒತ್ತಡದಿಂದ ಮುಕ್ತಗೊಳಿಸಬೇಕು. ಎಸ್.ಎಸ್.ಎಲ್.ಸಿ.ನಂತರ ಐ.ಟಿ.ಐ.ನಲ್ಲಿ 150 ಕ್ಕೂ ಹೆಚ್ಚು ಕೋರ್ಸ್ಗಳಿವೆ. ಪ್ಯಾರಾಮೆಡಿಕಲ್, ಡಿಪ್ಲಮೋ ಕೂಡ ಇದೆ. ಮಕ್ಕಳ ಇಷ್ಟದಂತೆ ಶಿಕ್ಷಣಕ್ಕೆ ಒತ್ತು ಕೊಡಬೇಕು. ಒತ್ತಡ ಇಲ್ಲದ ವಾತಾವರಣ ಮಕ್ಕಳಿಗೆ ಕಲ್ಪಿಸುವುದು ತುಂಬಾ ಮುಖ್ಯ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿ ಎದುರಿಸಿದರೆ ಮುಂದಿನ ಪರೀಕ್ಷೆಗಳಿಗೆ ಹಾದಿ ಸುಲಭವಾಗಲಿದೆ. ಒಬ್ಬೊಬ್ಬರು ದೊಡ್ಡ ಕಿಡಿಗಳಾಗಿ ಬರದನಾಡು ಜಿಲ್ಲೆಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳನ್ನು ಹಾರೈಸಿದರು.
ಉಪನ್ಯಾಸಕರುಗಳಾದ ನಯನ, ಪ್ರತಿಭಾ ಉಪನ್ಯಾಸ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂತೋಣಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶೋಭ ವೇದಿಕೆಯಲ್ಲಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುರಳಿ ಬಸವರಾಜ್ ನಿರೂಪಿಸಿದರು.ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
